ಹಸಿರು ಮೇವಿನ ಕೊರತೆಯಿಂದ ಹಾಲಿನ ಇಳುವರಿ ಕುಸಿತ
ವಿಕ ವಿಶೇಷ ಸಾತನೂರು/ ಮಾಗಡಿ (ಬೆಂ.ದಕ್ಷಿಣ)
ಕಳೆದ ಒಂದು ತಿಂಗಳಿಂದ ಮುಂದುವರಿದ ತೀವ್ರ ಬೇಸಿಗೆ ಬಿಸಿಲು ಮತ್ತು ಮಳೆಯ ಕೊರತೆಯಿಂದ ಕನಕಪುರ ತಾಲೂಕಿನ ಸಾತನೂರು ಹೋಬಳಿ ಸೇರಿದಂತೆ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿಹೈನುಗಾರಿಕೆ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಹಸಿರು ಮೇವಿನ ಕೊರತೆ, ಅಂತರ್ಜಲ ಮಟ್ಟ ಕುಸಿತ ಮತ್ತು ಕುಡಿಯುವ ನೀರಿನ ಅಭಾವದಿಂದ ಹಸುಗಳಲ್ಲಿಹಾಲಿನ ಇಳುವರಿ ಗಣನೀಯವಾಗಿ ಕಡಿಮೆಯಾಗಿದ್ದು, ರೈತರ ಆತಂಕ ಹೆಚ್ಚಿಸಿದೆ.
ಬಿಸಿಲಿನ ತಾಪಮಾನ ಹೆಚ್ಚಾದ ಪರಿಣಾಮವಾಗಿ ಜಮೀನಿನಲ್ಲಿಬೆಳೆದಿದ್ದ ಸೀಮೆ ಹುಲ್ಲು, ಜೋಳ ಸೇರಿದಂತೆ ನಾನಾ ಹಸಿರು ಮೇವುಗಳು ಒಣಗಿ ಹೋಗಿವೆ. ಇದೇ ವೇಳೆ ಕೊಳವೆಬಾವಿಗಳಲ್ಲಿನೀರಿನ ಮಟ್ಟ ಕುಸಿದು ಹಲವು ಬಾವಿಗಳು ಬರಿದಾಗಿರುವುದು ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ. ಇದರಿಂದ ಹೈನುಗಾರಿಕೆ ರೈತರು ದುಬಾರಿ ಬೆಲೆಯಲ್ಲಿಹಸಿರು ಮೇವು ಖರೀದಿ ಮಾಡಲು ಮುಂದಾಗುವಂತಾಗಿದೆ.
ಹಸಿರು ಮೇವಿನ ಕೊರತೆಯ ಪರಿಣಾಮವಾಗಿ ಹಸುಗಳಲ್ಲಿಹಾಲಿನ ಉತ್ಪಾದನೆ ಮಾತ್ರವಲ್ಲದೆ, ಅದರ ಗುಣಮಟ್ಟದಲ್ಲೂಕುಸಿತ ಕಂಡುಬರುತ್ತಿದೆ. ಬಿಸಿಲಿನ ತೀವ್ರತೆಯಿಂದ ಪಶುಗಳಲ್ಲಿನಿಶಕ್ತಿ ಹಾಗೂ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ ಎಂದು ಪಶುವೈದ್ಯರು ಎಚ್ಚರಿಸಿದ್ದಾರೆ.
ಇದೇ ಪರಿಸ್ಥಿತಿ ಇನ್ನೂ ಕೆಲ ದಿನಗಳು ಮುಂದುವರಿದರೆ ಹೈನುಗಾರಿಕೆ ನಡೆಸುವುದು ಕಷ್ಟವಾಗುವ ಸಾಧ್ಯತೆ ಇದೆ. ಶೀಘ್ರದಲ್ಲೇ ಉತ್ತಮ ಮಳೆಯಾದರೆ ಮಾತ್ರ ಪರಿಸ್ಥಿತಿ ಸುಧಾರಿಸುವ ನಿರೀಕ್ಷೆಯಿದೆ.
ಕೋಟ್
ಹೆಚ್ಚಿನ ತಾಪಮಾನದಿಂದ ಹಸಿರು ಹುಲ್ಲುಒಣಗಿ, ಹಸುಗಳಿಗೆ ಮೇವಿನ ಕೊರತೆ ಉಂಟಾಗಿದೆ. ಇದರಿಂದ ಹಾಲಿನ ಇಳುವರಿ ಹಾಗೂ ಕೊಬ್ಬಿನ ಪ್ರಮಾಣ ಕಡಿಮೆಯಾಗುತ್ತಿದೆ. ಹಸುಗಳಿಗೆ ನೆರಳು ಮತ್ತು ಸಾಕಷ್ಟು ನೀರಿನ ವ್ಯವಸ್ಥೆ ಮಾಡುವುದು ಅಗತ್ಯ.
-ಡಾ. ಗಿರೀಶ್ | ಹಿರಿಯ ಪಶುವೈದ್ಯ
-------
ಕಚ್ಚುವನಹಳ್ಳಿ, ಅರೆಕಟ್ಟೆದೊಡ್ಡಿ, ಕಬ್ಬಾಳು, ಕಂಸಾಗರ, ಹೊಸ ಕಬ್ಬಾಳು ಸೇರಿದಂತೆ ಹಲವು ಗ್ರಾಮಗಳಲ್ಲಿಹೈನುಗಾರಿಕೆ ಪ್ರಮುಖ ಜೀವನಾಧಾರವಾಗಿದ್ದು, ಈಗಿನ ಪರಿಸ್ಥಿತಿ ರೈತರ ಬದುಕಿನ ಮೇಲೆ ನೇರ ಪರಿಣಾಮ ಬೀರುತ್ತಿದೆ. ಕಳೆದ ತಿಂಗಳಿಂದ ಮಳೆ ಇಲ್ಲದೆ ಮೇವಿನ ಕೊರತೆ ಉಂಟಾಗಿ ಹಾಲಿನ ಉತ್ಪಾದನೆ ಕಡಿಮೆಯಾಗಿದೆ.
-ನಾಗೇಶ್ | ಹೈನುಗಾರಿಕೆ ರೈತ
12 ಸಾತನೂರು 01: ಹಸಿರು ಮೇವಿನ ಕೊರತೆಯಿಂದ ಒಣ ಹುಲ್ಲುನ್ನು ಮೇಯುತ್ತಿರುವ ಹೈನುಗಾರಿಕೆ ಹಸುಗಳು.

