ಕಬ್ಬು ಬೆಳೆಗಾರರು , ಸಕ್ಕರೆ ಕಾರ್ಖಾನೆ ಅಧಿಕಾರಿಗಳ ಸಭೆಯಲ್ಲಿಜಿಲ್ಲಾಧಿಕಾರಿ ಸೂಚನೆ
ವಿಕ ಸುದ್ದಿಲೋಕ ಚಾಮರಾಜನಗರ
ಕಬ್ಬು ಬೆಳೆಗಾರರಿಗೆ ಪ್ರತಿ ಟನ್ ಗೆ ಈ ಹಿಂದೆ ಬಾಕಿ ಉಳಿಸಿಕೊಂಡಿರುವ 50 ರೂ. ಹಣವನ್ನು ಶೀಘ್ರ ಪಾವತಿಸುವಂತೆ ಜಿಲ್ಲಾಧಿಕಾರಿ ಶ್ರೀರೂಪಾ ಅವರು ಸಕ್ಕರೆ ಕಾರ್ಖಾನೆ ಅಧಿಕಾರಿಗಳಿಗೆ ಆದೇಶಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಗುರುವಾರ ನಡೆದ ಸಭೆಯಲ್ಲಿಮಾತನಾಡಿದ ಅವರು, ‘‘ರೈತರ ನ್ಯಾಯಾಯುತ ಬೇಡಿಕೆಗಳನ್ನು ನಿರ್ಲಕ್ಷ್ಯಿಸಬಾರದು. ಕಬ್ಬುನ್ನು ನಿಗದಿತವಾಗಿ ಕಟಾವು ಮಾಡಿಕೊಳ್ಳಬೇಕು. ಅದಕ್ಕೆ ತಕ್ಕಂತೆ ದರವನ್ನು ನೀಡಬೇಕು,’’ ಎಂದು ಸೂಚಿಸಿದರು.
ಇದಕ್ಕೂ ಮೊದಲು ಮಾತನಾಡಿದ ಕಬ್ಬು ಬೆಳೆಗಾರರ ಸಂಘದ ಮುಖಂಡರು, ‘‘ಕಬ್ಬು ಕಟಾವು ಸಾಗಣೆ ರಾಜ್ಯಾದ್ಯಂತ ಏಕರೂಪದಲ್ಲಿರಬೇಕು. ಇಳುವರಿ ಮೋಸ ತಪ್ಪಿಸಲು ಕಾರ್ಖಾನೆ ಮುಂದೆ ಇಳುವರಿ ಯಂತ್ರ ಅಳವಡಿಸಬೇಕು, ಸಕ್ಕರೆ ಕಾರ್ಖಾನೆ ಮುಂದೆ ತೂಕದ ಯಂತ್ರ ಅಳವಡಿಸಬೇಕು, ಉಪ ಉತ್ಪನ್ನಗಳ ಲಾಭ ಹಂಚಿಕೆ ಆಗಬೇಕು,’’ ಎಂದು ಆಗ್ರಹಿಸಿದರು.
‘‘ಕಳೆದ ಎರಡು ವರ್ಷದ ಸರಕಾರದ ಆದೇಶದನ್ವಯ ಪ್ರತಿ ಟನ್ ಕಬ್ಬಿಗೆ 150 ಬಾಕಿ ನೀಡಬೇಕು, ದ್ವಿಪಕ್ಷಿ ಒಪ್ಪಂದ ಪತ್ರ ಜಾರಿ ಆಗಬೇಕು, ಕಬ್ಬು ಖರೀದಿ ಮಂಡಳಿ ರಚನೆ ಮಾಡುವಾಗ ನಮ್ಮನ್ನು ಪರಿಗಣಿಸಬೇಕು. ಕಟಾವು ಸಾಗಣೆ ವೆಚ್ಚವನ್ನು ಕಾರ್ಖಾನೆಯೇ ಭರಿಸಬೇಕು,’’ ಎಂದು ಒತ್ತಾಯಿಸಿದರು.
ಸಭೆಯಲ್ಲಿ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ , ಜಿಲ್ಲಾಧ್ಯಕ್ಷ ಹಾಲಿನ ನಾಗರಾಜ್ , ತಾಲೂಕು ಅಧ್ಯಕ್ಷ ಮಲೆಯೂರು ಸತೀಶ್ , ಹೊನ್ನೇಗೌಡನಹಳ್ಳಿ ಮಹೇಶ್ , ಮುಖಂಡಹಳ್ಳಿ ಪುಟ್ಟ ಮಲ್ಲೆಗೌಡ ಇತರರು ಹಾಜರಿದ್ದರು.
====
ಕಬ್ಬಿನ ಬೆಳೆಗಾರರ ಸಮಸ್ಯೆ ಕುರಿತಾಗಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿಸಭೆ ನಡೆಯಿತು.

