ವಿಕ ಸುದ್ದಿಲೋಕ ಭಾಲ್ಕಿ ಏಪ್ರಿಲ್ ನಲ್ಲಿಜರುಗಲಿರುವ ಬಸವ ಜಯಂತಿ , ವಚನ ಜಾತ್ರೆ-2026 ಡಾ.ಚನ್ನಬಸವ ಪಟ್ಟದ್ದೇವರ 27ನೇ ಸ್ಮರಣೋತ್ಸವ ಮತ್ತು ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ಅರ್ಥಪೂರ್ಣವಾಗಿ ಆಚರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ತಿಳಿಸಿದ್ದಾರೆ. ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿಭಾನುವಾರ ನಡೆದ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ವಿಶ್ವಗುರು ಬಸವಣ್ಣನವರು ಜಗಕ್ಕೆ ಬೆಳಕಾಗಿದ್ದಾರೆ. ಶತಾಯಷಿ ಡಾ.ಚನ್ನಬಸವ ಪಟ್ಟದ್ದೇವರು ಈ ಭಾಗದ ನಡೆದಾಡುವ ದೇವರು ಆಗಿದ್ದರು. ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಶೈಕ್ಷಣಿಕ ಕ್ರಾಂತಿಗೈದಿ ದ್ದಾರೆ. ಹಾಗಾಗಿ ಬಸವ ಜಯಂತಿ, ಡಾ.ಚನ್ನಬಸವ ಪಟ್ಟದ್ದೇವರ 27ನೇ ಸ್ಮರಣೋತ್ಸವ ಮತ್ತು ಡಾ.ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ಏಕಕಾಲಕ್ಕೆ ಒಂದುಗುಡಿರುವುದು ನಮ್ಮೆಲ್ಲರ ಭಾಗ್ಯ ಎಂದರು. ಏ.20 ರಿಂದ 22ರವರೆಗೆ ಮೂರು ದಿವಸ ವಿಶೇಷ ಕಾರ್ಯಕ್ರಮಗಳು ಜರುಗಲಿವೆ. ಪ್ರವಚನ, ಯೋಗ ಶಿಬಿರ , ವಾಲಿಬಾಲ್ ಪಂದ್ಯಾವಳಿ, ಚಿತ್ರ ಪ್ರದರ್ಶನ, ಸಾಮೂಹಿಕ ವಚನ ಪಾರಾಯಣ, ಮೆರವಣಿಗೆ ಸೇರಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿ ನಾನಾ ಸೇವಾ ಸಮಿತಿ ರಚನೆ ಮಾಡಲಾಗಿದೆ ಎಂದರು. ಏ.1ರಿಂದ ಪ್ರವಚನ ಆರಂಭಗೊಂಡು 22ರ ವರೆಗೆ ನಡೆಯಲಿದೆ. 7 ರಿಂದ 13ರವರೆಗೆ ಯೋಗ ಶಿಬಿರ, 10 ರಿಂದ 13ರವರೆಗೆ ರಾಷ್ಟ್ರೀಯ ಮಟ್ಟದ ವಾಲಿಬಾಲ್ ಪಂದ್ಯಾವಳಿ, 14 ರಿಂದ 19ರ ವರೆಗೆ ವಚನ ಪಾರಾಯಣ ಸೇರಿ ಹೀಗೆ ಅನೇಕ ಅರ್ಥಪೂರ್ಣ ಕಾರ್ಯ ಕ್ರಮಗಳು ಜರುಗಲಿವೆ ಎಂದು ತಿಳಿಸಿದರು. ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ದಿವ್ಯ ಸಾನ್ನಿಧ್ಯ ವಹಿಸಿದ್ದರು. ಮಹಾಲಿಂಗ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ವಿಶ್ವನಾಥಪ್ಪ ಬಿರಾದಾರ್ , ರಾಚಪ್ಪ ಗೋರ್ಟೆ ಬಸವ ಗುರುವಿನ ಪೂಜೆ ನೆರವೇರಿಸಿದರು. ಯುವ ಮುಖಂಡ ಶಿವು ಲೋಖಂಡೆ ಅಧ್ಯಕ್ಷತೆ ವಹಿಸಿದ್ದರು. ದೀಪಕ ಠಮಕೆ ನಿರೂಪಿಸಿ, ವಂದಿಸಿದರು.

