ಚಿತ್ರ: ಈಶ್ವರ ಖಂಡ್ರೆ
ಕೋಟ್ಯಂತರ ವೆಚ್ಚದಲ್ಲಿನಿರ್ಮಿಸಿದ ವಿಮಾನ ನಿಲ್ದಾಣ ನಿಂತರೆ ಅನ್ಯಾಯ ಅಗಲ್ಲವೇ: ಈಶ್ವರ ಖಂಡ್ರೆ
ವಿಕ ಸುದ್ದಿಲೋಕ ಬೀದರ್
ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ, ಉಡಾನ್ ಯೋಜನೆಯಡಿ ಹೊಸದಾಗಿ ನಿರ್ಮಿಸಲಾದ ಅಥವಾ ಮೇಲ್ದರ್ಜೆಗೇರಿಸಲಾದ ಹಲವು ವಿಮಾನ ನಿಲ್ದಾಣಗಳಲ್ಲಿಕಾರ್ಯಾಚರಣೆ ಸ್ಥಗಿತವಾಗಿದ್ದು, ಇದು ಕೇಂದ್ರ ಸರಕಾರ ಮಾಡಿದ ಹಣ ದುರ್ಬಳಕೆ ಅಲ್ಲವೇ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಬೀರ್ದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ.ಬಿ. ಖಂಡ್ರೆ ಪ್ರಶ್ನಿಸಿದ್ದಾರೆ. ಮಾಜಿ ಸಂಸದ ಭಗವಂತ ಖೂಬಾ ಹೇಳಿಕೆಗೆ ತಿರುಗೇಟು ನೀಡಿರುವ ಅವರು, ಬೀದರ್ ನಾಗರಿಕ ವಿಮಾನ ನಿಲ್ದಾಣಕ್ಕೆ ಮಾಡಿದ ವೆಚ್ಚ ಕೇವಲ 20 ಕೋಟಿ ಮಾತ್ರ. ಕಾಂಗ್ರೆಸ್ ಕಾರ್ಯಕಾಲದಲ್ಲೇ ಬೀದರ್ ನಲ್ಲಿವಾಯುಪಡೆಯ ವಿಮಾನ ನಿಲ್ದಾಣ ಇತ್ತು. ಉಡಾನ್ ಅನುದಾನ ನಿಲ್ಲಿಸಿದ ಕಾರಣ ವಿಮಾನ ಯಾನ ಸ್ಥಗಿತವಾಯಿತು. ಹಾಗಾದರೆ ಹವಾಯಿ ಚಪ್ಪಲಿ ಹಾಕಿದ ಬಡವರೂ ಹವಾಯಿ ಜಹಾಜ್ ನಲ್ಲಿಪ್ರಯಾಣಿಸಬಹುದು ಎಂದು ಜಂಬ ಕೊಚ್ಚಿಕೊಳ್ಳುತ್ತಿದ್ದ ಕೇಂದ್ರ ಎನ್ ಡಿಎ ಸರಕಾರ ಬಡವರಿಗೆ ಮಾಡಿದ ದ್ರೋಹವಲ್ಲವೇ ಎಂದು ಪ್ರಶ್ನಿಸಿದ್ದಾರೆ. ಸ್ಥಗಿತಗೊಂಡಿದ್ದ ನಾಗರೀಕ ವಿಮಾನಯಾನ ಪುನಾರಂಭಿಸಲು ತಾವು ಪ್ರಯತ್ನ ಮಾಡಿದ ಫಲವಾಗಿ ಒಂದು ವರ್ಷ ಆ ಸೇವೆ ಮುಂದುವರಿಯಿತು. ಸ್ವತಃ ಮಾಜಿ ಸಂಸದರೇ ಹಲವು ಬಾರಿ ಈ ವಿಮಾನಯಾನ ಸೇವೆಯ ಪ್ರಯೋಜನ ಪಡೆದಿದ್ದಾರೆ. ಬಡವರ ಹಣ ದುರುಪಯೋಗ ಎನ್ನುವ ಅವರು ಸೇವೆ ಬಳಸಿಕೊಂಡಿದ್ದಾದರೂ ಏಕೆ ಎಂದು ತಿರುಗೇಟು ನೀಡಿದ್ದಾರೆ. ಉತ್ತರ ಪ್ರದೇಶದಲ್ಲಿಕೂಡ ಉಡಾನ್ ಅಡಿ ಆರಂಭವಾದ ಹಲವು ವಿಮಾನ ನಿಲ್ದಾಣಗಳು ಕಾರ್ಯಾಚರಣೆ ನಿಲ್ಲಿಸಿವೆ. ಅದೇ ರೀತಿ ದೇಶದ ಹಲವು ವಿಮಾನ ನಿಲ್ದಾಣಗಳಲ್ಲಿವಾಣಿಜ್ಯ ವಿಮಾನಗಳ ಹಾರಾಟ ನಿಂತು ಹೋಗಿದೆ. ಹಾಗಾದರೆ ಕೋಟ್ಯಂತರ ರೂ. ವೆಚ್ಚ ಮಾಡಿ ಕಟ್ಟಿದ ವಿಮಾನ ನಿಲ್ದಾಣಗಳ ಗತಿ ಏನು. ಅದು ಪಾಳು ಬಿದ್ದರೆ ದೇಶದ ತೆರಿಗೆದಾರರ ಹಣ ವ್ಯರ್ಥವಾಗುವುದಿಲ್ಲವೇ ಎಂದು ಪ್ರಶ್ನಿಸಿರುವ ಈಶ್ವರ ಖಂಡ್ರೆ, ಕ್ಷುಲ್ಲಕ ರಾಜಕೀಯಕ್ಕಾಗಿ ಅಭಿವೃದ್ಧಿಗೆ ಮಾರಕವಾಗುವಂತಹ ಹೇಳಿಕೆ ನೀಡುವುದನ್ನು ಭಗವಂತ ಖೂಬಾ ಇನ್ನಾದರೂ ನಿಲ್ಲಿಸಲಿ ಎಂದು ತಾಕೀತು ಮಾಡಿದ್ದಾರೆ.

