ವಿಕ ಸುದ್ದಿಲೋಕ ಬೆಂಗಳೂರು ಅರಣ್ಯದಂಚಿನಲ್ಲಿವನ್ಯಜೀವಿಗಳ ಸಂಚಾರದ ಬಗ್ಗೆ ಮಾಹಿತಿ ಸಿಕ್ಕ ಕೂಡಲೇ ಸಾರ್ವಜನಿಕರಿಗೆ ಎಚ್ಚರಿಕೆ ಸಂದೇಶ ನೀಡಲು ಸ್ಥಳೀಯರ ವಾಟ್ಸ್ ಆ್ಯಪ್ ಗ್ರೂಪ್ ರಚಿಸಲು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಚಿಕ್ಕಮಗಳೂರು ತಾಲೂಕು ಹುಣಸೆಹಳ್ಳಿ ಬಳಿಯ ತೋಟದಲ್ಲಿಆನೆ ದಾಳಿಗೆ ಕಳೆದೊಂದು ವಾರದಲ್ಲಿಇಬ್ಬರು ಕಾರ್ಮಿಕರು ಮೃತಪಟ್ಟಿರುವ ಹಿನ್ನೆಲೆಯಲ್ಲಿಉನ್ನತಾಧಿಕಾರಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ತುರ್ತು ಸಭೆ ನಡೆಸಿದ ಸಚಿವರು ಈ ಸೂಚನೆ ನೀಡಿದರು. ‘‘ವನ್ಯಜೀವಿಗಳು ಕಾಡಿನಿಂದ ಹೊರಗೆ ಬರುವ ಬಗ್ಗೆ ಕಮಾಂಡ್ ಕೇಂದ್ರಕ್ಕೆ ಮಾಹಿತಿ ಬರುತ್ತಿದ್ದಂತೆ ತೋಟಗಳ ಮಾಲೀಕರು, ಕಾರ್ಮಿಕರು ಹಾಗೂ ಸ್ಥಳೀಯರಿಗೆ ಕೂಡಲೇ ಮಾಹಿತಿ ರವಾನಿಸಬೇಕು. ಅದಕ್ಕಾಗಿ ವನ್ಯಜೀವಿ -ಮಾನವ ಸಂಘರ್ಷ ಹೆಚ್ಚಿರುವ ಪ್ರದೇಶಗಳಲ್ಲಿಸ್ಥಳೀಯ ಮುಖಂಡರು, ಕಾರ್ಮಿಕ ಪ್ರತಿನಿಧಿಗಳ ವಾಟ್ಸಪ್ ಗುಂಪು ಮಾಡಿ, ತುರ್ತು ಮಾಹಿತಿ ಮತ್ತು ಎಚ್ಚರಿಕೆ ಸಂದೇಶ ರವಾನಿಸಬೇಕು,’’ ಎಂದು ನಿರ್ದೇಶನ ಕೊಟ್ಟರು. ‘‘ಒಂದು ಜೀವಹಾನಿಯಾಗಿ ವಾರ ಕಳೆಯುವುದರೊಳಗೇ ಅಲ್ಲಿಯೇ ಮತ್ತೊಂದು ಜೀವ ಹಾನಿ ಆಗಿರುವುದು ದುರದೃಷ್ಟಕರ. ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಇಂತಹ ಘಟನೆ ಮರುಕಳಿಸದಂತೆ ದಿನದ 24 ತಾಸೂ ನಿಗಾ ಇಡಬೇಕು. ವನ್ಯಜೀವಿ ಸೆರೆ ಕಾರ್ಯಾಚರಣೆ ವೇಳೆ ಕಡ್ಡಾಯವಾಗಿ ಸೆಕ್ಷನ್ 144 ಜಾರಿ ಮಾಡಬೇಕು. ಥರ್ಮಲ್ ಡ್ರೋನ್ ಸೇರಿ ಅತ್ಯಾಧುನಿಕ ಸಲಕರಣೆಗಳನ್ನು ಬಳಕೆ ಮಾಡಬೇಕು,’’ ಎಂದು ಸೂಚಿಸಿದರು.

