ವಿಕ ಸುದ್ದಿಲೋಕ ದೊಡ್ಡಬಳ್ಳಾಪುರವಿದ್ಯುತ್ ಕ್ಷೇತ್ರ ಖಾಸಗೀಕರಣ ನಿರ್ಧಾರವನ್ನು ಸರಕಾರ ಹಿಂಪಡೆಯಬೇಕೆಂದು ಆಗ್ರಹಿಸಿ ನಡೆಯುತ್ತಿದ್ದ ಹೋರಾಟದ ವೇಳೆ ನೇಕಾರ ಮುಖಂಡರ ಮೇಲೆ ಹಲ್ಲೆನಡೆಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ರಾಜ್ಯ ನೇಕಾರರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಪಿ.ಎ.ವೆಂಕಟೇಶ್ ಆಗ್ರಹಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿನಡೆದ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ವಿದ್ಯುತ್ ಕ್ಷೇತ್ರ ಖಾಸಗೀಕರಣವಾದರೆ ನೇಕಾರರಿಗೆ ಈಗ ಬರುತ್ತಿರುವ ಸಹಾಯಧನ ಅಥವಾ ಉಚಿತ ವಿದ್ಯುತ್ ಯೋಜನೆಗಳು ಇರುವುದಿಲ್ಲ. ನೇಕಾರರು ಹಾಗೂ ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಕೇಂದ್ರ ಸರಕಾರ ಈ ಹಿಂದೆ ಅಡುಗೆ ಅನಿಲ ಸಿಲಂಡರ್ ಗೆ ನೀಡುತ್ತಿದ್ದ ಸಹಾಯಧನ ಕ್ರಮೇಣ ನಿಲ್ಲಿಸಿದಂತೆ ವಿದ್ಯುತ್ ಸಬ್ಸಿಡಿ ಕೂಡ ನಿಲ್ಲಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಟಾಟಾ ಪವರ್ ಸಂಸ್ಥೆ ವಿದ್ಯುತ್ ಕ್ಷೇತ್ರವನ್ನು ತನ್ನ ವಶಕ್ಕೆ ಪಡೆಯಲು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಅರ್ಜಿ ಸಲ್ಲಿಸಿದೆ. ರಾಜ್ಯ ಸರಕಾರದ ಇಂಧನ ಇಲಾಖೆಯ ಜತೆ ಸಮಾಲೋಚಿಸದೆ ವಿದ್ಯುತ್ ವಿತರಣೆ ಮಾಡುತ್ತಿರುವ ಸಾರ್ವಜನಿಕ ಸ್ವಾಮ್ಯದ ಕಂಪನಿಗಳ ಅಭಿಪ್ರಾಯ ಪರಿಗಣಿಸದೆ ಖಾಸಗಿ ವಿದ್ಯುತ್ ವಿತರಣಾ ಕಂಪನಿ ನೇರವಾಗಿ ಪರವಾನಗಿ ಪಡೆಯಲು ಅರ್ಜಿ ಸಲ್ಲಿಸಿರುವುದು ವಿದ್ಯುತ್ ಕಾಯಿದೆ-2003ರ ಉಲ್ಲಂಘನೆ ಆಗಿದೆ ಎಂದು ದೂರಿದರು.
ನ್ಯಾಯ ಒದಗಿಸಲು ಆಗ್ರಹ:
ಜೂ.17ರಂದು ವಿದ್ಯುತ್ ಖಾಸಗೀಕರಣದ ವಿರುದ್ಧ ಮಹಾಲಿಂಗಪುರ ತಾಲೂಕು ಹೋರಾಟ ಸಮಿತಿಯಡಿ ರೈತರು, ನೇಕಾರರು, ಕಾರ್ಮಿಕರು ಸೇರಿ ಹೆಸ್ಕಾಂ ಕಚೇರಿ ಮುಂದೆ ಹೋರಾಟ ನಡೆಸುತ್ತಿದ್ದ ಸಂದರ್ಭದಲ್ಲಿಶಾಸಕರಾದ ಸಿದ್ದುಸವದಿ ಮತ್ತು ಅವರ ಹಿಂಬಾಲಕರು ನೇಕಾರ ಮುಖಂಡ ಶಿವಲಿಂಗ ಟರ್ಕಿ ಅವರ ಮೇಲೆ ಹಲ್ಲೆನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಹೋರಾಟಗಾರರ ಮೇಲೆ ಹಲ್ಲೆನಡೆಸಿರುವುದು ಖಂಡನೀಯ. ತಕ್ಷಣ ಶಾಸಕರು ಈ ಬಗ್ಗೆ ಕ್ಷಮೆ ಕೇಳಬೇಕು ಮತ್ತು ನೇಕಾರ ಮುಖಂಡರಿಗೆ ಸೂಕ್ತ ನ್ಯಾಯ ದೊರಕಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಕರ್ನಾಟಕ ರಾಜ್ಯ ನೇಕಾರರ ಹಿತರಕ್ಷಣಾ ಸಮಿತಿ ಉಪಾಧ್ಯಕ್ಷ ಆರ್ .ಎಸ್ .ಶ್ರೀನಿವಾಸ್ , ಸಹ ಕಾರ್ಯದರ್ಶಿ ಎನ್ .ಮುನಿರಾಜು, ರಾಮು, ಚೌಡಯ್ಯ, ದೂಡ್ಡಬಳ್ಳಾಪುರ ಟೆಕ್ಸ್ ಟೈಲ್ ವೀವರ್ಸ್ ಅಸೋಸಿಯೇಷನ್ ಮುಖಂಡರಾದ ಬಿ.ಆರ್ .ಬಾಬು, ಮಂಜುನಾಥ್ ಇದ್ದರು.
ಕೋಟ್ ,
ಸರಕಾರ ನೇಕಾರರ ನೆರವಿಗೆ ಧಾವಿಸುವ ಬದಲು ವಿದ್ಯುತ್ ಕ್ಷೇತ್ರ ಖಾಸಗೀಕರಣ ಮಾಡುವ ಮೂಲಕ ನೇಕಾರರ ಹಿತಕ್ಕೆ ಧಕ್ಕೆ ತರುತ್ತಿರುವುದು ಖಂಡನೀಯ. ಇದರಿಂದ ನೇಕಾರರು ಸಂಕಷ್ಟಕ್ಕೆ ಸಿಲುಕಲಿದ್ದಾರೆ.
-ನರಸಿಂಹಮೂರ್ತಿ | ಅಧ್ಯಕ್ಷ, ದೊಡ್ಡಬಳ್ಳಾಪುರ ಟೆಕ್ಸ್ ಟೈಲ್ ವೀವರ್ಸ್ ಅಸೋಸಿಯೇಷನ್
ಫೋಟೋ:2306ವಿಕೆ3: ದೊಡ್ಡಬಳ್ಳಾಪುರದ ಪ್ರವಾಸಿ ಮಂದಿರದಲ್ಲಿಜಂಟಿ ನೇಕಾರರ ಹೋರಾಟ ಸಮಿತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿರಾಜ್ಯ ನೇಕಾರರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಪಿ.ಎ.ವೆಂಕಟೇಶ್ ಮಾತನಾಡಿದರು.