ವಿಕ ಸುದ್ದಿಲೋಕ ಪಾಂಡವಪುರ (ಮಂಡ್ಯ) ತಾಲೂಕಿನ ಕನಗನಹಳ್ಳಿ ಗ್ರಾಮದ ಬಳಿ ಹಳೇ ದ್ವೇಷದಿಂದ ಗುಂಪೊಂದು ಇಬ್ಬರು ವ್ಯಕ್ತಿಗಳ ಮೇಲೆ ಅಮಾನುಷವಾಗಿ ಹಲ್ಲೆನಡೆಸಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿವೈರಲ್ ಆಗಿದ್ದು, ಪಟ್ಟಣ ಠಾಣೆಯಲ್ಲಿದೂರು ದಾಖಲಾಗಿದೆ. ಮೈಸೂರು ಮೂಲದ ನವೀನ್ ಕುಮಾರ್ ಹಾಗೂ ಕೆ.ಆರ್ .ಪೇಟೆ ತಾಲೂಕಿನ ಬೊಮ್ಮಲಪುರದ ಬಿ.ಎಸ್ .ಪ್ರಕಾಶ್ ಗಂಭೀರವಾಗಿ ಗಾಯಗೊಂಡವರು. ಕೆ.ಆರ್ .ಪೇಟೆ ತಾಲೂಕಿನ ಬೊಮ್ಮಲಪುರ ಗ್ರಾಮದ ಗಿರೀಶ್ , ಪುಟ್ಟರಾಜು, ಶಿವಣ್ಣ ಮತ್ತು ಮುದ್ದಪ್ಪ ಎಂಬುವವರು ಹಲ್ಲೆಮಾಡಿರುವ ಆರೋಪಿಗಳು. ರಾಜಕೀಯ ದ್ವೇಷ: ಕಳೆದ ಅವಧಿಯಲ್ಲಿನಡೆದ ಬೊಮ್ಮಲಪುರ ಗ್ರಾ.ಪಂ. ಚುನಾವಣೆಯಲ್ಲಿಆರೋಪಿಗಳಲ್ಲಿಒಬ್ಬನಾದ ಪುಟ್ಟರಾಜು ಸ್ಪರ್ಧಿಸಿದ್ದು, ಈತನ ವಿರುದ್ಧ ಬಿ.ಎಸ್ .ಪ್ರಕಾಶ್ ಹಾಗೂ ಸಹೋದರ ಧರಣೇಶ್ ಪ್ರಚಾರ ನಡೆಸಿ ಆರೋಪಿ ಸೋಲಿಗೆ ಕಾರಣರಾಗಿದ್ದರು. ಅಲ್ಲದೇ 2025ರಲ್ಲಿಗ್ರಾಮದ ರಂಗದ ಹಬ್ಬದ ವಿಚಾರದಲ್ಲೂಎರಡು ಕುಟುಂಬಗಳ ನಡುವೆ ಮನಸ್ತಾಪವಾಗಿತ್ತು. ಜತೆಗೆ ಮಹಿಳೆಯೊಬ್ಬರು ಕಾಣೆಯಾಗಿರುವ ವಿಚಾರದಲ್ಲೂಹಲ್ಲೆಗೊಳಗಾದವರ ಕೈವಾಡ ಇದೆ ಎಂಬುದು ಹಲ್ಲೆಗೆ ಕಾರಣವಾಗಿದೆ ಎಂದು ದೂರಲಾಗಿದೆ. ಈ ವಿಚಾರಗಳನ್ನೇ ಮನಸ್ಸಿನಲ್ಲಿಟ್ಟುಕೊಂಡು ದ್ವೇಷ ಸಾಧಿಸುತ್ತಿದ್ದ ಆರೋಪಿಗಳು, ಕೆ.ಆರ್ .ಪೇಟೆ ತಾಲೂಕಿನ ಚೀಕನಹಳ್ಳಿ ಗ್ರಾಮದ ಸಂಬಂಧಿ ನಂದೀಶ್ ಅವರ ಮನೆಗೆ ತೆರಳಿ ಹಿಂದಿರುಗುವಾಗ ತಮ್ಮ ಕುಟುಂಬದ 14 ಸದಸ್ಯರೊಂದಿಗೆ ಬಿ.ಎಸ್ .ಪ್ರಕಾಶ್ ಹಾಗೂ ನವೀನ್ ಕುಮಾರ್ ಅವರ ಮೇಲೆ ಕಾಡುದೊಣ್ಣೆ, ಕಲ್ಲುಮತ್ತು ಸೈಜುಗಲ್ಲಿನಿಂದ ಅಮಾನುಷವಾಗಿ ಹಲ್ಲೆನಡೆಸಿದ್ದಾರೆ. ಈ ಪೈಕಿ ಗಂಭೀರವಾಗಿ ಗಾಯಗೊಂಡಿದ್ದ ನವೀನ್ ಕುಮಾರ್ ಅವರನ್ನು ಮೈಸೂರಿನ ಕೆ.ಆರ್ .ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಲ್ಲೆಗೊಳಗಾದ ಮತ್ತೊಬ್ಬ ಗಾಯಾಳು ಬಿ.ಎಸ್ .ಪ್ರಕಾಶ್ ನೀಡಿದ ದೂರಿನ ಮೇರೆಗೆ ಪಾಂಡವಪುರ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ. ಆರೋಪಿಗಳ ಪೈಕಿ ಗಿರೀಶ್ ಎಂಬಾತನನ್ನು ಪೊಲೀಸರು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಉಳಿದ ಆರೋಪಿಗಳಿಗಾಗಿ ಶೋಧ ನಡೆಸಲಾಗಿದೆ.

