ಗಡಿ ಕನ್ನಡಿಗರ ಅಭಿಮಾನ ಕೆಣಕಿದ ರಾಜ್ಯೋತ್ಸವ ಪ್ರಶಸ್ತಿ

Contributed byravi.gosavi@timesofindia.com|Vijaya Karnataka
Subscribe

ಬೆಳಗಾವಿಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ವಿವಾದ ಸೃಷ್ಟಿಸಿದೆ. ಜಿಲ್ಲೆಗೆ ಮೂರು ಪ್ರಶಸ್ತಿಗಳು ಮಾತ್ರ ಲಭಿಸಿವೆ. ನೈಜ ಕನ್ನಡ ಸೇವಕರನ್ನು ಕಡೆಗಣಿಸಿ, ಕನ್ನಡ ವಿರೋಧಿ ಧೋರಣೆ ತೋರಿದವರಿಗೆ ಪ್ರಶಸ್ತಿ ನೀಡಲಾಗಿದೆ. ಶಿಕ್ಷಣ ಕ್ಷೇತ್ರದ ರಾಜಕಾರಣಿ ಪತ್ನಿ ಆಯ್ಕೆ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಕನ್ನಡ ಹೋರಾಟಗಾರರು ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

severe discontent among border kannadigas over state festival awards

- ಕನ್ನಡ ಸೇವಕರ ಕಡೆಗಣನೆಗೆ ಅಸಮಾಧಾನ - ರಾಜಕಾರಣಿ ಪತ್ನಿ ಆಯ್ಕೆಗೆ ಅಪಸ್ವರ

ವಿಕ ಸುದ್ದಿಲೋಕ ಬೆಳಗಾವಿ

ಗಡಿ ಜಿಲ್ಲೆಬೆಳಗಾವಿಯಲ್ಲಿರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ವಿವಾದಕ್ಕೆ ಕಾರಣವಾಗಿದೆ. ರಾಜ್ಯದ ಅತಿ ದೊಡ್ಡ ಜಿಲ್ಲೆಗೆ ಕೇವಲ ಮೂರು ಪ್ರಶಸ್ತಿಗಳು ಘೋಷಣೆಯಾಗಿದ್ದು, ನೈಜ ಕನ್ನಡ ಸೇವಕರು ಪ್ರಶಸ್ತಿ ಪಟ್ಟಿಯಿಂದ ಹೊರಗುಳಿದಿದ್ದಾರೆಂಬ ಅಸಮಾಧಾನ ವ್ಯಕ್ತವಾಗಿದೆ. ಅದರಲ್ಲೂಕನ್ನಡ ವಿರೋಧಿ ಧೋರಣೆ ತೋರಿದವರನ್ನು ಸರಕಾರ ಪ್ರಶಸ್ತಿಗೆ ಪರಿಗಣಿಸಿದ್ದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.

ಶಿಕ್ಷಣ ಕ್ಷೇತ್ರದಲ್ಲಿಮರಾಠಾ ಮಂಡಳ ಸಮೂಹ ಸಂಸ್ಥೆ ಅಧ್ಯಕ್ಷೆ ರಾಜಶ್ರೀ ನಾಗರಾಜ್ (ಹಲಗೇಕರ್ ) ಅವರಿಗೆ ಪ್ರಶಸ್ತಿ ನೀಡಿರುವುದು ವಿವಾದ ಸೃಷ್ಟಿಸಿದೆ. ರಾಜಶ್ರೀ ಅವರು ಈ ವರೆಗೆ ಒಮ್ಮೆಯೂ ತಮ್ಮ ಸಂಸ್ಥೆಯ ಶಾಲೆ-ಕಾಲೇಜುಗಳಲ್ಲಿರಾಜ್ಯೋತ್ಸವ ಆಚರಿಸಿಲ್ಲಹಾಗೂ ನಾಡಗೀತೆ ಹಾಡಿಸಿಲ್ಲಎಂಬುದು ಕನ್ನಡಿಗರ ಆರೋಪ. ಇವರು ವಿಧಾನ ಪರಿಷತ್ ಸದಸ್ಯ ನಾಗರಾಜ್ ಯಾದವ್ ಅವರ ಪತ್ನಿ ಎಂಬ ಕಾರಣಕ್ಕೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಕರುನಾಡಿನ ಗೌರವಕ್ಕೆ ಸರಕಾರ ಕಳಂಕ ತಂದಿದೆ ಎಂದು ಕನ್ನಡ ಹೋರಾಟಗಾರರು ಕಿಡಿಕಾರಿದ್ದಾರೆ. ‘‘ಕನ್ನಡದ ಹಿತಾಸಕ್ತಿಗೆ ನಿಂತವರನ್ನು ಕಡೆಗಣಿಸಿ, ಕನ್ನಡದ ವಿರುದ್ಧ ನಿಂತವರಿಗೆ ಪ್ರಶಸ್ತಿ ನೀಡುವುದು ಕನ್ನಡ ನಾಡಿನ ಆತ್ಮಾಭಿಮಾನಕ್ಕೆ ಅವಮಾನ’’ ಎಂದು ಗಡಿಭಾಗದ ಸಾಹಿತಿಗಳು ಪ್ರತಿಕ್ರಿಯಿಸಿದ್ದಾರೆ.

ಕನ್ನಡ ಸೇವಕರ ಕಡೆಗಣನೆ:

ಕನ್ನಡದ ಕಟ್ಟಾಳುಗಳಾಗಿರುವ ಅಶೋಕ ಚಂದರಗಿ, ಬಸವರಾಜ ಜಗಜಂಪಿ, ಪ್ರೊ.ಬಿ.ಎಸ್ .ಗವಿಮಠ ಮತ್ತು ಎಲ್ .ಎಸ್ .ಶಾಸ್ತ್ರಿ ಸೇರಿದಂತೆ ನಾನಾ ಹಿರಿಯರು ಕನ್ನಡಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ, ಅವರ ಪರವಾಗಿ ಧ್ವನಿ ಎತ್ತುವ ಜನಪ್ರತಿನಿಧಿಗಳಿಲ್ಲದ ಕಾರಣ ವರ್ಷದಿಂದ ವರ್ಷಕ್ಕೆ ಅವರ ಹೆಸರು ಪ್ರಶಸ್ತಿ ಪಟ್ಟಿಯ ಹೊರಗೇ ಉಳಿಯುತ್ತಿದೆ. ರಾಜಕಾರಣಗಳಿಂದ ಲಾಬಿ ಮಾಡಿದವರಿಗೆ ನೀಡುವುದು ಪ್ರಶಸ್ತಿಯ ಮೌಲ್ಯವೇ ಕುಸಿದಂತಾಗಿದೆ ಎಂಬ ಕಳವಳ ವ್ಯಕ್ತವಾಗಿದೆ.

ಅದಲ್ಲದೆ, ದಶಕಗಳಿಂದ ಗಡಿಯಲ್ಲಿಕನ್ನಡ ನುಡಿಯ ರಕ್ಷಣೆಗೆ ಹೋರಾಡಿದ ಎಸ್ .ಎಂ. ಕುಲಕರ್ಣಿ (ಕನ್ನಡ ಚಟುವಟಿಕೆ), ಎಚ್ .ಬಿ. ಕೋಲಕಾರ (ಸಾಹಿತ್ಯ), ಡಿ.ಎಸ್ . ಚೌಗಲೆ (ರಂಗಭೂಮಿ) ಹಾಗೂ ಮಾನವ ಬಂಧುತ್ವ ವೇದಿಕೆ (ಸಂಸ್ಥೆ ವಿಭಾಗ) ಪರಿಗಣಿಸಬಹುದಾಗಿತ್ತು ಎಂದು ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಪ್ರತಿಪಾದಿಸಿದೆ. ಇದಕ್ಕೆ ಬಲರಾಮ ಮಾನೇನಟ್ಟಿ, ಶಿವಪ್ಪ ಶಮರಂತ, ಸಾಗರ ಬೋರಗಲ್ಲ, ರೋಹಿತ ಪದ್ಮನ್ನವರ, ಮಲ್ಲಪ್ಪ ಅಕ್ಷರದ, ರಮೇಶ ಸೊಂಟಕ್ಕಿ ಮತ್ತಿತರ ಕನ್ನಡ ಸಂಘಟನೆಗಳ ನಾಯಕರು ಬೆಂಬಲ ವ್ಯಕ್ತಪಡಿಸಿದ್ದಾರೆ.

