ಮೊಗ್ರಾಲ್ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿಬೀದಿ ನಾಯಿಗಳ ಹಾವಳಿ ಮಿತಿಮೀರಿದ್ದು, ಸ್ಥಳೀಯ ನಿವಾಸಿಗಳು ಆತಂಕದಲ್ಲಿದಿನ ದೂಡುವಂತಾಗಿದೆ. ಬೀದಿ ನಾಯಿಗಳು ಸಾಕು ಪ್ರಾಣಿಗಳ ಮೇಲೆ ಸತತವಾಗಿ ದಾಳಿ ನಡೆಸುತ್ತಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಸೂಕ್ತ ಕ್ರಮ ಕೈಗೊಳ್ಳದಿರುವುದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕರುವಿನ ಕಿವಿ ಕಚ್ಚಿ ಹರಿದ ನಾಯಿಗಳು !
ಮೊಗ್ರಾಲ್ ನಾಂಗಿ ಕಡಲತೀರದಲ್ಲಿಕಟ್ಟಿಹಾಕಲಾಗಿದ್ದ ಕರುವೊಂದರ ಮೇಲೆ ಬೀದಿ ನಾಯಿಗಳ ಹಿಂಡು ಏಕಾಏಕಿ ಭೀಕರ ದಾಳಿ ನಡೆಸಿದೆ. ನಾಯಿಗಳ ಭೀಕರ ಕಚ್ಚಾಟಕ್ಕೆ ಕರುವಿನ ಕಿವಿ ಹರಿದು ಹೋಗಿದ್ದು, ಕುತ್ತಿಗೆ ಹಾಗೂ ಕಾಲುಗಳಿಗೂ ತೀವ್ರ ಗಾಯಗಳಾಗಿವೆ. ಕೆಲವು ದಿನಗಳ ಹಿಂದೆಯಷ್ಟೇ ಟಿವಿಎಸ್ ರಸ್ತೆಯಲ್ಲಿಬೀದಿ ನಾಯಿಗಳು ಸಾಕು ಕೋಳಿಗಳು ಮತ್ತು ಬೆಕ್ಕುಗಳನ್ನು ಬೆನ್ನಟ್ಟಿ ಕೊಂದಿದ್ದವು. ಇದರ ಬೆನ್ನಲ್ಲೇ ಇದೀಗ ಕರುವಿನ ಮೇಲೆಯೂ ಧಾಂದಲೆ ನಡೆಸಿರುವುದು ಸ್ಥಳೀಯರನ್ನು ಭಯಭೀತರನ್ನಾಗಿಸಿದೆ.
ಶಾಲಾ ಮಕ್ಕಳಿಗೆ ಹಾಗೂ ಪೋಷಕರಿಗೆ ಭೀತಿ: ಮೊಗ್ರಾಲ್ ರಹಮತ್ ನಗರ, ಚಳಿಯಂಗೋಡು ಹಾಗೂ ಕೆ.ಕೆ. ಪುರಂ ಭಾಗಗಳಲ್ಲೂಬೀದಿ ನಾಯಿಗಳ ಕಾಟ ವಿಪರೀತವಾಗಿದೆ. ಮುಂಜಾನೆ ವೇಳೆ ಶಾಲೆ ಮತ್ತು ಮದ್ರಸಾಗಳಿಗೆ ತೆರಳುವ ಚಿಕ್ಕ ಮಕ್ಕಳಿಗೆ ಈ ನಾಯಿಗಳ ಹಿಂಡು ದೊಡ್ಡ ಬೆದರಿಕೆಯಾಗಿ ಪರಿಣಮಿಸಿದ್ದು, ಪೋಷಕರು ಆತಂಕದಲ್ಲಿದ್ದಾರೆ. ಮುಂಗಾರು ಮಳೆ ಆರಂಭವಾದಂದಿನಿಂದ ಬೀದಿ ನಾಯಿಗಳ ಸಂಖ್ಯೆ ಹಾಗೂ ಹಾವಳಿ ಮತ್ತಷ್ಟು ಹೆಚ್ಚಾಗಿದೆ ಎಂದು ನಿವಾಸಿಗಳು ದೂರಿದ್ದಾರೆ.
ಅಧಿಕಾರಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ: ಹಿಂಸೆ ಪ್ರವೃತ್ತಿಯ ಬೀದಿ ನಾಯಿಗಳನ್ನು ನಿಗ್ರಹಿಸಲು/ ಕೊಲ್ಲಲು ಉನ್ನತ ನ್ಯಾಯಾಲಯದ ಸ್ಪಷ್ಟ ನಿರ್ದೇಶನವಿದ್ದರೂ ಸಹ ಸ್ಥಳೀಯಾಡಳಿತ ಯಾವುದೇ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ. ಅಧಿಕಾರಿಗಳ ಈ ಉದಾಸೀನತೆಯ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬೇಕೆಂಬ ಒತ್ತಾಯವೂ ಸಾರ್ವಜನಿಕ ವಲಯದಲ್ಲಿಕೇಳಿ ಬರುತ್ತಿದೆ.
ಪಂಚಾಯಿತಿ ಅಧ್ಯಕ್ಷರಿಗೆ ದೂರು ಸಲ್ಲಿಕೆ: ಪ್ರದೇಶದಲ್ಲಿಉಪಟಳ ನೀಡುತ್ತಿರುವ ಬೀದಿ ನಾಯಿಗಳನ್ನು ತಕ್ಷಣವೇ ಹಿಡಿದು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಮೊಗ್ರಾಲ್ ರಾಷ್ಟ್ರೀಯ ವೇದಿಕೆ ಜಂಟಿ ಕಾರ್ಯದರ್ಶಿ ಮುಹಮ್ಮದ್ ಅಶ್ರಫ್ ಸಾಹಿಬ್ ಅವರು ಕುಂಬಳೆ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿ.ಪಿ. ಅಬ್ದುಲ್ ಖಾದರ್ ಹಾಜಿ ಅವರಿಗೆ ಮನವಿ ಸಲ್ಲಿಸಿದ್ದಾರೆ.