ಹೊಸದಿಲ್ಲಿ: ವಿಮಾನ ಪ್ರಯಾಣಿಕರಿಗೆ ಕೇಂದ್ರ ಸರಕಾರ ಯುಗಾದಿ ಹಬ್ಬದ ಸಂದರ್ಭದಲ್ಲೇ ಶುಭಸುದ್ದಿ ನೀಡಿದೆ. ಯಾವುದೇ ಹೆಚ್ಚುವರಿ ಶುಲ್ಕ ಭರಿಸದೆಯೇ ನೆಚ್ಚಿನ ಸೀಟನ್ನು ಆಯ್ದುಕೊಳ್ಳುವ ಅವಕಾಶ ಕಲ್ಪಿಸಿದೆ. ಅಲ್ಲದೆ, ಒಂದೇ ‘ಪಿಎನ್ ಆರ್ ’ ಸಂಖ್ಯೆ ಇರುವ ಪ್ರಯಾಣಿಕರಿಗೆ ಅಕ್ಕಪಕ್ಕದಲ್ಲೇ ಕೂತು ಪ್ರಯಾಣಿಸುವ ಅವಕಾಶವೂ ದೊರೆಯಲಿದೆ. ಈ ಸಂಬಂಧ ವಿಮಾನಯಾನ ಸಚಿವಾಲಯ ಬುಧವಾರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ವಿಮಾನಯಾನ ಸಂಸ್ಥೆಗಳಿಂದ ಇವುಗಳ ಕಟ್ಟುನಿಟ್ಟಿನ ಅನುಸರಣೆ ಕಾಯ್ದುಕೊಳ್ಳುವಂತೆ ‘ನಾಗರಿಕ ವಿಮಾನಯಾನ ನಿರ್ದೇಶನಾಲಯ’ಕ್ಕೆ ಸೂಚಿಸಿದೆ. ಇದುವರೆಗೂ ವಿಮಾನದ ಒಟ್ಟು ಸೀಟುಗಳ ಪೈಕಿ ಶೇ. 20ರಷ್ಟು ಸೀಟುಗಳನ್ನು ಮಾತ್ರ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಆಯ್ಕೆ ಮಾಡಿಕೊಳ್ಳಧಿಬಹುದಿತ್ತು. ಉಳಿದ 80% ಸೀಟುಗಳ ಆಯ್ಕೆಗೆ ಟಿಕೆಟ್ ದರದ ಜತೆಗೆ ಹೆಚ್ಚುವರಿ ‘ಆಯ್ಕೆ ಶುಲ್ಕ’ ನೀಡಬೇಕಾಗಿತ್ತು. ಈಗ ಇಂತಹ ‘ಶುಲ್ಕಸಹಿತ’ ಸೀಟುಗಳ ಸಂಖ್ಯೆಯನ್ನು ಶೇ. 40ಕ್ಕೆ ಇಳಿಸುವಂತೆ ಸರಕಾರ ಕ್ರಮ ಕೈಗೊಂಡಿದೆ. ಇದರಿಂದ ನೆಚ್ಚಿನ ಸೀಟುಗಳನ್ನು ಆಯ್ಕೆ ಮಾಡಿಕೊಂಡರೂ ‘ದುಬಾರಿ’ ಇಲ್ಲದೆಯೇ ಪ್ರಯಾಣ ಮಾಡುವ ಅವಕಾಶ ದೊರೆಯಲಿದೆ. ಆದರೆ, ಈ ಹೊಸ ನಿಯಮಗಳು ದೇಶೀಯ ಪ್ರಯಾಣಗಳಿಗೆ ಮಾತ್ರ ಅನ್ವಯವಾಗಲಿವೆ ಎಂದು ಸಚಿವಾಲಯ ತಿಳಿಸಿದೆ. ಸೀಟುಗಳ ಆಯ್ಕೆ ಸೇರಿದಂತೆ ವಿವಿಧ ಸೇವೆಗಳ ಮೇಲೆ ವಿಮಾನಯಾನ ಸಂಸ್ಥೆಗಳು ಭಾರಿ ಶುಲ್ಕಗಳನ್ನು ಹೇರುತ್ತಿರುವ ಬಗ್ಗೆ ಪ್ರಯಾಣಿಕರಿಂದ ಆಕ್ರೋಶ ಹೆಚ್ಚುತ್ತಿರುವ ನಡುವೆಯೇ ಸರಕಾರ ಈ ಕ್ರಮ ಕೈಗೊಂಡಿದೆ. ಇತ್ತೀಚೆಗೆ ಮಧ್ಯಪ್ರಾಚ್ಯ ಯುದ್ಧದ ಹಿನ್ನೆಲೆಯಲ್ಲಿಹಲವು ವಿಮಾನಯಾನ ಸಂಸ್ಥೆಗಳು ಇಂಧನ ಬೆಲೆ ಹೆಚ್ಚಳ ನೆಪವೊಡ್ಡಿ ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿರುವುದು ಪ್ರಯಾಣಿಕರ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿತ್ತು. ಈ ಕುರಿತು ‘ಎಕ್ಸ್ ’ ವೇದಿಕೆಯಲ್ಲಿಮಾಹಿತಿ ಹಂಚಿಕೊಂಡಿರುವ ವಿಮಾನಯಾನ ಸಚಿವ
ಕೆ. ರಾಮಮೋಹನ್ ನಾಯ್ಡು ಅವರು, ಪ್ರಯಾಣಿಕರ ಸೌಕರ್ಯಗಳನ್ನು ಹೆಚ್ಚಿಸಲು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

