ಕುಟುಂಬಕ್ಕೆ ಆಸರೆಯಾಗಬೇಕಿದ್ದ ಹಿರಿಯಣ್ಣನೇ ಈ ಕುಟುಂಬಕ್ಕೆ ಹದ್ದಾಗಿ ಕುಕ್ಕಿದ್ದಾನೆ. ವೃದ್ಧಾಪ್ಯದಲ್ಲಿಊರುಗೋಲಾಗಿ ನಿಲ್ಲಬೇಕಿದ್ದ ಈತ ತನ್ನ ತಂದೆ ಮತ್ತು ತಂಗಿಯ ಜೀವ ತೆಗೆದು ಜೈಲು ಪಾಲಾದರೂ ರಕ್ತದ ರುಚಿ ನೋಡಬೇಕೆಂಬ ಕ್ರೌರ್ಯ ಮಾತ್ರ ಕಡಿಮೆಯಾಗಲಿಲ್ಲ. ಕೊನೆಗೆ ತನ್ನ ಪುತ್ರನಿಂದಲೇ ಹತನಾಗಿದ್ದಾನೆ!
ಕೇಳಲು ಥೇಟ್ ಸಿನಿಮಾ ಕಥೆಯಂತೆ ಕಂಡರೂ ಇದು ನಡೆದಿದ್ದು ಸಾಗರ ತಾಲೂಕು ಬ್ಯಾಕೋಡು ಸಮೀಪದ ಗೊರಗೋಡು ಎಂಬ ಕುಗ್ರಾಮದಲ್ಲಿ. ಅದು ಒಂದು ಪುಟ್ಟ ಹಳ್ಳಿ. 9 ಸದಸ್ಯರ ಮುದ್ದಾದ ಕುಟುಂಬ. ಆದರೆ ಅಂದು ನಡೆದ ಒಂದು ಘಟನೆ ಈ ಕುಟುಂಬಕ್ಕೆ ಸೂತಕವಾಗಿ ಕಾಡಿತು. ಕತ್ತಿ ಝಳಪಿಸುವಾಗ ಯಾವ ಸಂಬಂಧಗಳೂ ಅಡ್ಡಿ ಬರಲಿಲ್ಲ. ಪರಿಣಾಮ ಜೇನಿನ ಗೂಡಿನಂತಿದ್ದ ಕುಟುಂಬ ನುಚ್ಚುನೂರಾಗಿದೆ.
ಈ ಇಡೀ ಕುಟುಂಬದ ಪಾಲಿಗೆ ಖಳನಾಯಕನಾಗಿದ್ದೇ 60 ವರ್ಷದ ‘ಸುಬ್ರಾಯ’ (ಕುಟುಂಬದ ಹಿರಿಯಣ್ಣ). ಈತ ತನ್ನ ತಂದೆ ಮಂಜುನಾಯ್ಕ ಮತ್ತು ತಂಗಿ ವಸಂತಿಯ ಕುತ್ತಿಗೆ ಸೀಳಿ 20 ವರ್ಷಗಳ ಹಿಂದೆ ಕೊಲೆ ಮಾಡಿದ್ದ. ಇದೆಲ್ಲವೂ ನಡೆದಿದ್ದು ಅಕ್ಕ ರತ್ನಮ್ಮ (45)ಳ ಸಾವಿನಿಂದ. ಅದೊಂದು ದಿನ ಈಕೆ ಜಮೀನಿಗೆ ಕೆಲಸಕ್ಕೆಂದು ಹೋದಾಗ ಹಾವು ಕಚ್ಚಿ ಮೃತಪಟ್ಟಿದ್ದರು. ಇದೊಂದು ಘಟನೆ ಸುಬ್ರಾಯನ ಮನಸ್ಸಿನ ಮೇಲೆ ಅದೆಷ್ಟು ಗಾಢ ಪರಿಣಾಮ ಬೀರಿತೆಂದರೆ, ಮಾನಸಿಕವಾಗಿ ಜರ್ಜರಿತನಾದ. ಈ ಘಟನೆಯ ಬಳಿಕ ಕುಟುಂಬದಲ್ಲಿನಿತ್ಯ ಅಶಾಂತಿ ತಲೆದೋರಿತು. ಸುಬ್ರಾಯ ನಿತ್ಯ ಮನೆಯಲ್ಲಿಜಗಳವಾಡಲಾರಂಭಿಸಿದ.
ಒಂದು ದಿನ ಕುಡಿದ ಅಮಲಿನಲ್ಲಿಕುಟುಂಬದವರ ಮೇಲೆ ಕತ್ತಿಯಿಂದ ಹಲ್ಲೆನಡೆಸಿದ್ದ. ತೀವ್ರ ಗಾಯಗೊಂಡ ಅಪ್ಪ ಮತ್ತು ತಂಗಿ ಮೃತಪಟ್ಟರೆ, ಅದೃಷ್ಟವಷಾತ್ ತಾಯಿ ಗೌರಮ್ಮ, ತಮ್ಮ ಹಿರಿಯಪ್ಪ ಪ್ರಾಣಾಪಾಯದಿಂದ ಪಾರಾದರು. ಅಂದು ಮನೆಯಲ್ಲಿಸುಬ್ರಾಯನ ಪತ್ನಿ ಮತ್ತು ಮಕ್ಕಳು ತವರು ಮನೆಗೆ ಹೋಗಿದ್ದರಿಂದ ಬದುಕುಳಿದರು. ಕೊಲೆ ಆರೋಪದಲ್ಲಿಜೈಲು ಪಾಲಾದ ಸುಬ್ರಾಯ 14 ವರ್ಷ ಕಾರಾವಾಸ ಅನುಭವಿಸಿ ಬಿಡುಗಡೆಯಾಗಿ ಮರಳಿ ಮನೆಗೆ ಬಂದ. ಇಷ್ಟಾದರೂ ಅವನಲ್ಲಿನ ಕ್ರೌರ್ಯ ಕಡಿಮೆಯಾಗಿರಲಿಲ್ಲ.
