ವಿಕ ಸುದ್ದಿಲೋಕ ಎಚ್ .ಡಿ.ಕೋಟೆತಾಲೂಕಿನ ಯರಹಳ್ಳಿ ಹ್ಯಾಂಡ್ ಪೋಸ್ಟ್ ಗ್ರಾಮದಲ್ಲಿರುವ ಮೈರಾಡ ಕಾವೇರಿ ಪ್ರಾದೇಶಿಕ ಸಂಸ್ಥೆಯಲ್ಲಿಕವಿ ದಿ.ಡಾ. ಸಿದ್ದಲಿಂಗಯ್ಯ ಅವರಿಗೆ ‘ಗಾನ ನಮನ’ ಕಾರ್ಯಕ್ರಮ ನಡೆಯಿತು.
ಕಂಸಾಳೆ ಮತ್ತು ತಂಬೂರಿ ವಾದಕ ಎಂ. ಮಾದೇವಯ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘‘ಕೆಲವು ವರ್ಷಗಳ ಹಿಂದೆ ಕಂಸಾಳೆ ತಂಬೂರಿ ಹಿಡಿದು ಮಾದೇಶ್ವರನ ಕುರಿತು ಹಾಡುತ್ತ ಒಂದು ಹೊತ್ತಿನ ಊಟಕ್ಕೆ, ಮನೆ ಮನೆ ಬಾಗಿಲಿಗೆ ಹೋಗಿ ಭಿಕ್ಷೆ ಬೇಡುತ್ತಿದ್ದೆವು. ಈಗ ಅಂತಹ ಹಾಡುಗಳನ್ನು ಸಿನಿಮಾದಲ್ಲಿಹಾಡಿ, ಸಿನಿಮಾ ನಿರ್ಮಾಪಕರು ಹಣ ಮಾಡುತ್ತಿದ್ದಾರೆ. ಸಿನಿಮಾ ಮಂದಿಗೆ ಇರುವ ಬೆಲೆ ಜಾನಪದ ಕಲಾವಿದರಿಗೆ ಇಲ್ಲ,’’ ಎಂದು ಬೇಸರ ವ್ಯಕ್ತಪಡಿಸಿದರು.
‘‘ತಾಲೂಕಿನ ಹಿರೆನಂದಿ ಗ್ರಾಮದ ಚಾಮಮ್ಮ ಮತ್ತು ಲಕ್ಷ್ಮಮ್ಮ ಅವರು ‘ಲೋ ನವೀನ’ ಎಂಬ ಸಿನಿಮಾಗೆ ಕೊಣಣೇ ನಂದನೆ ವನವೇ ಎಂಬ ಅದ್ಭುತವಾದ ಜನಪದ ಗೀತೆ ಹಾಡಿದ್ದಾರೆ. ಇಂದು ಈ ಇಬ್ಬರು ಕಲಾವಿದರನ್ನು ಗುರುತಿಸಿರುವ ತಾಲೂಕಿನ ಜ್ಞಾನ ವೀಣೆ ಟ್ರಸ್ಟ್ ಮುಖ್ಯಸ್ಥ ದೇವರಾಜ್ ಅವರಿಗೆ ಧನ್ಯವಾದಗಳು,’’ ಎಂದರು.
ಜೀವಿಕಾ ಬಸವರಾಜು ಮಾತನಾಡಿ, ‘‘ಲೋ ನವೀನ ಸಿನಿಮಾದ ಹಾಡು ಮೊದಲಿಗೆ ಕುಂತಿ ಪದವಾಗಿತ್ತು. ಈಗ ಅದು ಸಿನಿಮಾದ ಹಾಡಾಗಿದೆ. ಇಂದು ಈ ವೇದಿಕೆಯಲ್ಲಿತಂಬೂರಿ, ಕಂಸಾಳೆ, ಸೋಬಾನೆ ಸೇರಿದಂತೆ ವಿವಿಧ ಜಾನಪದ ಕಲಾವಿದರು ಇದ್ದಾರೆ. ಇವರಲ್ಲಿರುವ ಕಲೆಯನ್ನು ಗುರುತಿಸುವ ಕೆಲಸ ಆಗಬೇಕಿದೆ. ಇಂತಹ ಕಲಾವಿದರ ಮುಂದಿನ ಪಿಳೀಗೆಗೆ ಬೇಕಿದೆ. ಇಂತಹ ಕಾರ್ಯಕ್ರಮಗಳು ಶಾಲಾ ಕಾಲೇಜುಗಳಲ್ಲಿನಡೆಯಬೇಕು,’’ ಎಂದರು.
ಕಾರ್ಯಕ್ರಮ ಆಯೋಜಿಸಿದ್ದ ಜ್ಞಾನವೀಣೆ ಟ್ರಸ್ಟ್ ಅಧ್ಯಕ್ಷ ದೇವರಾಜ್ ಪ್ರಾಸ್ತವಿಕವಾಗಿ ಮಾತನಾಡಿದರು.
ಕಲಾವಿದರು ಕವಿ ಡಾ.ಸಿದ್ದಲಿಂಗಯ್ಯ ಅವರ ಅನೇಕ ಜಾನಪದ ಗೀತೆಗಳನ್ನು ಹಾಡಿದರು. ಜಾನಪದ ಕಲಾತಂಡಗಳು ನೃತ್ಯ ಕಾರ್ಯಕ್ರಮ ನಡೆಸಿಕೊಟ್ಟವು.
ಎಚ್ .ಡಿ.ಕೋಟೆ ತಾಲೂಕಿನ ಯರಹಳ್ಳಿ ಹ್ಯಾಂಡ್ ಪೋಸ್ಟ್ ಗ್ರಾಮದ ಮೈರಾಡ ಕಾವೇರಿ ಪ್ರಾದೇಶಿಕ ಸಂಸ್ಥೆಯಲ್ಲಿನಡೆದ ಕಾರ್ಯಕ್ರಮವನ್ನು ಕಂಸಾಳೆ ಮತ್ತು ತಂಬೂರಿ ವಾದಕ ಎಂ. ಮಾದೇವಯ್ಯ ಉದ್ಘಾಟಿಸಿದರು.