2026ಕ್ಕೆ ಜಿಲ್ಲೆಅಭಿವೃದ್ಧಿ ಕನಸು
*ಬೇಲೂರು, ಹಳೇಬೀಡಿನಲ್ಲಿಪ್ರವಾಸಿಗರಿಗೆ ಸೂಕ್ತ ಸೌಲಭ್ಯ *ಪ್ರವಾಸೋದ್ಯಮ ಪ್ರಗತಿಗೆ ಒತ್ತು
ವಿಕ ಸುದ್ದಿಲೋಕ, ಹಾಸನ
ಜಿಲ್ಲೆಯಲ್ಲಿ2026ಕ್ಕೆ ನಾನಾ ಅಭಿವೃದ್ಧಿ ಕಾರ್ಯಕ್ರಮಗಳು, ಪ್ರವಾಸೋದ್ಯಮ ಪ್ರಗತಿಯ ಚಿಂತನೆಗಳು ನಡೆದಿವೆ. ಜತೆಗೆ ಸಮಾವೇಶಗಳು, ಜಾತ್ರೆಗಳು ಸಾಲು ಸಾಲಾಗಿ ಬರಲಿವೆ. ಈ ನಿಟ್ಟಿನಲ್ಲಿಜಿಲ್ಲೆಯಲ್ಲಿನಡೆಯುವ ಪ್ರಮುಖ ಘಟನಾವಳಿಗಳ ಕುರಿತು ‘ವರ್ಷದ ಮುನ್ನೋಟ’ ಬೆಳಕು ಚೆಲ್ಲಿದೆ.
*ಜ.24ಕ್ಕೆ ಜೆಡಿಎಸ್ ಬೃಹತ್ ಸಮಾವೇಶ
ಜೆಡಿಎಸ್ ಭದ್ರಕೋಟೆ ಹಾಸನ ಜಿಲ್ಲೆಯಲ್ಲಿವಿಧಾನಸಭೆ ಚುನಾವಣೆಯಲ್ಲಿಕೇವಲ ನಾಲ್ಕು ಕ್ಷೇತ್ರ ಹಿಡಿತಕ್ಕೆ ತೆಗೆದುಕೊಳ್ಳಲು ಸಾಧ್ಯವಾಗಿದೆ. ಲೋಕಸಭೆ ಚುನಾವಣೆಯಲ್ಲಿಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದರೂ ಗೆಲುವಿನ ದಡ ಸೇರಲು ಸಾಧ್ಯವಾಗಲಿಲ್ಲ. ಇದು ಪಕ್ಷದ ಹಿನ್ನೆಡೆ ಎಂದು ಭಾವಿಸಿರುವ ತೆನೆಪಕ್ಷ 2026ರ ಜ.24ರಂದು ಹಾಸನದಲ್ಲಿಬೃಹತ್ ಸಮಾವೇಶದ ಮೂಲಕ ತನ್ನ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ.
*ಹಾಸನಾಂಬ ಶೀಘ್ರ ದರ್ಶನಕ್ಕೆ ಪ್ಲ್ಯಾನ್
ವರ್ಷಕ್ಕೆ ಒಮ್ಮೆ ದರ್ಶನ ನೀಡುವ ಹಾಸನಾಂಬ ದರ್ಶನ 2026ರ ಅ.29ರಿಂದ ನ.11ರ ವರೆಗೆ ಇರಲಿದೆ. ಈ ಬಾರಿ ಸುಲಲಿತ ಹಾಗೂ ಶೀಘ್ರ ದರ್ಶನಕ್ಕಾಗಿ ಜಿಲ್ಲಾಉಸ್ತುವಾರಿ ಸಚಿವ ಕೃಷ್ಣಬೈರೇಗೌಡರ ಸೂಚನೆ ಅನ್ವಯ ಜಿಲ್ಲಾಡಳಿತ ಕಾರ್ಯಪ್ರವೃತ್ತವಾಗಿದೆ. ದೇಗುಲದ ಗರ್ಭಗುಡಿ ಹೊರತಾಗಿ ಹೊರಭಾಗದಲ್ಲಿವಿಸ್ತರಣೆಗೆ ನೀಲನಕ್ಷೆ ರೂಪಿಸುತ್ತಿದೆ. ದೇಗುಲದ ಹೊರ ಭಾಗದ ಹಳೆಯ ಕಟ್ಟಡಗಳನ್ನು ಸ್ವಾಧೀನಪಡಿಸಿಕೊಂಡು ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳುವ ಸಂಬಂಧ ಜನವರಿಯಿಂದ ವೇಗ ನೀಡಲು ಜಿಲ್ಲಾಡಳಿತ ಪೂರ್ವ ತಯಾರಿ ಮಾಡಿಕೊಳ್ಳುತ್ತಿದೆ. 2025ರಲ್ಲಿ25 ಲಕ್ಷ ಭಕ್ತರು ಹಾಸನಾಂಬೆ ದರ್ಶನ ಪಡೆದಿದ್ದು, ದಾಖಲೆಯ 25.59 ಕೋಟಿ ರೂ. ಸಂಗ್ರಹವಾಗಿದೆ. ಈ ಹಿನ್ನೆಲೆಯಲ್ಲಿಮುಂದಿನ ವರ್ಷದಲ್ಲಿಇನ್ನೂ ಹೆಚ್ಚಿನ ಭಕ್ತರು ಆಗಮಿಸುವ ಸಾಧ್ಯತೆ ಕಾರಣ ಈಗಲೇ ಅಗತ್ಯ ಸೌಲಭ್ಯ ಒದಗಿಸಲು ಜನವರಿಯಲ್ಲಿಸಭೆ ನಡೆಸಲು ಜಿಲ್ಲಾಡಳಿತ ಮುಂದಾಗಿದೆ.
*ಪ್ರವಾಸೋದ್ಯಮ ಪ್ರಗತಿಗೆ ಚಿಂತನೆ
ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಯೋಜನೆ ರೂಪಿಸುತ್ತಿರುವ ಜಿಲ್ಲಾಡಳಿತ ಬೇಲೂರು-ಹಳೇಬೀಡಿನಲ್ಲಿಪಾರ್ಕಿಂಗ್ ವ್ಯವಸ್ಥೆ, ಫುಡ್ ಶೆಲ್ಟರ್ ನಿರ್ಮಾಣಕ್ಕೂ ಚಿಂತನೆ ನಡೆಸಿದೆ. ಶಾಲಾ ಮಕ್ಕಳು, ಪ್ರವಾಸಿಗರು ದೇಗುಲ ಆವರಣದಲ್ಲೇ ಆಹಾರ ತಯಾರಿಸುವುದನ್ನು ತಪ್ಪಿಸಿ ಸೂಕ್ತ ಸೌಲಭ್ಯ ಒದಗಿಸಲು ಚಿಂತನೆ ನಡೆಸಿದೆ.
*ಬೃಂದಾವನ ನಿರ್ಮಾಣಕ್ಕೆ ನೀಲನಕ್ಷೆ
ಗೊರೂರು ಹೇಮಾವತಿ ಜಲಾಶಯ ಆವರಣ ಬೃಂದಾವನ ಮಾದರಿ ಅಭಿವೃದ್ಧಿಗೆ ನೀಲನಕ್ಷೆ ತಯಾರಿಸಲು ಉದ್ದೇಶಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಡಿ.6ರಂದು ಗೊರೂರು ಅಭಿವೃದ್ಧಿ ಬಗ್ಗೆ ಪ್ರಸ್ತಾಪಿಸಿರುವ ಹಿನ್ನೆಲೆಯಲ್ಲಿಕೆಆರ್ ಎಸ್ ಮಾದರಿ ಅಭಿವೃದ್ಧಿ ಪಡಿಸಿ ಪ್ರವಾಸಿ ತಾಣವಾಗಿ ಆಕರ್ಷಿಸುವಂತಾಗಬೇಕು. ಆ ಮೂಲಕ ಆರ್ಥಿಕ ಚಟುವಟಿಕೆಗೂ ಉತ್ತೇಜನ, ಉದ್ಯೋಗ ಸೃಷ್ಟಿ ಮಾಡಬೇಕು ಎಂದು ನಿರ್ಧರಿಸಲಾಗಿದೆ.
