ವಿಕ ಸುದ್ದಿಲೋಕ ಶಿರಸಿ
ಮಕ್ಕಳು ಮತ್ತು ಮಹಿಳೆಯರಿಗೆ ಯಕ್ಷಗಾನ ಕಲಿಸಿ, ಈ ಕಲೆಯ ರಕ್ಷಣೆಗೆ ಶ್ರಮಿಸುತ್ತಿರುವ ಇಲ್ಲಿಯ ಯಕ್ಷ ಕಲಾ ಸಂಗಮದ ವಾರ್ಷಿಕೋತ್ಸವ ನಗರದ ರಂಗಧಾಮದಲ್ಲಿ ಬುಧವಾರ ನಡೆಯಿತು. ಸಾಧಕರಿಗೆ ಸನ್ಮಾನ, ಯಕ್ಷಗಾನ ಪ್ರದರ್ಶನದ ಮೂಲಕ ಕಾರ್ಯಕ್ರಮ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಿವೃತ್ತ ಯೋಧ ಮೇ. ಗಣಪತಿ ಹೆಗಡೆ, ‘‘ಅನಾದಿ ಕಾಲದಿಂದಲೂ ನಮ್ಮ ಪೌರಾಣಿಕ ಸಂಗತಿಗಳನ್ನು ಯುವ ಪೀಳಿಗೆಗೆ ದಾಟಿಸುವಲ್ಲಿಕಲೆ ಪ್ರಮುಖ ಪಾತ್ರ ವಹಿಸಿದೆ. ಯಕ್ಷಗಾನ ಕಲೆ ಮೂಲಕ ನಾವು ನೋಡಿದ, ಕೇಳಿದ ಪೌರಾಣಿಕ ಸಂಗತಿಗಳು ನಮ್ಮ ಜೀವನದುದ್ದಕ್ಕೂ ನೆನಪಿರುತ್ತವೆ. ಸೈನಿಕರು ಕೇವಲ ನಮ್ಮ ಗಡಿಗಳನ್ನು ಮಾತ್ರ ಕಾಯುತ್ತಿಲ್ಲ. ನಮ್ಮ ದೇಶದ ಸಂಸ್ಕೃತಿಯನ್ನು, ವೈವಿಧ್ಯತೆಯನ್ನೂ ರಕ್ಷಿಸುತ್ತಿದ್ದಾರೆ’’ ಎಂದರು.
ಇದೇ ವೇಳೆ ನಿವೃತ್ತ ಶಿಕ್ಷಕಿ, ಯಕ್ಷಗಾನ ಕಲಾಪೋಷಕಿ ತುಂಗಭದ್ರಾ ಹೆಗಡೆ ಕುಂದಾಪುರ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ತುಂಗಭದ್ರಾ ಹೆಗಡೆ, ಯಕ್ಷಗಾನದಿಂದ ಮಕ್ಕಳ ಸರ್ವತೋಮುಖ ಅಭಿವೃದ್ಧಿ ಆಗುತ್ತದೆ. ಮಾತುಗಾರಿಕೆಯ ಮೂಲದ ಮಾನಸಿಕ ಪ್ರಗತಿ, ನೃತ್ಯ ಹಾವ ಭಾವದಿಂದ ದೈಹಿಕ ಪ್ರಗತಿ ಸಾಧ್ಯವಾಗುತ್ತದೆ ಎಂದರು.
ಯಕ್ಷಗಾನ ಕಲಾವಿದ ಸುಬ್ರಾಯ ಹೆಗಡೆ, ‘‘ಯಕ್ಷಗಾನ ಗಂಡು ಕಲೆ ಹೊರತೂ ಗಂಡಸರಿಗೆ ಮಾತ್ರ ಸೀಮಿತವಾದ ಕಲೆ ಅಲ್ಲ. ಹಿಂದೆಲ್ಲಪಗಡೆ, ವೇಷ ಭೂಷಣಗಳ ತೂಕ 30 ಕೆಜಿಗೂ ಅಧಿಕವಾಗುತ್ತಿತ್ತು. ಹೀಗಾಗಿ, ಈ ವೇಷ ಭೂಷಣದೊಂದಿಗೆ ಕಲೆಯಲ್ಲಿಪಾಲ್ಗೊಳ್ಳುವುದು ಕಷ್ಟ ಎಂಬ ಕಾರಣಕ್ಕೆ ಮಹಿಳೆಯರು ಬರುತ್ತಿರಲಿಲ್ಲ’’ ಎಂದರು. ನಿವೃತ್ತ ಯೋಧ ಶ್ರೀಪಾದ ಭಟ್ ಇದ್ದರು. ಪ್ರಗತಿಪರ ಕೃಷಿ ಮಹಿಳೆ ವೇದಾ ಹೆಗಡೆ ನೀರ್ನಳ್ಳಿ ಅಧ್ಯಕ್ಷತೆ ವಹಿಸಿದ್ದರು. ಯಕ್ಷಕಲಾ ಸಂಗಮದ ಅಧ್ಯಕ್ಷೆ ಸುಮಾ ಗಡಿಗೆಹೊಳೆ ಸ್ವಾಗತಿಸಿದರು. ಕಾರ್ಯದರ್ಶಿ ಪ್ರೇಮಾ ಭಟ್ ಇದ್ದರು.
15ಎಸ್ಸಾರೆಸ್ 6
ಶಿರಸಿಯಲ್ಲಿ ಯಕ್ಷ ಕಲಾ ಸಂಗಮದಿಂದ ನಿವೃತ್ತ ಶಿಕ್ಷಕಿ, ಯಕ್ಷಗಾನ ಕಲಾಪೋಷಕಿ ತುಂಗಭದ್ರಾ ಹೆಗಡೆ ಕುಂದಾಪುರ ಅವರನ್ನು ಸನ್ಮಾನಿಸಲಾಯಿತು
