ಹುಣಸೂರು: ಇವರಿಬ್ಬರೂ ಭಾವ- ಮೈದುನರು, ಒಂದೇ ಊರಿನವರು, ಅಕ್ಕ ಪಕ್ಕದ ಮನೆಯವರು. ಇವರು ಮದುವೆ ಯಾಗಿದ್ದು, ಮಸಣ ಸೇರಿದ್ದು ಒಂದೇ ದಿನ ! ಇಂತಹ ಘಟನೆ ನಡೆದಿರುವುದು ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿಯ ಚಿಕ್ಕಾಡಿಗನಹಳ್ಳಿಯಲ್ಲಿ. ಚಿಕ್ಕಾಡಿಗನಹಳ್ಳಿಯ ಪಾಂಡುರಂಗರಾವ್ ಮೋರೆ(62) ಹಾಗೂ ಚಂದ್ರಶೇಖರ್ ರಾವ್ ಶಿಂಧೆ(61) ಮೃತಪಟ್ಟ ಭಾವ-ಮೈದುನರು. ಒಂದೇ ಬೀದಿಯ ಅಕ್ಕ ಪಕ್ಕದ ಮನೆಯ ಚಂದ್ರಶೇಖರರಾವ್ -ಪಾಂಡುರಂಗರಾವ್ ಮೋರೆ ಅವರು ಪರಸ್ಪರ ಸಹೋದರಿಯರನ್ನು ಒಂದೇ ಕಲ್ಯಾಣ ಮಂಟಪದಲ್ಲಿವಿವಾಹವಾಗಿದ್ದರು. ಜಾಬಗೆರೆ ಗ್ರಾಮ ಪಂಚಾಯಿತಿಯಲ್ಲಿವಾಟರ್ ಮೆನ್ ಆಗಿ ಕೆಲಸ ಮಾಡುತ್ತಿದ್ದ ಪಾಂಡುರಂಗ ರಾವ್ ಮೋರೆ ನಿವೃತ್ತರಾಗಿದ್ದು, ಪತ್ನಿ ಗೀತಾಬಾಯಿ ಹಾಗೂ ಒಬ್ಬ ಮಗ ಇದ್ದಾರೆ. ಚಂದ್ರಶೇಖರರಾವ್ ಗೆ ಪತ್ನಿ ಅಂಬಿಕಾಬಾಯಿ ಮತ್ತು ಒಂದು ಗಂಡು, ಹೆಣ್ಣು ಮಕ್ಕಳಿದ್ದು, ಮೂವರು ಮಕ್ಕಳಿಗೂ ವಿವಾಹವಾಗಿದೆ. ಚಂದ್ರಶೇಖರರಾವ್ ಅನಾರೋಗ್ಯದಿಂದಾಗಿ ಫೆ.22ರ ಭಾನುವಾರ ರಾತ್ರಿ ನಿಧನರಾಗಿದ್ದರು. ಇವರ ಸಾವಿನ ಆಘಾತದಿಂದ ಪಾಂಡುರಂಗರಾವ್ ಮೋರೆ ಜ್ಞಾನ ತಪ್ಪಿದ್ದರು. ಮತ್ತೆ ಎಚ್ಚರಗೊಳ್ಳದ ಇವರು, ಫೆ.23ರಂದು ಮುಂಜಾನೆ ನಿಧನರಾದರು. ಸದಾ ಅನೋನ್ಯದಿಂದ ಇರುತ್ತಿದ್ದ ಭಾವ-ಮೈದುನರ ಸಾವು ಗ್ರಾಮಸ್ಥರು ಹಾಗೂ ನೆಂಟರಿಷ್ಟರು ದುಃಖತಪ್ತರನ್ನಾಗಿಸಿತ್ತು. ಇವರಿಬ್ಬರ ಅಂತ್ಯಕ್ರಿಯೆಯ ಮೆರವಣಿಗೆಯು ಒಟ್ಟಿಗೆ ನಡೆದುದ್ದಲ್ಲದೆ, ಪಾಂಡುರಂಗರಾವ್ ಮೋರೆಯವರ ಜಮೀನಿನಲ್ಲಿಅಕ್ಕಪಕ್ಕವೇ ಅಂತ್ಯ ಸಂಸ್ಕಾರ ನಡೆಸಿದರು. ಆಘಾತಕ್ಕೊಳಗಾಗಿದ್ದ ಎರಡೂ ಕುಟುಂಬಗಳವರನ್ನು ಸತ್ಯಫೌಂಡೇಷನ್ ಅಧ್ಯಕ್ಷ ಸತ್ಯಪ್ಪ ಸೇರಿದಂತೆ ಸಂಬಂಧಿಗಳು ಸಂತೈಸಿದರಾದರೂ ಎರಡೂ ಕುಟುಂಬದವರ ಗೋಳು ಹೇಳತೀರದಾಗಿತ್ತು.

