ಕೆಎಸ್ ಸಿಎ ಚುನಾವಣೆ ಹಠಾತ್ ಮುಂದೂಡಿಕೆ

Contributed bymanjunath.gowda@timesgroup.com|Vijaya Karnataka

ಕೆಎಸ್‌ಸಿಎ ಆಡಳಿತಾಧಿಕಾರಿಗಳ ಚುನಾವಣೆ ಡಿಸೆಂಬರ್‌ 30ರವರೆಗೆ ಮುಂದೂಡಲಾಗಿದೆ. ಬೆಂಗಳೂರಿನ ನ್ಯಾಯಾಲಯವು ಚುನಾವಣಾ ಪ್ರಕ್ರಿಯೆಗೆ ತಾತ್ಕಾಲಿಕ ತಡೆ ನೀಡಿದೆ. ಮುಂದಿನ ವಿಚಾರಣೆ ಡಿ.16ಕ್ಕೆ ನಿಗದಿಯಾಗಿದೆ. ಈ ಕಾರಣದಿಂದ ಚುನಾವಣೆ ಮುಂದೂಡಲಾಗಿದೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ. ಮಾಜಿ ಕ್ರಿಕೆಟಿಗ ವೆಂಕಟೇಶ್‌ ಪ್ರಸಾದ್‌ ಈ ದಿಢೀರ್‌ ಮುಂದೂಡಿಕೆಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ksca election temporary stay decision to postpone

ಚುನಾವಣಾ ಪ್ರಕ್ರಿಯೆಗೆ ಸ್ಥಳೀಯ ನ್ಯಾಯಾಲಯ ತಾತ್ಕಾಲಿಕ ತಡೆ

ವಿಕ ಸುದ್ದಿಲೋಕ ಬೆಂಗಳೂರು

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ ಸಿಎ)ಯ ಆಡಳಿತಾಧಿಕಾರಿಗಳ ಚುನಾವಣಾ ಪ್ರಕ್ರಿಯೆಗಳನ್ನು ಡಿಸೆಂಬರ್ 30ರವರೆಗೆ ಹಠಾತ್ ಮುಂದೂಡಲಾಗಿದೆ. ಈ ಮೊದಲು ನವೆಂಬರ್ 30ರಂದು ಚುನಾವಣೆ ನಡೆಸಲು ನಿರ್ಧರಿಸಲಾಗಿತ್ತು.ಅಲ್ಲದೆ, ಚುನಾವಣೆಗೆ ಸ್ಪರ್ಧಿಸಿರುವವರ ಅಂತಿಮ ಅಭ್ಯರ್ಥಿಗಳ ಪಟ್ಟಿಯನ್ನು ನ.17ರಂದು ಚುನಾವಣಾಧಿಕಾರಿ ಘೋಷಿಸಬೇಕಿತ್ತು. ಆದರೀಗ ಚುನಾವಣಾ ಪ್ರಕ್ರಿಯೆಯನ್ನು ಮುಂದೂಡಲಾಗಿದೆ.

ಬೆಂಗಳೂರಿನ 14ನೇ ಹೆಚ್ಚುವರಿ ಸಿವಿಲ್ ಮತ್ತು ಸೆಷನ್ ನ್ಯಾಯಾಲಯವು ಕೆಎಸ್ ಸಿಎ ಚುನಾವಣಾ ಪ್ರಕ್ರಿಯೆಗೆ ಹಲವು ಕಾರಣಗಳಿಂದ ತಾತ್ಕಾಲಿಕವಾಗಿ ತಡೆ ನೀಡಿದ್ದು, ಮುಂದಿನ ವಿಚಾರಣೆಯನ್ನು ಡಿ.16ಕ್ಕೆ ನಿಗದಿಪಡಿಸಿದೆ. ಈ ಹಿನ್ನೆಲೆಯಲ್ಲಿ

ಚುನಾವಣೆ ನಡೆಸುವುದು ಸೂಕ್ತವಲ್ಲ. ಸದಸ್ಯರ ಅನುಮಾನ ಬಗೆಹರಿಸದೆ ಹಾಗೂ ಈ ಸಂಬಂಧ ಉದ್ಭವಿಸಿರುವ ಗೊಂದಲಗಳನ್ನು ಇತ್ಯರ್ಥಪಡಿಸದೆ ಚುನಾವಣೆ ನಡೆಸುವುದು ಸಮಂಜಸವಲ್ಲ. ಈ ಕಾರಣಕ್ಕಾಗಿ ಚುನಾವಣಾ ಪ್ರಕ್ರಿಯೆಯನ್ನು ಡಿ.30ರವರೆಗೆ ಮುಂದೂಡಲಾಗಿದೆ ಎಂದು ಕೆಎಸ್ ಸಿಎ ಚುನಾವಣಾಧಿಕಾರಿ ಪತ್ರದಲ್ಲಿಹೇಳಿದ್ದಾರೆ.

ಪ್ರಸಾದ್ ದಿಗ್ಭ್ರಮೆ: ಕೆಎಸ್ ಸಿಎ ಚುನಾವಣೆಯನ್ನು ದಿಢೀರ್ ಮುಂದೂಡಿರುವ ಕುರಿತು ಮಾಜಿ ಕ್ರಿಕೆಟಿಗ ಹಾಗೂ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ವೆಂಕಟೇಶ್ ಪ್ರಸಾದ್ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಮಾಧ್ಯಮಗಳೊಂದಿಗೆ ಸೋಮವಾರ ಮಾತನಾಡಿದ ಅವರು,‘‘ ನ.30ಕ್ಕೆ ನಡೆಯಬೇಕಿದ್ದ ಚುನಾವಣೆಯನ್ನು ಹಠಾತ್ ಮುಂದೂಡಿರುವುದು ನಮ್ಮನ್ನು ದಿಗ್ಭ್ರಮೆಗೊಳಿಸಿದೆ. ಇಲ್ಲಿಪ್ರಾಥಮಿಕ ಆದ್ಯತೆ ಕ್ರಿಕೆಟ್ ಆಗಿರಬೇಕೇ ಹೊರತು ರಾಜಕೀಯವಲ್ಲ. ನಾವು ರಾಜಕೀಯ ಕಾರಣಗಳಿಗಾಗಿ ಇಲ್ಲಿಭಾಗವಹಿಸುತ್ತಿಲ್ಲ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಉನ್ನತ ಮಟ್ಟದ ಕ್ರಿಕೆಟ್ ಅನ್ನು ಪುನರುಜ್ಜೀವನಗೊಳಿಸುವುದು, ಅಂತಾರಾಷ್ಟ್ರೀಯ ಪಂದ್ಯಗಳು ಮತ್ತು ಐಪಿಎಲ್ ಪಂದ್ಯಗಳನ್ನು ಮರಳಿ ತರುವುದು ನಮ್ಮ ಏಕೈಕ ಉದ್ದೇಶವಾಗಿದೆ,’’ ಎಂದು ತಿಳಿಸಿದರು.

ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿರುವ ವಿನಯ್ ಮೃತ್ಯುಂಜಯ, ಚುನಾವಣೆಗಳನ್ನು ನಡೆಸುವ ಜವಾಬ್ದಾರಿ ನೇರವಾಗಿ ವ್ಯವಸ್ಥಾಪನಾ ಸಮಿತಿಯ ಮೇಲಿದೆ. ಈ ವಿಳಂಬಕ್ಕೆ ಅವರು ನೇರವಾಗಿ ಜವಾಬ್ದಾರರು ಎಂದು ಹೇಳಿದರು.