ವಿದ್ವಾನ್ ಶಿವಪ್ರಕಾಶ್ ಗೆ ಕರ್ನಾಟಕ ಕಲಾಶ್ರೀ ಪ್ರಶಸ್ತಿ
ವಿಕ ಸುದ್ದಿಲೋಕ ಚಿತ್ರದುರ್ಗ
ಕಳೆದ ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ಭರತನಾಟ್ಯ ಕ್ಷೇತ್ರದಲ್ಲಿಅಪ್ರತಿಮ ಸಾಧನೆ ಮಾಡುತ್ತಾ ಬಂದಿರುವ ಚಿತ್ರದುರ್ಗದ ನಾಟ್ಯ ಪ್ರವೀಣ, ಖ್ಯಾತ ನೃತ್ಯ ಗುರು ವಿದ್ವಾನ್ ಸಿ.ಆರ್ .ಶಿವಪ್ರಕಾಶ್ ಅವರು ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿಯ ಪ್ರತಿಷ್ಠಿತ ಕರ್ನಾಟಕ ಕಲಾಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸಂಗೀತ ಮತ್ತು ನೃತ್ಯ ಕ್ಷೇತ್ರಗಳಲ್ಲಿನ ಹಿರಿಯ ಸಾಧಕರುಗಳಿಗೆ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅಕಾಡೆಮಿ ಅಧ್ಯಕ್ಷೆ ಶುಭಾ ಧನಂಜಯ ತಿಳಿಸಿದ್ದಾರೆ. ವಿದ್ವಾನ್ ಸಿ.ಆರ್ .ಶಿವಪ್ರಕಾಶ್ , ಚಿತ್ರದುರ್ಗದಲ್ಲಿಶ್ರೀ ಅಂಜನಾ ನೃತ್ಯ ಕಲಾ ಕೇಂದ್ರ ಸ್ಥಾಪಿಸಿ, ಪತ್ನಿ ವಿದ್ವಾನ್ ನಂದಿನಿ ಅವರೊಡಗೂಡಿ ಸಾವಿರಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿ, ನೃತ್ಯ ಕಲೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದವರು. ಚಿತ್ರದುರ್ಗದಲ್ಲಿಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯದ ಅಧಿಕೃತ ಪರೀಕ್ಷಾ ಕೇಂದ್ರದ ನೇತೃತ್ವ ವಹಿಸಿರುವ ಅನುಭವಿ ಕಲಾ ನಿರ್ದೇಶಕರು.
ಶಾಸ್ತ್ರೀಯ ನೃತ್ಯ ಭರತನಾಟ್ಯದಲ್ಲಿಜೂನಿಯರ್ , ಸೀನಿಯರ್ ಮತ್ತು ವಿದ್ವತ್ ಮಟ್ಟದ ಪರಿಣಿತಿ, ಕರ್ನಾಟಕ ಶಾಸ್ತ್ರೀಯ ಸಂಗೀತ, ಭಾವಗೀತೆ, ಜಾನಪದ ಮತ್ತು ಭಕ್ತಿಗೀತೆಗಳು, ಬೃಹತ್ ನೃತ್ಯ ರೂಪಕಗಳ ನಿರ್ದೇಶಿಸಿ ಪ್ರದರ್ಶನಗಳ ಜತೆ ನೃತ್ಯ ಶಾಲೆಯ ಆಡಳಿತ ಮತ್ತು ಪರೀಕ್ಷಾ ಮಂಡಳಿಗಳ ನಿರ್ವಹಣೆ ಕೌಶಲ್ಯ ಹೊಂದಿದ್ದಾರೆ.
ಇವರ ಈ ಸಾಧನೆಗಾಗಿ ಜಿಲ್ಲಾರಾಜ್ಯೋತ್ಸವ ಪ್ರಶಸ್ತಿ, ಬಸವಶ್ರೀ ಪ್ರಶಸ್ತಿ ಮತ್ತು ಶಿವಾಜಿ ಮಹಾರಾಜ ಪ್ರಶಸ್ತಿ, ಕುಲಕರ್ಣಿ ನೃತ್ಯ ಶಾಲೆಯಿಂದ ನಾಟ್ಯ ಚೂಡಾಮಣಿ, ನಾಟ್ಯರಂಜನಿ ಕಲಾ ಕೇಂದ್ರದಿಂದ ನಾಟ್ಯ ಪ್ರವೀಣ ಸೇರಿದಂತೆ ಹಲವಾರು ಪ್ರಶಸ್ತಿಗಳು ಸಂದಿವೆ.
--
ಫೋಟೊ/ಸಿ.ಆರ್ .ಶಿವಪ್ರಕಾಶ್

