ವಿಕ ಸುದ್ದಿಲೋಕ ಚಿಕ್ಕಮಗಳೂರು ಸರ್ಫೆಸಿ ಕಾಯಿದೆಯಡಿ ರೈತ, ಬೆಳಗಾರರ ಜಮೀನನ್ನು ಇ-ಹರಾಜು ಹಾಕುತ್ತಿರುವು ದನ್ನು ತಕ್ಷಣ ನಿಲ್ಲಿಸದಿದ್ದರೆ ಸಂಬಂಧಿಸಿದ ಬ್ಯಾಂಕ್ ಮುಂದೆ ಚಳವಳಿ ಹಮ್ಮಿಕೊಳ್ಳುವುದಾಗಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಡಿ.ಮಹೇಶ್ ಎಚ್ಚರಿಸಿದರು. ಮಂಗಳವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿ, ಕಾಫಿ ಬೆಳೆಗಾರರ ಸಾಲ ವಸೂಲಿಗಾಗಿ ಸರ್ಫೆಸಿ ಕಾಯಿದೆ ಅಡಿ ಬೆಳೆಗಾರರ ಜಮೀನು ಹರಾಜು ಹಾಕುತ್ತಿರುವುದು ಖಂಡನೀಯ. ಈ ಕರಾಳ ಕಾಯಿದೆ ರದ್ದತಿಗಾಗಿ ಕೇಂದ್ರ ಸರಕಾರದ ಮೇಲೆ ಒತ್ತಡವಿದ್ದರೂ ಹಿಂಪಡೆದಿಲ್ಲ. ಇತ್ತೀಚೆಗೆ ಕಡಬಗೆರೆ ಗ್ರಾಮೀಣ ಬ್ಯಾಂಕ್ ಶಾಖೆಯಲ್ಲಿಇಬ್ಬರು ರೈತರು ಸಾಲ ಪಡೆದಿದ್ದ ಹಿನ್ನೆಲೆಯಲ್ಲಿಅವರ ಜಮೀನು ಹರಾಜಿಗೆ ಕರಪತ್ರ ಹಂಚಿ ಡಂಗುರ ಸಾರುವ ಮೂಲಕ ಅವರ ಮಾನ ಹರಾಜು ಹಾಕಿದ್ದಾರೆ ಎಂದು ಆರೋಪಿಸಿದರು. ಸರ್ಫೆಸಿ ಅಡಿ ರೈತರ ಜಮೀನು ಹರಾಜು ಹಾಕುವುದನ್ನು ತಡೆಯಬೇಕು ಎಂದು ಮಾಜಿ ಪ್ರಧಾನಿ ದೇವೇಗೌಡ ಅವರು ವಿತ್ತ ಸಚಿವರ ಬಳಿ ಮನವಿ ಮಾಡಿದ್ದರು. ಆದರೂ ಹರಾಜು ಪ್ರಕ್ರಿಯೆ ನಡೆಸುತ್ತಿರುವುದನ್ನು ನೋಡಿದರೆ ಮಾಜಿ ಪ್ರಧಾನಿ ಮಾತಿಗೆ ಸೊಪ್ಪು ಹಾಕುತ್ತಿಲ್ಲಎಂಬುದು ಸ್ಪಷ್ಟವಾಗುತ್ತದೆ ಎಂದರು. ಸರ್ಫೆಸಿ ಕಾಯಿದೆ ಬೆಳೆಗಾರರ ಮೇಲೆ ಹೇರದಂತೆ ತಡೆಯುತ್ತೇನೆ ಎಂದು ಪದೇಪದೆ ಹೇಳುತ್ತಿರುವ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಹೇಳಿಕೆ ಈ ಸಂದರ್ಭ ಹಾಸ್ಯಾಸ್ಪದವಾಗಿದೆ. ಸಣ್ಣ ಪ್ರಮಾಣದ ರೈತರ ಜಮೀನನ್ನು ಮಾತ್ರ ಹರಾಜು ಹಾಕುತ್ತಿದ್ದು ದೊಡ್ಡ ಬೆಳೆಗಾರರ ಬಗ್ಗೆ ಬ್ಯಾಂಕುಗಳು ಜಾಣ ಮೌನ ವಹಿಸುತ್ತಿವೆ. ಬ್ಯಾಂಕುಗಳು ಈ ಕಾರ್ಯವನ್ನು ನಿಲ್ಲಿಸದಿದ್ದರೆ ಸಂಬಂಧಿಸಿದ ಬ್ಯಾಂಕ್ ಗಳ ಮುಂದೆ ಚಳವಳಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ರಿಯಲ್ ಎಸ್ಟೇಟ್ ಅಕ್ರಮ ತಡೆಗೆ ಆಗ್ರಹ: ನಗರದಲ್ಲಿಖಾಸಗಿ ಲೇಔಟ್ ಮಾಡುವುದಾಗಿ ರೈತರನ್ನು ನಂಬಿಸಿ ನಂತರ 4-5 ವರ್ಷವಾದರೂ ಬಡಾವಣೆ ಅಭಿವೃದ್ಧಿ ಪಡಿಸದೆ ರೈತರಿಗೆ ತೊಂದರೆ ನೀಡುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಈ ರೀತಿ ಮೂಗ್ತಿಹಳ್ಳಿಯಲ್ಲಿಒಂದು ಪ್ರಕರಣ ನಡೆದಿದೆ. ಜಿಲ್ಲೆಯ ಇಂತಹ ಎಲ್ಲಪ್ರಕರಣಗಳನ್ನು ಕೂಲಂಕಷ ತನಿಖೆ ನಡೆಸಿ ಅಕ್ರಮ ಕಂಡುಬಂದಲ್ಲಿತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಎಸ್ಪಿ ಜಿತೇಂದ್ರಕುಮಾರ್ ದಯಾಮ ಅವರಿಗೆ ಮನವಿ ಸಲ್ಲಿಸಿದ್ದೇವೆ ಎಂದರು. ರೈತ ಮುಖಂಡರಾದ ಶಿವಣ್ಣ, ಮತ್ತಾ ವರ ಮಂಜುನಾಥ್ ಮತ್ತಿತರರಿದ್ದರು.

