ಖಾಲಿ ಹುದ್ದೆ ಭರ್ತಿಗೆ ಆಗ್ರಹಿಸಿ 6ರಿಂದ ಯುವ ಅಧಿವೇಶನ

Contributed bynijaguni.dindalkoppa@timesofindia.com|Vijaya Karnataka

ಖಾಲಿ ಇರುವ ಸರಕಾರಿ ಹುದ್ದೆಗಳನ್ನು ಭರ್ತಿ ಮಾಡುವಂತೆ ಒತ್ತಾಯಿಸಿ ಯುವ ಅಧಿವೇಶನ ನಡೆಯಲಿದೆ. ರಾಜ್ಯ ಹಾಗೂ ಕೇಂದ್ರ ಸರಕಾರದ ಲಕ್ಷಾಂತರ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ನೇಮಕಾತಿ ಪ್ರಕ್ರಿಯೆಗಳನ್ನು ನಿಗದಿತ ವೇಳಾಪಟ್ಟಿಯಂತೆ ನಡೆಸಬೇಕು. ಕನ್ನಡ ಭಾಷೆಯಲ್ಲಿ ಪರೀಕ್ಷೆಗಳನ್ನು ನಡೆಸಬೇಕು. ಉದ್ಯೋಗ ಕಡಿತವನ್ನು ನಿಲ್ಲಿಸಿ, ಖಾಯಂ ನೇಮಕಾತಿ ಮಾಡಬೇಕು ಎಂದು ಆಗ್ರಹಿಸಲಾಗಿದೆ.

youth convention for filling vacant posts starts from 6th

ಸರಕಾರಿ ಖಾಲಿ ಹುದ್ದೆಗಳ ಭರ್ತಿಗೆ ಒತ್ತಾಯ

6ರಿಂದ ಯುವ ಅಧಿವೇಶನ

ವಿಕ ಸುದ್ದಿಲೋಕ ಧಾರವಾಡ

ರಾಜ್ಯ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ, ಜನಸಾಮಾನ್ಯರ ವೇದಿಕೆಯಿಂದ ರಾಜ್ಯದಲ್ಲಿಖಾಲಿ ಇರುವ ಎಲ್ಲ2.84ಲಕ್ಷ ಹಾಗೂ ಕೇಂದ್ರದ 9.64ಲಕ್ಷ ಸರಕಾರಿ ಖಾಲಿ ಹುದ್ದೆಗಳ ಭರ್ತಿಗೆ ಒತ್ತಾಯಿಸಿ ಮಾ. 6ರಿಂದ 27ರವರೆಗೆ ವಿವಿಧೆಡೆ ಯುವ ಅಧಿವೇಶನ ಹಮ್ಮಿಕೊಳ್ಳಲಾಗಿದೆ.

ಧಾರವಾಡ ಜಿಲ್ಲಾಡಳಿತ ಭವನದ ಎದುರಿಗೆ ಮಾ. 6ರಂದು ಬೆಳಗ್ಗೆ 10ಕ್ಕೆ ಯುವ ಅಧಿವೇಶನ ಮೊದಲ ಕಾರ್ಯಕ್ರಮ ನಡೆಯಲಿದೆ. ನಂತರದ ದಿನಗಳಲ್ಲಿವಿಜಯಪುರ, ಬೆಳಗಾವಿ, ಬಾಗಲಕೋಟೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿಈ ಕಾರ್ಯಕ್ರಮ ನಡೆಯಲಿದೆ ಎಂದು ಹೋರಾಟ ಸಮಿತಿ ರಾಜ್ಯ ಸಂಚಾಲಕ ಸಿದ್ದಲಿಂಗ ಬಾಗೇವಾಡಿ, ಜನಸಾಮಾನ್ಯರ ವೇದಿಕೆ ರಾಜ್ಯ ಸಂಚಾಲಕ ಯಲ್ಲಪ್ಪ ಹೆಗಡೆ ಮಂಗಳವಾರ ಜಂಟಿ ಸುದ್ದಿಗೋಷ್ಠಿಯಲ್ಲಿತಿಳಿಸಿದರು.

