ರಫ್ತು ಅರಿವು ಕಾರ್ಯಗಾರದಲ್ಲಿಕಾಸಿಯಾ ಅಧ್ಯಕ್ಷ ಗಣೇಶ್ ರಾವ್ ಬಿ.ಆರ್ . ವಿಶ್ವಾಸ
ವಿಕ ಸುದ್ದಿಲೋಕ ತುಮಕೂರು
ಕರ್ನಾಟಕದ ರಫ್ತುಗಳ ಭವಿಷ್ಯ ಅತ್ಯಂತ ಉಜ್ವಲವಾಗಿದೆ. ರಾಜ್ಯಕ್ಕೆ ಇನ್ನಷ್ಟು ರಫ್ತು ಸಾಧನೆ ಮಾಡಲು ಹೆಚ್ಚಿನ ಅವಕಾಶಗಳಿವೆ ಎಂದು ಕಾಸಿಯಾ ಅಧ್ಯಕ್ಷ ಗಣೇಶ್ ರಾವ್ ಬಿ.ಆರ್ . ಹೇಳಿದರು.
ನಗರದಲ್ಲಿಗುರುವಾರ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾಕೈಗಾರಿಕಾ ಕೇಂದ್ರ, ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನಾ ಕೇಂದ್ರ ಹಾಗೂ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದಿಂದ ಎಂಎಸ್ ಎಂಇಗಳ ಕಾರ್ಯಕ್ಷಮತೆ ಹೆಚ್ಚಿಸುವುದು ಮತ್ತು ವೇಗಗೊಳಿಸುವುದು (ಆರ್ ಎಎಂಪಿ) ಯೋಜನೆಯಡಿಯಲ್ಲಿರಫ್ತು ಕುರಿತು ಗುರುವಾರ ನಡೆದ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.
ಒಟ್ಟಾರೆ ರಫ್ತುಗಳಲ್ಲಿನಮ್ಮ ರಾಜ್ಯವು ಪ್ರಮುಖ ಸ್ಥಾನ ಪಡೆದಿದ್ದು, ಸರಕು ರಫ್ತುಗಳಲ್ಲಿದೇಶದಲ್ಲೇ 4ನೇ ಸ್ಥಾನದಲ್ಲಿದ್ದರೆ, ಸೇವಾ ರಫ್ತುಗಳಲ್ಲಿ1ನೇ ಸ್ಥಾನದಲ್ಲಿದೆ. ಕಳೆದ ಹಣಕಾಸು ವರ್ಷದಲ್ಲಿಕರ್ನಾಟಕವು ಸುಮಾರು 30 ಬಿಲಿಯನ್ ಡಾಲರ್ ಮೌಲ್ಯದ ಸರಕು ರಫ್ತುಗಳನ್ನು ದಾಖಲಿಸಿದ್ದು, ರಾಜ್ಯಕ್ಕೆ ಇನ್ನೂ ಹೆಚ್ಚಿನ ರಫ್ತು ಸಾಧನೆ ಮಾಡಲು ದೊಡ್ಡ ಸಾಧ್ಯತೆಗಳಿವೆ. ಜತೆಗೆ ಸೇವಾ ರಫ್ತುಗಳಲ್ಲಿಕಳೆದ ಹಣಕಾಸು ವರ್ಷದಲ್ಲಿಸುಮಾರು 160 ಬಿಲಿಯನ್ ಡಾಲರ್ ಮೌಲ್ಯದ ರಫ್ತುಗಳನ್ನು ರಾಜ್ಯ ಸಾಧಿಸಿದೆ ಎಂದು ಅವರು ತಿಳಿಸಿದರು.
