ವಿಕ ಸುದ್ದಿಲೋಕ ಸಿಂದಗಿ ‘‘ಕುರುಬ ಸಮುದಾಯಕ್ಕೆ ಎಸ್ ಟಿ ಮೀಸಲು ಕಲ್ಪಿಸುವ ಸಲುವಾಗಿ ಸಿದ್ದರಾಮಯ್ಯ ಮುಖ್ಯ ಮಂತ್ರಿ ಯಾಗಿದ್ದ ವೇಳೆಯೇ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನಕ್ಕಾಗಿ ವರದಿ ಸಲ್ಲಿಸಿದ್ದರು. ಆದರೆ ಕೇಂದ್ರ ಸರಕಾರ ಸ್ವೀಕರಿಸಿಲ್ಲ,’’ ಎಂದು ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು. ನಗರದಲ್ಲಿಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನೌಕರರ ತಾಲೂಕು ಸಂಘ ಭಾನುವಾರ ಹಮ್ಮಿಕೊಂಡಿದ್ದ ಸಂಗೊಳ್ಳಿ ರಾಯಣ್ಣ ಜಯಂತ್ಯುತ್ಸವ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.‘‘ಸಮುದಾಯದ ಬಹು ವರ್ಷಗಳ ಬೇಡಿಕೆಯಾಗಿರುವ ಎಸ್ಟಿ ಮೀಸಲು ಕುರಿತು ಸಿದ್ದರಾಮಯ್ಯ ಸಲ್ಲಿಸಿರುವ ವರದಿಯನ್ನು ಸ್ವೀಕರಿಸಿ ಮೀಸಲು ನೀಡುವ ತೀರ್ಮಾನವನ್ನು ಕೇಂದ್ರ ಸರಕಾರ ಮಾಡಬೇಕಿದೆ. ಹೀಗಾಗಿ ಈ ಕುರಿತು ಕೇಂದ್ರ ಸರಕಾರಕ್ಕೆ ಒಗ್ಗಟ್ಟಿನಿಂದ ಒತ್ತಾಯಿಸಬೇಕಿದೆ,’’ ಎಂದರು.‘‘ ನಮ್ಮ ತಂದೆ ಪಶುಭಾಗ್ಯ ಯೋಜನೆಯಡಿ ಕುರಿಗಾಹಿಗಳ ನೆರವಿಗೆ ಅನೇಕ ಸೌಲಭ್ಯಗಳನ್ನು ಜಾರಿಗೆ ತಂದಿದ್ದರು. ರಾಯಣ್ಣನ ಜನ್ಮ ಸ್ಥಳ ಸಂಗೊಳ್ಳಿಯಲ್ಲಿ67 ಕೋಟಿ ರೂ. ವೆಚ್ಚದ ಸ್ಮಾರಕ, ವಸ್ತು ಸಂಗ್ರಹಾಲಯ ಸೇರಿದಂತೆ ಮೂರ್ತಿ ಪ್ರತಿಷ್ಠಾಪನೆ ಮಾಡಿ, ಅಭಿವೃದ್ಧಿಗೊಳಿಸಲಾಗಿದೆ,’’ ಎಂದರು. ಸಾನ್ನಿಧ್ಯವಹಿಸಿದ್ದ ಧಾರವಾಡದ ರೇವಣಸಿದ್ದೇಶ್ವರ ಮಠದ ಬಸವರಾಜ ದೇವರು, ಮಾಜಿ ಸಚಿವ ಬಂಡೆಪ್ಪ ಕಾಶಂಪೂರ, ಶಾಸಕ ಅಶೋಕ ಮನಗೂಳಿ, ಬಿಜೆಪಿ ಮುಖಂಡ ಶರಣು ತಳ್ಳಿಕೇರಿ, ಕಾಂತೇಶ ಕೆ.ಇ, ಮಾಜಿ ಶಾಸಕ ಶರಣಪ್ಪ ಸುಣಗಾರ ಮಾತನಾಡಿದರು. ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಚನ್ನಪ್ಪ ಕಟ್ಟಿ ಉಪನ್ಯಾಸ ನೀಡಿದರು. ಅಭಿನವ ಪುಂಡಲಿಂಗ ಶ್ರೀಗಳು, ಕನ್ನಯ್ಯ ಮಹಾರಾಜರು, ಮಾಜಿ ಶಾಸಕ ರಮೇಶ ಭೂಸನೂರ, ತಹಸೀಲ್ದಾರ್ ಕರೆಪ್ಪ ಬೆಳ್ಳಿ, ಮಲ್ಲಣ್ಣ ಸಾಲಿ, ನಾಗಪ್ಪ ಶಿವೂರ, ಪ್ರಕಾಶ ಹಿರೇಕುರುಬರ, ಎಸ್ .ಕೆ.ಪೂಜಾರಿ, ಮಲ್ಲುಸಾವಳಸಂಗ, ರಾಯಪ್ಪ ಇವಣಗಿ, ಶಿಲ್ಪಾ ಕುದರಗೊಂಡ ಮತ್ತಿತರರಿದ್ದರು.