ಔರಾದ್ ತಾಲೂಕಿನ ಜಿರ್ಗಾ ಗ್ರಾಮದ ಬಾವಿಯಲ್ಲಿಬಿದ್ದಿರುವ ಎಮ್ಮೆಯನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿರುವುದು.ಅಗ್ನಿಶಾಮಕ ಸಿಬ್ಬಂದಿ ಸಾಹಸಕ್ಕೆ ಜನರ ಮೆಚ್ಚುಗೆ
ಬಾವಿಯಲ್ಲಿಸಿಲುಕಿದ್ದ ಎಮ್ಮೆ ರಕ್ಷಣೆ
ವಿಕ ಸುದ್ದಿಲೋಕ ಔರಾದ್
ತಾಲೂಕಿನ ಜೀರ್ಗಾ (ಬಿ) ಗ್ರಾಮದ ರೈತ ರಾಜಕುಮಾರ ಕಾಮಶೆಟ್ಟಿ ಬಂಬುಳಗೆ ಅವರ ಜಮೀನಿನ ತೆರೆದ ಬಾವಿಗೆ ಎಮ್ಮೆಯೊಂದು ಆಕಸ್ಮಿಕವಾಗಿ ಬಿದ್ದ ಘಟನೆ ಮಂಗಳವಾರ ನಡೆದಿದೆ. ಎಮ್ಮೆ ಬಾವಿಗೆ ಬಿದ್ದಿರುವ ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದು, ಕೂಡಲೇ ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ತಕ್ಷಣವೇ ಔರಾದ್ ಅಗ್ನಿಶಾಮಕ ಠಾಣೆಯ ಪ್ರಭಾರ ಅಗ್ನಿಶಾಮಕ ಠಾಣಾಧಿಕಾರಿ ರವಿ ಅವರ ನೇತೃತ್ವದ ಸಿಬ್ಬಂದಿ ಕ್ಷಿಪ್ರವಾಗಿ ಘಟನಾ ಸ್ಥಳಕ್ಕೆ ಧಾವಿಸಿದರು. ಪರಿಸ್ಥಿತಿ ಅವಲೋಕಿಸಿದ ತಂಡವು ರಕ್ಷಣಾ ಕಾರ್ಯಾಚರಣೆ ಆರಂಭಿಸಿತು.
ಸಿಬ್ಬಂದಿ ವಿಶ್ವನಾಥ, ಅಮರೇಶ್ , ಶ್ರೀನಿವಾಸ, ರವಿ, ಜಟ್ಟಿಂಗರಾಯ, ಅಭಿಷೇಕ, ಆಕಾಶ, ಚೇತನ ಹಾಗೂ ಮಿತ್ರ ಸಿ.ಟಿ. ಅವರು ಅಗತ್ಯ ಸುರಕ್ಷತಾ ಕ್ರಮ ಅನುಸರಿಸಿ ಬಾವಿಯೊಳಗೆ ಇಳಿದರು. ಹಗ್ಗ ಮತ್ತು ಇತರ ರಕ್ಷಣಾ ಉಪಕರಣಗಳ ಸಹಾಯದಿಂದ ಎಮ್ಮೆಯನ್ನು ಎಚ್ಚರಿಕೆಯಿಂದ ಕಟ್ಟಿಕೊಂಡು ಸಾಕಷ್ಟು ಸಮಯದ ಕಾರ್ಯಾಚರಣೆಯ ಬಳಿಕ ಸುರಕ್ಷಿತವಾಗಿ ಮೇಲಕ್ಕೆ ಎತ್ತಿದರು. ರಕ್ಷಣಾ ಕಾರ್ಯಾಚರಣೆಯಲ್ಲಿಎಮ್ಮೆಗೂ ಯಾವುದೇ ಗಾಯಗಳಾಗದಂತೆ ವಿಶೇಷ ಮುತುವರ್ಜಿ ವಹಿಸಲಾಯಿತು. ಬಳಿಕ ಎಮ್ಮೆಯನ್ನು ಜೀವಂತವಾಗಿ ರಕ್ಷಿಸಿ ಅದರ ಮಾಲೀಕರಿಗೆ ಒಪ್ಪಿಸಲಾಯಿತು. ಎಮ್ಮೆ ಸುರಕ್ಷಿತವಾಗಿ ಹೊರಬಂದ ಹಿನ್ನೆಲೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ನೆಮ್ಮದಿಪ ನಿಟ್ಟುಸಿರು ಬಿಟ್ಟರು. ಅಗ್ನಿಶಾಮಕ ಸಿಬ್ಬಂದಿಯ ಸಮಯಪ್ರಜ್ಞೆ, ಧೈರ್ಯ ಮತ್ತು ನಿಸ್ವಾರ್ಥ ಸೇವೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು. ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸಿದ್ದರಿಂದ ಅಮೂಲ್ಯ ಜಾನುವಾರಿನ ಜೀವ ಉಳಿಯುವಂತಾಯಿತು ಎಂದು ಗ್ರಾಮಸ್ಥರು ಪ್ರಶಂಸಿಸಿದರು.