ಕೆಪಿಎಸ್ ಸಿ, ಕೆಇಎ, ಕೆಎಸ್ ಪಿ ಹಾಗೂ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ನೇಮಕಾತಿ ಪ್ರಾಧಿಕಾರಗಳು ಪ್ರತಿ ವರ್ಷ ಖಾಲಿ ಇರುವ ಹುದ್ದೆಗಳ ಸಂಖ್ಯೆ ಹಾಗೂ ವಾರ್ಷಿಕ ಕ್ಯಾಲೆಂಡರ್ ಪ್ರಕಟಿಸಿ ನಿಗದಿತ ವೇಳಾಪಟ್ಟಿಯಂತೆ ನೇಮಕಾತಿ ಮಾಡಿಕೊಳ್ಳಬೇಕು. ಯುಪಿಎಸ್ ಸಿ, ಸಿಎಸ್ ಇ ಸೇರಿದಂತೆ ಎಲ್ಲಪರೀಕ್ಷೆಗಳನ್ನು ಕನ್ನಡ ಭಾಷೆಯಲ್ಲಿಯೂ ನಡೆಸಬೇಕು. ಒಳಮೀಸಲಾತಿ ಗೊಂದಲ ಇತ್ಯರ್ಥಪಡಿಸಿ ನೇಮಕಾತಿ ಅಧಿಸೂಚನೆ ಹೊರಡಿಸಬೇಕು ಎಂಬ ಆಗ್ರಹದೊಂದಿಗೆ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.

ಉದ್ಯೋಗ ಕಡಿತ:

ಕೇಂದ್ರ, ರಾಜ್ಯ ಸರಕಾರಗಳು ಸರಕಾರಿ ಉದ್ಯೋಗ ಕಡಿತಗೊಳಿಸಿ ಗುತ್ತಿಗೆ, ಹೊರಗುತ್ತಿಗೆ, ದಿನಗೂಲಿ ಮುಂತಾದ ತಾತ್ಕಾಲಿಕ ಸ್ವರೂಪದ ಉದ್ಯೋಗ ನೀಡುತ್ತ ಬಂದಿವೆ. ರಾಜ್ಯದಲ್ಲಿಈ ಹಿಂದೆ ಇದ್ದ 11 ಲಕ್ಷ ಉದ್ಯೋಗಗಳನ್ನು ಈಗ 7 ಲಕ್ಷಗಳಿಗೆ ಇಳಿಸಲಾಗಿದೆ ಎಂದರು.

ಪೋಲಿಸ್ ಕಾನ್ಸ್ ಟೇಬಲ್ ನೇಮಕಾತಿಯಲ್ಲಿವಯೋಮಿತಿ ಹೆಚ್ಚಿಸಿ ನೇಮಕಾತಿ ಅಧಿಸೂಚನೆ ಹೊರಡಿಸಬೇಕು.ಪರೀಕ್ಷಾರ್ಥಿಗಳಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ಧಾರವಾಡದಲ್ಲಿಉದ್ಯೋಗಾಕಾಂಕ್ಷಿಗಳು ಹೆಚ್ಚಿರುವ ಜಯನಗರ, ಸಪ್ತಾಪುರ, ಶ್ರೀನಗರ, ಕಲ್ಯಾಣನಗರ ಭಾಗದಲ್ಲಿಅವರಿಗೆ ಅನುಕೂಲವಾಗುವಂತೆ ಇಂದಿರಾ ಕ್ಯಾಂಟೀನ್ ತೆರೆಯಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿಭವಾನಿ ಶಂಕರ್ ಎಸ್ ಗೌಡ, ವೀರೇಶ್ ನರೇಗಲ್ , ಪುನೀತ ಹೊನ್ನಣ್ಣವರ, ಮಲ್ಲೇಶ ಚೌಹಾನ, ಯಲ್ಲಪ್ಪ ದೊರೆ, ಹನುಮಂತ ಇದ್ದರು.