ವಿಕ ಸುದ್ದಿಲೋಕ ಮಂಡ್ಯ
ಬಾಲಕಿಯರ ವಿದ್ಯಾಭ್ಯಾಸಕ್ಕೆ ಸರಕಾರ ನೀಡಿದ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಕಿವಿಮಾತು ಹೇಳಿದರು.
ನಗರದ ಹೊರವಲಯದ ಕೆರೆಯಂಗಳದಲ್ಲಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವೃತ್ತಿಪರ ಬಾಲಕಿಯ ವಸತಿ ನಿಯಲಕ್ಕೆ ಶನಿವಾರ ಭೇಟಿ ನೀಡಿ ವಿದ್ಯಾರ್ಥಿಯರೊಂದಿಗೆ ಮಾತನಾಡಿದರು. ಬಾಲಕಿಯರ ಪೋಷಕರು ತಮ್ಮ ಮಕ್ಕಳು ವಿದ್ಯಾವಂತರಾಗಲೆಂದು ವಿದ್ಯಾರ್ಥಿ ನಿಯಲಗಳಲ್ಲಿಮಕ್ಕಳನ್ನು ಸೇರಿಸುತ್ತಾರೆ. ನೀವು ಸರಕಾರದ ಸವಲತ್ತು ಬಳಸಿ ಸ್ವಾವಲಂಬಿಗಳಾಗಬೇಕು. ಇಲ್ಲವಾದಲ್ಲಿಪೋಷಕರು ನಿರಾಶಾದಾಯಕವಾಗಿ ನಿಮಗೆ ವಿವಾಹ ಮಾಡಿಸುವ ಆಲೋಚನೆಗೆ ಮುಂದಾಗುತ್ತಾರೆ ಎಂದರು.
ವಿದ್ಯಾವಂತರಾಗದಿದ್ದರೆ ಸ್ವಾವಲಂಬಿ ಬದುಕು ಸಿಗಲು ಸಾಧ್ಯವಿಲ್ಲ. ಮದುವೆಯಾದರೂ ಮತ್ತೊಬ್ಬರ ಮೇಲೆ ಅವಲಂಬಿತರಾಗಿ ಜೀವನ ನಡೆಸಬೇಕಾಗುತ್ತದೆ. ಇದರಿಂದ ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತದೆ. ಇದರಿಂದ ಅನುಸರಣೆಯ ಜೀವನ ತಮ್ಮನ್ನು ತಾವು ದೂಡಿಕೊಳ್ಳುವಂತೆ ಮಾಡುತ್ತದೆ ಎಂದು ಎಚ್ಚರಿಸಿದರು.
ಮೊದಲು ಮೊಬೈಲ್ ನಿಂದ ದೂರವಿರಿ. ಅದು ರಾಕ್ಷಸನಿದ್ದಂತೆ, ನಿಮ್ಮ ಭವಿಷ್ಯವನ್ನು ಹಾಳು ಮಾಡುತ್ತದೆ. ವಿದ್ಯಾರ್ಥಿ ಜೀವನವನ್ನು ನಿಮ್ಮ ಸ್ವಾವಲಂಬಿ ಬದುಕಿಗೆ ಬಳಸಿಕೊಳ್ಳಿ, ವಿದ್ಯಾವಂತರಾಗಿ ಭವಿಷ್ಯ ರೂಪಿಸಿಕೊಳ್ಳಿ. ಬೇರೆಯವರಿಗೆ ಸಹಾಯ ಮಾಡುವಂತವರಾಗಿ ಸಮಾಜದ ಬದಲಾವಣೆಗೆ ಮುಂದಾಗುವಂತೆ ಕರೆ ನೀಡಿದರು.
ಎಸ್ ಎಂಡಿವೈ-ಎಸ್ -28-6
ಮಂಡ್ಯ ನಗರದ ಹೊರವಲಯದ ಕೆರೆಯಂಗಳದಲ್ಲಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವೃತ್ತಿಪರ ಬಾಲಕಿಯ ವಸತಿ ನಿಯಲಕ್ಕೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ ನೀಡಿ ವಿದ್ಯಾರ್ಥಿನಿಯರೊಂದಿಗೆ ಚರ್ಚೆ ನಡೆಸಿದರು.