---

ಸಿಎಂ, ಎಚ್ಕೆಪಿಗೆ ಪತ್ರ

ಈ ಬಗ್ಗೆ ಬೆಳಗಾವಿ ಜಿಲ್ಲಾಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಹಾಗೂ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಅಶೋಕ ಚಂದರಗಿ ಸಿಎಂ ಸಿದ್ದರಾಮಯ್ಯ ಮತ್ತು ಗಡಿ ಉಸ್ತುವಾರಿ ಸಚಿವ ಎಚ್ .ಕೆ. ಪಾಟೀಲ ಅವರಿಗೆ ಪತ್ರ ಬರೆದಿದ್ದಾರೆ. ‘‘ಬೆಳಗಾವಿಯ ಮರಾಠಾ ಮಂಡಳ ಶಿಕ್ಷಣ ಸಂಸ್ಥೆ ಕನ್ನಡ ನಾಡು, ನುಡಿ ಹಾಗೂ ಗಡಿಯ ವಿಚಾರದಲ್ಲಿಸದಾ ನಕಾರಾತ್ಮಕ ನಿಲುವು ತಾಳುತ್ತ ಬಂದಿದೆ. ಆ ಸಂಸ್ಥೆಯ ಯಾವುದೇ ನಾಮಫಲಕಗಳಲ್ಲಿಕನ್ನಡದ ಅಕ್ಷರವೂ ಕಾಣುವುದಿಲ್ಲ. ಕರ್ನಾಟಕ ರಾಜ್ಯೋತ್ಸವ ಕಾರ ್ಯಕ್ರಮ ಧಿಕ್ಕರಿಸುವ ಪರಂಪರೆ ಅವರಿಗಿದೆ. ಇಂತಹ ಸಂಸ್ಥೆಯ ಅಧ್ಯಕ್ಷೆಗೆ ಪ್ರಶಸ್ತಿ ನೀಡುವುದು ನಾಡದೇವಿ ಭುವನೇಶ್ವರಿಗೆ ಮಾಡಿದ ಅಪಮಾನ. ಹೀಗಾಗಿ, ಪ್ರಶಸ್ತಿಯ ಗೌರವ ಕಾಪಾಡುವುದಕ್ಕಾಗಿ ಅವರಿಗೆ ಪ್ರಶಸ್ತಿ ತಡೆ ಹಿಡಿಯಬೇಕು’’, ಎಂದು ಆಗ್ರಹಿಸಿದ್ದಾರೆ.

--

*ಕ್ವೋಟ್ -01

ನಾಡ ವಿರೋಧಿ ಧೋರಣೆಯ ರಾಜಶ್ರೀ ಅವರಿಗೆ ಪ್ರಶಸ್ತಿ ನೀಡುವ ಮೂಲಕ ಸರಕಾರ ಕನ್ನಡ ನಾಡಿಗೆ ಕಳಂಕ ತಂದಿದೆ. ರಾಜ್ಯೋತ್ಸವ ಪ್ರಶಸ್ತಿಗೆ ಸಂಬಂಧಿಸಿದ ನಿಯಮಾವಳಿ ಪ್ರಕಾರ 60 ವರ್ಷ ಮೇಲ್ಪಟ್ಟವರಿಗೆ ಪ್ರಶಸ್ತಿ ನೀಡಬೇಕು. ಆದರೆ, ರಾಜಶ್ರೀ ಯಾದವ್ ಅವರ ವಯಸ್ಸು ಕಡಿಮೆ ಇದೆ. ಮುಂದಿನ ದಿನಗಳಲ್ಲಿರಾಜಕಾರಣಿಗಳ ಶಿಫಾರಸು ಇದೆ ಎಂದು ಎಂಇಎಸ್ ನಾಯಕರಿಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಲು ಹಿಂಜರಿಯುವುದಿಲ್ಲ.

- ಅಶೋಕ ಚಂದರಗಿ, ಸದಸ್ಯ, ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ

(ಚಂದರಗಿ ಫೋಟೋ)

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