*ಸುಂದರ ನಗರ ಸಂಕಲ್ಪ
ಹಾಸನ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿರಸ್ತೆ ಅಭಿವೃದ್ಧಿ, ಮೂಲ ಸೌಕರ್ಯ, ನಗರ ಸೌಂದರ್ಯಕ್ಕೆ ಕ್ರಮಕೈಗೊಳ್ಳಲು ಚಿಂತನೆ ನಡೆಸಿದೆ. ಪಾಲಿಕೆ ಎಂದರೆ ನಗರ ಸುಂದರವಾಗಿರಬೇಕು, ಪಾದಚಾರಿ ರಸ್ತೆ ವಿಶಾಲವಾಗಿರಬೇಕು. ಈ ನಿಟ್ಟಿನಲ್ಲಿಯೋಜನಾ ಬದ್ಧವಾಗಿ ಅಭಿವೃದ್ಧಿಪಡಿಸಲು ಜಿಲ್ಲಾಡಳಿತ ಮುಂದಾಗಿದೆ.
*ಬಾಲ್ಯವಿವಾಹ ಮುಕ್ತ ಜಿಲ್ಲೆ
ಚನ್ನರಾಯಪಟ್ಟಣದಲ್ಲಿಅಪ್ರಾಪ್ತ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ, ಗರ್ಭಿಣಿಯಾದ ಪ್ರಕರಣವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದ್ದು, ಶಾಲೆಗಳಲ್ಲಿಕಡ್ಡಾಯವಾಗಿ ಸಿಸಿ ಕ್ಯಾಮೆರಾ ಅಳವಡಿಸಬೇಕು, ವಾಹನಗಳಲ್ಲಿಜಿಪಿಎಸ್ ಅಳವಡಿಸಲು ಸೂಚಿಸಿದೆ. ಲೈಂಗಿಕ ದೌರ್ಜನ್ಯ, ಬಾಲ್ಯ ವಿವಾಹ ಮುಕ್ತ ಜಿಲ್ಲೆಯಾಗಿಸಲು ಪಣತೊಟ್ಟಿದೆ.
*ರಸ್ತೆ ಅಪಘಾತ ತಡೆಗೆ ಕ್ರಮ
ಹಾಸನ ತಾಲೂಕಿನ ಮೊಸಳೆಹೊಸಳ್ಳಿಯಲ್ಲಿಗಣೇಶ ಮೆರವಣಿಗೆ ವೇಳೆ ಸಂಭವಿಸಿದ ಟ್ರಕ್ ದುರಂತದಲ್ಲಿಹತ್ತು ಜನ ಅಮಾಯಕರು ಮೃತಪಟ್ಟ ಪ್ರಕರಣದ ಹಿನ್ನೆಲೆಯಲ್ಲಿಅಪಘಾತ ತಡೆಗೆ ಅಗತ್ಯ ಕ್ರಮಕ್ಕೆ ನಿರ್ಧರಿಸಿದೆ. ಅಪಘಾತ ಸ್ಥಳಗಳನ್ನು ಗುರುತಿಸಿ ಬ್ಲಾಕ್ ಸ್ಪಾಟ್ ಗಳ ಮೇಲೆ ತೀವ್ರ ನಿಗಾವಹಿಸುವುದು, ಏನೆಲ್ಲಮಾರ್ಪಾಡು ಮಾಡಬಹುದು ಎಂದು ಎಂಜಿನಿಯರ್ ಗಳಿಂದ ಹಾಗೂ ಪೊಲೀಸರಿಂದ ಮಾಹಿತಿ ಪಡೆಯಲಾಗಿದೆ. ಸೈನ್ ಬೋರ್ಡ್ , ವೇಗ ನಿಯಂತ್ರಣಕ್ಕೆ ಕ್ರಮ, ಅಪಘಾತ ರಹಿತ ಚಾಲನೆಗೆ ಒತ್ತು ನೀಡಿ ಅಪಘಾತ ಮುಕ್ತ ಜಿಲ್ಲೆಯಾಗಿಸಬೇಕು ಎಂಬ ನಿಟ್ಟಿನಲ್ಲಿರಸ್ತೆ ಸುರಕ್ಷತಾ ಸಮಿತಿ ಗಂಭೀರ ಚಿಂತನೆ ನಡೆಸಿದೆ ಎನ್ನುತ್ತಾರೆ ಜಿಲ್ಲಾಧಿಕಾರಿ ಲತಾಕುಮಾರಿ.