ಜೈಲಿನಿಂದ ಬಂದ ಕೇವಲ ಒಂದೇ ತಿಂಗಳಲ್ಲಿತನ್ನ ಪತ್ನಿಯನ್ನು ಕೊಲೆ ಮಾಡಲು ಯತ್ನಿಸಿದ್ದ. ಈ ಸಂಬಂಧ ಆತನ ಪುತ್ರ ಜಯಂತ್ ನೀಡಿದ ದೂರಿನ ಮೇರೆಗೆ ಸುಬ್ರಾಯ ಮತ್ತೆ ಜೈಲು ಪಾಲಾದ. ಕಳೆದ ಮೇ ತಿಂಗಳಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ ಆತ ಸ್ವಂತ ಊರಿಗೆ ಬಾರದೆ ಬೇರೆಡೆ ನೆಲೆಸಿದ್ದ. ಕಳೆದ ವಾರವಷ್ಟೇ ಸ್ವಂತ ಊರಿಗೆ ಬಂದಿದ್ದ.
ಈ ಹಿಂದೆ ತನ್ನ ತಾಯಿಯ ಮೇಲೆ ತಂದೆ ಮಾಡಿದ ಕ್ರೌರ್ಯ, ನಿರಂತರ ನಡೆಸಿದ ಕಿರುಕುಳ ಜಯಂತನ ಮನಸ್ಸಿನಲ್ಲಿಗಾಢವಾಗಿ ಪರಿಣಾಮ ಬೀರಿ, ವೈರತ್ವದ ಸ್ವರೂಪ ತಾಳಿಯಾಗಿತ್ತು. ಕಳೆದ ಮಂಗಳವಾರ ಸುಬ್ರಾಯ ಮತ್ತು ಜಯಂತ್ ನಡುವೆ ನಡೆದ ಜಗಳ ತಾರಕಕ್ಕೇರಿತು. ತಂದೆಯ ಮೇಲೆ ಕೋಲಿನಿಂದ ಗಂಭೀರ ಹಲ್ಲೆನಡೆಸಿ ಕೊಲೆ ಮಾಡಿ, ಚಿಕ್ಕಪ್ಪನ ಗದ್ದೆಯಲ್ಲಿದ್ದ ಬಾವಿಗೆ ಎಸೆದು ಪರಾರಿಯಾಗಿದ್ದ.
===
(ಬಾಕ್ಸ್ )
ತನಿಖೆ ವೇಳೆ ಸ್ಕೆಚ್ ಬಯಲು
ಕೊಲೆಯ ಹಿಂದಿನ ರಹಸ್ಯವನ್ನು ಬಯಲಿಗೆಳೆಯುವ ಉದ್ದೇಶದಿಂದ ಕಾರ್ಗಲ್ ಠಾಣೆ ಪೊಲೀಸರು ತನಿಖೆ ನಡೆಸಿದಾಗ ಜಯಂತನೆಡೆಗೆ ಬೊಟ್ಟುಗಳು ಎದ್ದಿವೆ. ಅದರ ಜಾಡು ಹಿಡಿದ ಪೊಲೀಸರಿಗೆ ಪುತ್ರನೇ ತಂದೆಯ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಪೊಲೀಸರು ವಿಚಾರಣೆ ನಡೆಸಿದಾಗ ಈ ಎಲ್ಲವಿಚಾರಗಳನ್ನು ಜಯಂತ್ ಒಪ್ಪಿಕೊಂಡಿದ್ದಾನೆ.
ಅಂದು ಕೋಪ ಮತ್ತು ಮಾನಸಿಕ ಅಸಮತೋಲನದಿಂದ ಸುಬ್ರಾಯ ತನ್ನ ತಂದೆ ಮತ್ತು ತಂಗಿಯನ್ನು ಕೊಂದಿದ್ದ. ಅದೇ ಕ್ರೌರ್ಯದ ನೆರಳಲ್ಲಿಬೆಳೆದ ಸುಬ್ರಾಯನ ಪುತ್ರ ಜಯಂತ್ ತನ್ನ ತಂದೆಯನ್ನೇ ಕೊಲೆ ಮಾಡಿ ಜೈಲು ಪಾಲಾಗಿದ್ದಾನೆ. ಒಂದು ಕಾಲದಲ್ಲಿತುಂಬು ಸಂಸಾರವಾಗಿದ್ದ ಕುಟುಂಬ ಇಂದು ದುಃಖದಲ್ಲಿಮುಳುಗಿದೆ. ಕುಟುಂಬದಲ್ಲಿಬದುಕುಳಿದವರು ಕಣ್ಣೀರಲ್ಲಿಕೈತೊಳೆಯುವಂತಾಗಿದೆ. ಸಣ್ಣ ಜಗಳ ಮತ್ತು ಕ್ರೌರ್ಯ ಇಡೀ ಕುಟುಂಬದ ಸಂತೋಷವನ್ನು ಬಲಿ ಪಡೆದಿದೆ.