ಈ ಒಟ್ಟು ರಫ್ತುಗಳಲ್ಲಿಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಪಾಲು ಸುಮಾರು ಶೇ.28 ರಷ್ಟಿದೆ. ಎಂಎಸ್ ಎಂಇಗಳ ರಫ್ತುಗಳನ್ನು ಹೆಚ್ಚಿಸಲು ಕೇಂದ್ರ ಸರಕಾರ ವಿವಿಧ ರೀತಿಯ ಬೆಂಬಲ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದ ಅವರು, ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಪಿಯೂಷ್ ಗೋಯಲ್ ಅವರಿಂದ ಇತ್ತೀಚೆಗೆ ಆರಂಭಿಸಲಾದ ಎಕ್ಸ್ ಫರ್ಟ್ ಪ್ರಮೋಷನ್ ಮಿಷನ್ ಅಡಿಯಲ್ಲಿಎಂಎಸ್ ಎಂಇ ರಫ್ತುಗಾರರನ್ನು ಉತ್ತೇಜಿಸಲು 25 ಸಾವಿರ ಕೋಟಿ ಮೊತ್ತದ ವೆಚ್ಚದೊಂದಿಗೆ 7 ಹೊಸ ಯೋಜನೆಗಳನ್ನು ಘೋಷಿಸಲಾಗಿದೆ. ಈ 7 ಯೋಜನೆಗಳಲ್ಲಿ3 ಯೋಜನೆಗಳು ರಫ್ತುಗಾರರಿಗೆ ಹಣಕಾಸು ಸಹಾಯ ನೀಡುವುದಕ್ಕೆ ಮತ್ತು 4 ಯೋಜನೆಗಳು ರಫ್ತುಗಾರರ ಸಂಪೂರ್ಣ ರಫ್ತು ಪ್ರಕ್ರಿಯೆಯ ವಿವಿಧ ಹಂತಗಳಲ್ಲಿಸಹಾಯ ಮಾಡುವುದಕ್ಕೆ ರೂಪಿಸಲಾಗಿದೆ ಎಂದರು.
ಕಾಸಿಯಾ ಉಪಾಧ್ಯಕ್ಷ ನಿಂಗಣ್ಣ ಎಸ್ ., ಕಾರ್ಯಕಾರಿ ಸಮಿತಿ ಸದಸ್ಯ ಸದಾಶಿವ ಆರ್ . ಆಮಿನ್ , ತುಮಕೂರು ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಸುಜ್ಞಾನ ಹಿರೇಮಠ, ಕೈಗಾರಿಕೋದ್ಯಮಿ ಎಚ್ .ಎನ್ . ಚಂದ್ರಶೇಖರ್ , ದಿನೇಶ್ ಕುಮಾರ್ ವಿ., ಜಿಲ್ಲಾಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ನಾಗರಾಜ್ , ಮತ್ತಿತರರಿದ್ದರು.
ಕೋಟ್ :
ಕಾಸಿಯಾ ವತಿಯಿಂದ ರಫ್ತು ಕುರಿತು ಹಮ್ಮಿಕೊಂಡಿರುವ ಅರಿವು ಮೂಡಿಸುವ ಈ ಕಾರ್ಯಕ್ರಮ ತುಮಕೂರು ನಗರದಲ್ಲಿರುವ ಎಲ್ಲಾಕೈಗಾರಿಕೆಗಳು ಹಾಗೂ ಉದ್ಯಮಿಗಳಿಗೆ ಪ್ರಯೋಜನಕಾರಿಯಾಗಿದೆ.
- ಪಿ. ಕುರಂದವಾಡ, ಅಧ್ಯಕ್ಷ, ಜಿಲ್ಲಾವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ
ಕೋಟ್ :
ಕಾಸಿಯಾ, ಕೈಗಾರಿಕೆ ಹಾಗೂ ವಾಣಿಜ್ಯ ಇಲಾಖೆಯಿಂದ ಆಯೋಜಿಸಿರುವ ಎಂಎಸ್ ಎಂಇ ಕಾರ್ಯಕ್ಷಮತೆ ಹಾಗೂ ರಫ್ತು ಕುರಿತಾದ ಈ ಕಾರ್ಯಕ್ರಮ ಹೊಸದಾಗಿ ಕೈಗಾರಿಕೆಗಳನ್ನು ಸ್ಥಾಪಿಸುವವರಿಗೆ ಹಾಗೂ ತುಮಕೂರಿನ ಎಲ್ಲಾಕೈಗಾರಿಕೋದ್ಯಮಿಗಳು ತುಂಬಾ ಅನುಕೂಲವಾಗಲಿದೆ.
- ಡಾ.ಸಿ.ವಿ.ಹರೀಶ್ , ಅಧ್ಯಕ್ಷ, ವಸಂತನರಸಾಪುರ ಕೈಗಾರಿಕಾ ಪ್ರದೇಶದ ಕೈಗಾರಿಕೆಗಳ ಒಕ್ಕೂಟ
ಫೋಟೋ 12ಟಿಯುಎಂ1 : ಎಂಎಸ್ ಎಂಇಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಮತ್ತು ವೇಗಗೊಳಿಸುವುದು (ಆರ್ ಎಎಂಪಿ) ಯೋಜನೆಯಡಿಯಲ್ಲಿರಫ್ತು ಕುರಿತು ಗುರುವಾರ ನಡೆದ ಅರಿವು ಮೂಡಿಸುವ ಕಾರ್ಯಕ್ರಮವನ್ನು ಗಣೇಶ್ ರಾವ್ ಬಿ.ಆರ್ . ಉದ್ಘಾಟಿಸಿದರು.

