ಸಚಿವ ಎಂ.ಬಿ.ಪಾಟೀಲ್ ಅವರು ಈ ಬಗ್ಗೆ ಮಾಹಿತಿ ನೀಡುತ್ತಾ, "ಪೊಲೀಸ್ ಮತ್ತು ಸೇನಾ ಕ್ಯಾಂಟೀನ್ಗಳ ಮಾದರಿಯಲ್ಲಿಯೇ ರಾಜ್ಯ ಸರ್ಕಾರಿ ನೌಕರರಿಗೆ ನಿತ್ಯದ ಬದುಕಿಗೆ ಅಗತ್ಯವಿರುವ ಪ್ರತಿಯೊಂದು ವಸ್ತುವೂ ರಿಯಾಯಿತಿ ದರದಲ್ಲಿ ಸಿಗಬೇಕೆಂಬ ಉದ್ದೇಶದಿಂದ ಸರ್ಕಾರಿ ಸ್ವಾಮ್ಯದ ಎಂಎಸ್ಐಎಲ್ನಿಂದ ಸೂಪರ್ಮಾರ್ಕೆಟ್ ಆರಂಭಿಸುವ ಚಿಂತನೆ ಇದೆ," ಎಂದು ಹೇಳಿದರು.ರಾಜ್ಯದಲ್ಲಿ ಸುಮಾರು 6 ಲಕ್ಷ ಸರ್ಕಾರಿ ನೌಕರರಿದ್ದಾರೆ. ಅವರ ಕುಟುಂಬಗಳ ಹಿತದೃಷ್ಟಿಯಿಂದ ಇಂತಹ ಉಪಕ್ರಮವನ್ನು ಆರಂಭಿಸಲು ಚಿಂತಿಸಲಾಗಿದೆ. ಇದಕ್ಕೆ ಸಬ್ಸಿಡಿ ಅಥವಾ ತೆರಿಗೆ ವಿನಾಯಿತಿ ಪಡೆಯುವ ಬಗ್ಗೆ ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಲಾಗುವುದು. ಇಂತಹ ಸೂಪರ್ಮಾರ್ಕೆಟ್ ಮಳಿಗೆಗಳನ್ನು ತೆರೆಯುವ ಸಾಧ್ಯತೆಗಳ ಕುರಿತು ಒಂದು ತಿಂಗಳಲ್ಲಿ ವಿಸ್ತೃತ ವರದಿ ಸಲ್ಲಿಸುವಂತೆ ಎಂಎಸ್ಐಎಲ್ಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.
"ಉದ್ದೇಶಿತ ಎಂಎಸ್ಐಎಲ್ ಸೂಪರ್ಮಾರ್ಕೆಟ್ನಲ್ಲಿ ನಮ್ಮ ಸರ್ಕಾರಿ ನೌಕರರ ದಿನನಿತ್ಯದ ಬದುಕಿಗೆ ಬೇಕಾದ ದವಸ-ಧಾನ್ಯದಿಂದ ಹಿಡಿದು ಎಫ್ಎಂಸಿಜಿ (Fast-Moving Consumer Goods) ವಲಯದಲ್ಲಿ ಬರುವ ಪ್ರತಿಯೊಂದು ಪದಾರ್ಥವೂ ರಿಯಾಯಿತಿ ದರದಲ್ಲಿ ಸಿಗುವಂತಾದರೆ ಚೆನ್ನಾಗಿರುತ್ತದೆ. ಮೊದಲ ಹಂತದಲ್ಲಿ ಬೆಂಗಳೂರಿನಲ್ಲಿ 4-5 ಮಳಿಗೆಗಳನ್ನು ತೆರೆಯುವ ಆಲೋಚನೆ ಇದೆ. ನಂತರದ ದಿನಗಳಲ್ಲಿ ಜಿಲ್ಲಾ ಕೇಂದ್ರಗಳಲ್ಲೂ ಇಂತಹ ಸೌಲಭ್ಯವನ್ನು ವಿಸ್ತರಿಸಬಹುದು. ಅಧ್ಯಯನ ವರದಿ ಬಂದ ನಂತರ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು," ಎಂದು ಸಚಿವರು ವಿವರಿಸಿದರು.
ಇದರಿಂದ ಎಂಎಸ್ಐಎಲ್ನ ಚಟುವಟಿಕೆಗಳು ವಿಸ್ತಾರಗೊಂಡು, ಆದಾಯದ ಮೂಲವೂ ಸೃಷ್ಟಿಯಾಗಲಿದೆ. ಅಲ್ಲದೆ, ಲಕ್ಷಾಂತರ ಸರ್ಕಾರಿ ನೌಕರರ ಕುಟುಂಬಗಳಿಗೂ ಇದು ಪ್ರಯೋಜನವಾಗಲಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘಟನೆಗಳೊಂದಿಗೆ ಮಾತುಕತೆ ನಡೆಸುವಂತೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.
"ಎಂಎಸ್ಐಎಲ್ನ ಚಟುವಟಿಕೆಗಳು ಸದ್ಯ ಸೀಮಿತ ಪ್ರಮಾಣದಲ್ಲಿದ್ದು, ಅವುಗಳಿಗೆ ಮತ್ತಷ್ಟು ಚುರುಕು ತುಂಬಿ, ಆರ್ಥಿಕವಾಗಿ ಮತ್ತಷ್ಟು ಸದೃಢಗೊಳಿಸಬೇಕೆಂಬುದು ನಮ್ಮ ಆಲೋಚನೆ. ಇದರಿಂದ ಅಪಾರ ಸಂಖ್ಯೆಯಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ," ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

