ವಿಕ ಸುದ್ದಿಲೋಕ ಬೆಂಗಳೂರು ಮಾಜಿ ಪ್ರಧಾನಿ ದೇವೇಗೌಡರು ಮೇಕೆದಾಟು , ಎತ್ತಿನಹೊಳೆ ಯೋಜನೆ ಬಗ್ಗೆ ಮಾತನಾಡುತ್ತಿದ್ದಾರೆ. ಲೋಕಸಭೆಯಲ್ಲೂಅವರ ಪಕ್ಷದ ಸದಸ್ಯರು ಈ ಬಗ್ಗೆ ಮಾತನಾಡುವಂತೆ ಮಾಡಲಿ. ಆದರೆ, ಈ ವಯಸ್ಸಿನಲ್ಲಿಗೌಡರ ಮನಸ್ಸು ನೋಯಿಸುವುದಿಲ್ಲಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಸದಾಶಿವನಗರ ನಿವಾಸದ ಬಳಿ ಸುದ್ದಿಗಾರ ರೊಂದಿಗೆ ಮಂಗಳವಾರ ಮಾತನಾಡಿದ ಅವರು, ‘‘ಮೇಕೆದಾಟು, ಎತ್ತಿನಹೊಳೆ ಬಗ್ಗೆ ಅವರ ಪಕ್ಷದ ಸದಸ್ಯರು ಲೋಕಸಭೆಯಲ್ಲಿಮಾತನಾಡುವಂತೆ ದೇವೇಗೌಡರು ಹೇಳಲಿ. ಈ ವಯಸ್ಸಿನಲ್ಲಿಅವರ ಮೇಲೆ ವಾಗ್ದಾಳಿ ಮಾಡುವುದು ಸರಿಯಲ್ಲ. ನನಗೆ ಇಷ್ಟವೂ ಇಲ್ಲ. ಈ ವಯಸ್ಸಿನಲ್ಲಿಮನಸ್ಸು ನೋಯಿಸುವುದು ಬೇಡ ಎಂದುಕೊಂಡಿರುವೆ. ಅವರೇ ಇವುಗಳಿಗೆ ಪರಿಹಾರ ಸೂಚಿಸಲಿ. ಅದೇ ರೀತಿ ಅವರ ಪಕ್ಷದ ಸದಸ್ಯರುಗಳಿಗೆ ವಿಧಾನಸಭೆಯಲ್ಲಿಮಾತನಾಡಲು ಹೇಳಲಿ. ಆಗ ನಾನು ನಮ್ಮ ಕಾಲದಲ್ಲಿಏನೇನು ಆಗಿದೆ ಎಂದು ಹೇಳುತ್ತೇನೆ,’’ ಎಂದರು. ‘‘ಅಂತಾರಾಷ್ಟ್ರೀಯ ಮಹಿಳಾ ದಿನದಂದೆ ಗ್ಯಾಸ್ ಸಿಲಿಂಡರ್ ಬೆಲೆಯನ್ನ ಕೇಂದ್ರ ಸರಕಾರ 60 ರೂಪಾಯಿ ಏರಿಕೆ ಮಾಡಿದೆ. ಬಿಜೆಪಿ ಸಂಸದರುಗಳು ಈ ಬೆಲೆ ಏರಿಕೆ ಬಗ್ಗೆ ಮಾತನಾಡಲಿ. ಸಿಲಿಂಡರ್ ಗಳು ಸರಿಯಾಗಿ ದೊರೆಯದೆ ಹೋಟೆಲ್ ಉದ್ದಿಮೆ ಮುಚ್ಚುವ ಹಂತಕ್ಕೆ ಬಂದಿದೆ. ದೇಶದಲ್ಲಿಸಮಸ್ಯೆ ತಲೆದೋರಿದೆ. ಆದರೂ ಕೇಂದ್ರ ಸರಕಾರ ಬಾಯಿಬಿಡುತ್ತಿಲ್ಲ,’’ ಎಂದು ಡಿಸಿಎಂ ವಾಗ್ದಾಳಿ ನಡೆಸಿದರು.

