ಹಾರನಹಳ್ಳಿ ಗ್ರಾಪಂ ಪಿಡಿಒ ಅಧಿಕಾರ ಸ್ವೀಕಾರ *5 ತಿಂಗಳಿಂದ ಕೆಲಸ ಬಾಕಿ | ಸಾರ್ವಜನಿಕರ ದೂರು ವಿಕ ಸುದ್ದಿಲೋಕ ಅರಸೀಕೆರೆ ತಾಲೂಕು ಹಾರನಹಳ್ಳಿ ಗ್ರಾಪಂ ಪಿಡಿಒ ಮಂಜಮ್ಮ ಸೋಮವಾರ ಅಧಿಕಾರ ಸ್ವೀಕರಿಸಿದರು. ಕಳೆದ 5 ತಿಂಗಳಿಂದ ಪಿಡಿಒ ಇಲ್ಲದೆ ಅನೇಕ ಸಾರ್ವಜನಿಕರ ಕೆಲಸ ಬಾಕಿ ಇದೆ ಎಂಬ ದೂರು ವ್ಯಾಪಕವಾಗಿತ್ತು. ಹಾಲಿ ಪಂಚಾಯಿತಿಯಲ್ಲಿಕಾರ್ಯದರ್ಶಿಯಾಗಿದ್ದ ಚಂದ್ರಶೇಖರ್ ಪ್ರಭಾರ ಪಿಡಿಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಅಧಿಕಾರಿಗಳ ಆದೇಶದ ಮೇರೆಗೆ ಮಂಜಮ್ಮ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಮುಸುಕಿನ ಗುದ್ದಾಟ: ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ನಿರ್ದೇಶಕರ ಕಚೇರಿಯಿಂದ ಮಂಜಮ್ಮ ಅವರನ್ನು ಅಕ್ಟೋಬರ್ ನಲ್ಲಿಹಾರನಹಳ್ಳಿ ಗ್ರಾಪಂ ಪಿಡಿಒ ಆಗಿ ವರ್ಗಾವಣೆ ಮಾಡಲಾಗಿತ್ತು. ಅವರು ಕಚೇರಿಗೆ ಬಂದು ರಜಾ ಹಾಕಿ ಹೋಗಿದ್ದ ಹಿನ್ನೆಲೆಯಲ್ಲಿಚಂದ್ರಶೇಖರ್ ಗೆ ಕರ್ತವ್ಯ ನಿರ್ವಹಿಸಲು ಗ್ರಾಪಂ ಸದಸ್ಯರು ಸ್ಥಳೀಯ ಮಟ್ಟದಲ್ಲಿಆದೇಶ ಮಾಡಿಸಿದ್ದರು. ಆದರೆ ಅವರು ಸರಿಯಾಗಿ 15 ದಿನ ಕರ್ತವ್ಯ ನಿರ್ವಹಿಸಲು ಆಗಲಿಲ್ಲ. ಅಧ್ಯಕ್ಷರು ಯಾವುದೇ ಕಡತಕ್ಕೆ ಸಹಿ ಹಾಕಲಿಲ್ಲ. ಸದಸ್ಯರ ರಾಜಕೀಯದಿಂದ ಗ್ರಾಮದ ಕೆಲಸಗಳಿಗೆ ಹಿನ್ನಡೆಯಾಗಿದೆ ಎಂಬ ಆರೋಪ ಕೇಳಿಬಂದಿತ್ತು. ವಾರದ ಹಿಂದೆ ಮಂಜಮ್ಮ ಅವರು ಕಚೇರಿಗೆ ಹಾಜರಾಗಿ ಚಾಜ್ ರ್ ಕೊಡುವಂತೆ ಕಾರ್ಯದರ್ಶಿ ಚಂದ್ರಶೇಖರ್ ಬಳಿ ಕೇಳಿದಾಗ ಅವರು ಚಾಜ್ ರ್ ನೀಡದೆ ಸತಾಯಿಸಿದ ಹಿನ್ನೆಲೆಯಲ್ಲಿಕೊನೆಗೆ ಹಿರಿಯ ಅಧಿಕಾರಿಗಳ ಆದೇಶದಂತೆ ಸೋಮವಾರ ಮಂಜಮ್ಮ ಅಧಿಕಾರ ಸ್ವೀಕರಿಸಿದರು. 5 ತಿಂಗಳಿಂದ ಕೆಲಸ ಬಾಕಿ: ಶೀಘ್ರ ನಿವಾರಣೆಗೆ ಆಗ್ರಹ ಕಳೆದ 5 ತಿಂಗಳಿಂದ ಅನೇಕ ಕೆಲಸ ಬಾಕಿ ಇದ್ದು, ಸಾರ್ವಜನಿಕರು ಪ್ರತಿನಿತ್ಯ ಪಂಚಾಯಿತಿಗೆ ಅಲೆಯುವ ಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ‘‘ಗ್ರಂಥಾಲಯಕ್ಕೆ ಪತ್ರಿಕೆ ಸರಬರಾಜು ಮಾಡಿದ ಹಣ ಹಾಗೂ ರಾಷ್ಟ್ರೀಯ ಹಬ್ಬಗಳನ್ನು ಮಾಡಿದ ಖರ್ಚು, ನೌಕರರ ವೇತನ ಇತರೆ ಕಾಮಗಾರಿ ಬಿಲ್ ಗೆ ಗ್ರಾಪಂ ಅಧ್ಯಕ್ಷರು ಸಹಿ ಮಾಡದೆ ಇರುವುದರಿಂದ ಅನೇಕ ಕಡತಗಳು ಧೂಳು ಹಿಡಿದಿವೆ. ಇ ಸ್ವತ್ತು ನೀಡಲು ಅನೇಕ ಅರ್ಜಿಗಳು ಬಂದಿದ್ದು, ಕೇಳುವವರು ಇಲ್ಲದ ಸ್ಥಿತಿಯಾಗಿದೆ. ಹೊಸದಾಗಿ ಕಟ್ಟಿದ ಪಂಚಾಯಿತಿ ಮಳಿಗೆಯ ಬಾಡಿಗೆ ಹಣ ಬಾಕಿಯನ್ನು ಅಧಿಕಾರಿಗಳು ವಸೂಲಾತಿ ಮಾಡಿಲ್ಲಎಂಬ ದೂರಿದೆ. ತುರ್ತು ಕಾಮಗಾರಿಗಳ ಬಗ್ಗೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು, ಬೇಸಿಗೆ ಆರಂಭ ಆಗಿರುವುದರಿಂದ ನೀರಿನ ಅಭಾವ ಆಗದಂತೆ ಹಾಗೂ ಗ್ರಾಮ ಸ್ವಚ್ಛತೆ ಬಗ್ಗೆ ತುರ್ತಾಗಿ ಗಮನಹರಿಸಬೇಕು,’’ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

