ವಿಕ ಸುದ್ದಿಲೋಕ ಸೊರಬಮಾಜಿ ಮುಖ್ಯಮಂತ್ರಿ ಎಸ್ . ಬಂಗಾರಪ್ಪ ಅವರ ಹೆಸರಿನಲ್ಲಿಅಧಿಕಾರಕ್ಕೆ ಬರುವ ಸಚಿವ ಮಧು ಬಂಗಾರಪ್ಪ ಮತ್ತು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರಿಗೆ ತಾಲೂಕನ್ನು ಅಭಿವೃದ್ಧಿಪಡಿಸುವ ಇಚ್ಛಾಶಕ್ತಿ ಇಲ್ಲಎಂದು ಬಿಜೆಪಿ ಮುಖಂಡ ಡಾ. ಎಚ್ .ಇ. ಜ್ಞಾನೇಶ್ ಆರೋಪಿಸಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿಶನಿವಾರ ಸುದ್ದಿಗೋಷ್ಠಿಯಲ್ಲಿಅವರು ಮಾತನಾಡಿ, ತಾಲೂಕಿನ ಅಭಿವೃದ್ಧಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್ . ಯಡಿಯೂರಪ್ಪ ಅವರನ್ನು ಹೊರತುಪಡಿಸಿ ಕುಮಾರ್ ಬಂಗಾರಪ್ಪ ಅವರ ಕೊಡುಗೆ ಏನೂ ಇಲ್ಲ ಎಂದು ದೂರಿದರು.
ಮಧು ಬಂಗಾರಪ್ಪ ಅವರು ಸಚಿವರಾದಾಗ ಪಟಾಕಿ ಸಿಡಿಸಿ ಸಂಭ್ರಮಿಸದಿದ್ದರೂ, ನಮ್ಮ ಕ್ಷೇತ್ರದ ಶಾಸಕರಿಗೆ ಸಚಿವ ಸ್ಥಾನ ಸಿಕ್ಕಿದೆ ಎಂದು ಸಂತೋಷಪಟ್ಟಿದ್ದೇವೆ. ಮನಸ್ಸಿಗೆ ಬಂದಾಗ ಕ್ಷೇತ್ರಕ್ಕೆ ಬಂದು ಇಲ್ಲಿಕುಣಿದು ಕುಪ್ಪಳಿಸಿ ಹಬ್ಬ ಮಾಡಿದರೆ ಯಾವ ಪ್ರಯೋಜನವೂ ಇಲ್ಲ. ಆಕಸ್ಮಿಕವಾಗಿ ದೊರೆತ ಅಧಿಕಾರವನ್ನು ಜನರ ಕಲ್ಯಾಣಕ್ಕೆ ಬಳಸಬೇಕು ಎಂದು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಕಾಂಗ್ರೆಸ್ ನಡುವೆ ಹೊಂದಾಣಿಕೆ ಇದೆ ಎಂದು ಆರೋಪಿಸುವ ಕುಮಾರ್ ಬಂಗಾರಪ್ಪ ಹಾಗೂ ಅವರ ಸಹೋದರ ಮಧು ಬಂಗಾರಪ್ಪ ನಡುವೆ ಹೊಂದಾಣಿಕೆ ಇದೆ. ಇಬ್ಬರೂ ಸಹೋದರರು ಒಂದೊಂದು ಅವಧಿಗೆ ಅಧಿಕಾರ ಹಿಡಿಯಲು ಒಪ್ಪಂದ ಮಾಡಿಕೊಂಡಿದ್ದಾರೆ. ಮೂರು ವರ್ಷಗಳಿಂದ ಕ್ಷೇತ್ರದ ಕಡೆ ತಲೆ ಹಾಕದ ಕುಮಾರ್ ಬಂಗಾರಪ್ಪ ಅವರು ಬೀಗರ ಮನೆಗೆ ಬಂದಂತೆ ಬಂದು ಬಿಜೆಪಿಯಲ್ಲಿಬಣ ರಾಜಕಾರಣ ಸೃಷ್ಟಿಸುತ್ತಿದ್ದಾರೆ ಎಂದರು.
ಬಿಜೆಪಿ ತಾಲೂಕು ಅಧ್ಯಕ್ಷ ಪ್ರಕಾಶ್ ಆಗಸನಗಹಳ್ಳಿ ಮಾತನಾಡಿ, ಉಚ್ಛಾಟಿತರಾದ ಮುಖಂಡರ ಜತೆಗೂಡಿ ಸಭೆ ನಡೆಸುವ ಕುಮಾರ್ ಬಂಗಾರಪ್ಪ ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಈ ಮಧ್ಯೆಯೂ ನೀವು ಟಿಕೆಟ್ ತಂದರೆ ಕಾರ್ಯಕರ್ತರ ನಡೆ ಬೇರೆಯೇ ಆಗಲಿದೆ ಎಂದು ಎಚ್ಚರಿಸಿದರು.
ಹಿರಿಯ ಮುಖಂಡ ದೇವೇಂದ್ರಪ್ಪ ಚನ್ನಾಪುರ, ತಾಲೂಕು ಪ್ರಧಾನ ಕಾರ್ಯದರ್ಶಿ ಸುರೇಶ್ ಉದ್ರಿ, ಒಬಿಸಿ ಮೋರ್ಚಾ ಅಧ್ಯಕ್ಷ ವಿನಾಯಕ ತವನಂದಿ, ಎಸ್ಸಿ ಮೋರ್ಚಾ ಅಧ್ಯಕ್ಷ ಹರೀಶ್ , ಎಸ್ ಟಿ ಘಟಕದ ಅಧ್ಯಕ್ಷ ಮಾರುತಿ ಕುಣಿತೆಪ್ಪ, ವಿನಯ್ ಮತ್ತಿತರರು ಇದ್ದರು.