ವಿಕ ಸುದ್ದಿಲೋಕ ಬೆಂಗಳೂರು ರಾಜ್ಯದಲ್ಲಿಪರಿಶಿಷ್ಟ ಜಾತಿಗಳಿಗೆ ಒಳ ಮೀಸಲು ಸೌಲಭ್ಯ ಈವರೆಗೆ ಜಾರಿಯಾಗದಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿಯು ಈ ವಿಚಾರವನ್ನು ರಾಜ್ಯಪಾಲರ ಗಮನಕ್ಕೆ ತಂದಿದೆ. ಮಾಜಿ ಡಿಸಿಎಂ ಗೋವಿಂದ ಕಾರಜೋಳ ನೇತೃತ್ವದಲ್ಲಿಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ, ಶಾಸಕರಾದ ದುರ್ಯೋಧನ ಐಹೊಳೆ, ಬಸವರಾಜ್ ಮತ್ತಿಮಡು, ನಿವೃತ್ತ ಐಎಎಸ್ ಅಧಿಕಾರಿ ಎಂ.ಲಕ್ಷ್ಮೇನಾರಾಯಣ್ ಅವರ ನಿಯೋಗ ಲೋಕಭವನದಲ್ಲಿಸೋಮವಾರ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾಗಿ ಈ ವಿಚಾರವಾಗಿ ಗಮನ ಸೆಳೆಯಿತು. ಸುಪ್ರೀಂಕೋರ್ಟ್ 2024ರ ಆ.1ರಂದು ನೀಡಿದ ತೀರ್ಪು ಆಧರಿಸಿ ತೆಲಂಗಾಣ, ಆಂಧ್ರಪ್ರದೇಶ, ಹರಿಯಾಣ ಸರಕಾರಗಳು ಆರು ತಿಂಗಳಲ್ಲಿಒಳ ಮೀಸಲು ಜಾರಿಗೊಳಿಸಿ ನ್ಯಾಯ ಕಲ್ಪಿಸಿವೆ. ಆದರೆ ಕರ್ನಾಟಕದಲ್ಲಿಇನ್ನೂ ಒಳ ಮೀಸಲು ಜಾರಿಯಾಗದಿರುವುದನ್ನು ನಿಯೋಗ ರಾಜ್ಯಪಾಲರ ಗಮನಕ್ಕೆ ತಂದಿದೆ. ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗ ಆರು ತಿಂಗಳು ಶ್ರಮ ವಹಿಸಿ 110 ಕೋಟಿ ರೂ. ವೆಚ್ಚದಲ್ಲಿಶಿಫಾರಸು ಸಹಿತ ವರದಿ ಸಲ್ಲಿಸಿತ್ತು. ಆದರೆ ಆಯೋಗದಈ ಶಿಫಾರಸು ಪರಿಗಣಿಸದ ಸರಕಾರ ರಾಜಕೀಯ ಒತ್ತಡಕ್ಕೆ ಮಣಿದು 6:6:5ರ ಹೊಸ ಸೂತ್ರ ರೂಪಿಸಿ ಗೊಂದಲ ಸೃಷ್ಟಿಸಿತು. ಹಾಗಾಗಿ ಪರಿಶಿಷ್ಟರ ಎಲ್ಲ101 ಜಾತಿಗಳಲ್ಲಿಯೂ ಅಸಮಾಧಾನ ಹೆಪ್ಪುಗಟ್ಟಿದೆ. ಪರಿಶಿಷ್ಟರ ಎಲ್ಲಗುಂಪುಗಳು ಬೀದಿಗಿಳಿದಿವೆ. ಈಗ ಒಳಮೀಸಲು ವಿಷಯ ನ್ಯಾಯಾಲಯದ ಮೆಟ್ಟಿಲು ಏರಿದ್ದು, ಸಮರ್ಥ ವಾದ ಮಂಡನೆಗೆ ಸಿದ್ಧತೆ, ಮುತುವರ್ಜಿಗಳೂ ಕಾಣದಾಗಿದೆ,’ಧಿ’ ಎಂದು ನಿಯೋಗ ದೂರಿದೆ. ಕಾಂಗ್ರೆಸ್ ಸರಕಾರ ದಿವಾಳಿ: ಕಾರಜೋಳ ರಾಜ್ಯಪಾಲರ ಭೇಟಿ ಬಳಿಕ ಪ್ರತಿಕ್ರಿಯಿಸಿದ ಗೋವಿಂದ ಕಾರಜೋಳ, ‘‘ರಾಜ್ಯ ಕಾಂಗ್ರೆಸ್ ಸರಕಾರ ಆರ್ಥಿಕವಾಗಿ ದಿವಾಳಿಯಾಗಿದೆ. 2.85 ಲಕ್ಷ ಸರಕಾರಿ ಹುದ್ದೆಗಳು ಖಾಲಿ ಇದ್ದು, ಖಜಾನೆ ಖಾಲಿಯಾಗಿರುವುದರಿಂದ ಒಳಮೀಸಲು ಗೊಂದಲ ಸೃಷ್ಟಿಸಿ ನೇಮಕ ಮುಂದೂಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ನೇಮಕಾತಿ ನಿಲ್ಲಬಾರದು ಎಂದು ರಾಜ್ಯಪಾಲರಿಗೆ ಮನವಿ ಮಾಡಲಾಗಿದೆ,’’ ಎಂದು ಹೇಳಿದರು. ಎ.ನಾರಾಯಣಸ್ವಾಮಿ ಮಾತನಾಡಿ, ‘‘ರಾಜ್ಯದಲ್ಲಿನಾಗಮೋಹನ್ ದಾಸ್ ವರದಿ ಜಾರಿಗೊಳಿಸಬೇಕಿದ್ದ ಸರಕಾರ ಅದನ್ನು ತಿರಸ್ಕರಿಸಿ ರಾಜಕೀಯ ತೀರ್ಮಾನ ತೆಗೆದುಕೊಂಡ ಕಾರಣ ಮಾದಿಗ ಉಪ ಜಾತಿಗಳಿಗೆ ಅನ್ಯಾಯವಾಗಿದೆ. ಗ್ಯಾರಂಟಿಗೆ ಎಸ್ ಸಿಪಿ- ಟಿಎಸ್ ಪಿ ಅನುದಾನ ಬಳಸಿ ಆ ಸಮುದಾಯಗಳಿಗೆ ವಂಚಿಸಲಾಗುತ್ತಿದೆ,’’ ಎಂದು ಆಕ್ರೋಶ ವ್ಯಕ್ತಪಡಿಸಿದರು.

