ವಿಕ ಸುದ್ದಿಲೋಕ ಬೆಂಗಳೂರು
ಕಾಲೇಜು ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ಅಮೃತಹಳ್ಳಿ ಠಾಣೆ ಪೊಲೀಸರು ಮತ್ತೆ ಮೂವರು ಯುವಕರನ್ನು ಬಂಧಿಸಿದ್ದು, ಇದರೊಂದಿಗೆ ಆರೋಪಿಗಳ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.
ಪ್ರಕರಣದ ಪ್ರಮುಖ ಆರೋಪಿಗಳಾದ ಪಶ್ಚಿಮ ಬಂಗಾಳ ಮೂಲದ ಡಿಕ್ಸನ್ ಸ್ಯಾಂಡ್ರ ಮತ್ತು ಮಲ್ಲೇಶ್ವರದ ಎಚ್ .ಡಿ.ನಿಖಿಲ್ ಎಂಬುವರನ್ನು ಈಗಾಗಲೇ ಬಂಧಿಸಲಾಗಿತ್ತು. ಈ ಆರೋಪಿಗಳಿಗೆ ಅತ್ಯಾಚಾರ ಕೃತ್ಯಕ್ಕೆ ಪರೋಕ್ಷವಾಗಿ ಸಹಕರಿಸಿದ್ದ ಶ್ರವಣ್ (21), ದಾವಣಗೆರೆ ಜಿಲ್ಲೆಯ ಅನಿರುದ್ಧ್ (33) ಹಾಗೂ ಗುಜರಾತ್ ನ ಮೋಹಿತ್ ಜೈನ್ (23) ಎಂಬುವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಾವಣಗೆರೆ ನಗರ ಪಾಲಿಕೆಯ ಮಾಜಿ ಸದಸ್ಯನ ಪುತ್ರನಾದ ಅನಿರುದ್ಧ್ , ಪ್ರಮುಖ ಆರೋಪಿಗಳು ಫೆ.14ರಂದು ಜಕ್ಕೂರಿನ ವಿಲ್ಲಾದಲ್ಲಿಆಯೋಜಿಸಿದ್ದ ಪಾರ್ಟಿಯಲ್ಲಿಭಾಗಿಯಾಗಿದ್ದ. ನಿಖಿಲ್ ನ ಆಪ್ತ ಸ್ನೇಹಿತನಾದ ಅನಿರುದ್ಧ್ , ಪಾರ್ಟಿ ಆಯೋಜನೆಗೆ ವಿಲ್ಲಾಬುಕ್ಕಿಂಗ್ ಮಾಡಲು ಸಹಕರಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಗುತ್ತಿಗೆದಾರನಾಗಿರುವ ಅನಿರುದ್ಧ್ ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದೆವು. ವಿಲ್ಲಾ ಬುಕ್ಕಿಂಗ್ ಸಂಬಂಧ ಮಾಹಿತಿ ಪಡೆಯಲು ಆತನಿಗೆ ನೋಟಿಸ್ ನೀಡಲಾಗಿತ್ತು. ವಿಚಾರಣೆ ನಂತರ ಆತನನ್ನು ಬಂಧಿಸಲಾಗಿದೆ. ಪಾರ್ಟಿಯಲ್ಲಿಯಾರು ಭಾಗಿಯಾಗಿದ್ದರು, ಪಾರ್ಟಿಯಲ್ಲಿಏನು ನಡೆÜಯಿತು, ಪಾರ್ಟಿಯ ಉದ್ದೇಶ ಏನಾಗಿತ್ತು ಎಂಬ ಬಗ್ಗೆ ನಿಖಿಲ್ ಗೆ ಸಂಪೂರ್ಣ ಮಾಹಿತಿಯಿದೆ. ಹೀಗಾಗಿ, ಆತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಡ್ರಗ್ಸ್ ಸೇವನೆ ಶಂಕೆ:
ನಿಖಿಲ…, ಡಿಕ್ಸನ್ ಸ್ಯಾಂಡ್ರ, ಸಂತ್ರಸ್ತೆ ಸೇರಿದಂತೆ ಪಾರ್ಟಿಯಲ್ಲಿಭಾಗಿಯಾಗಿದ್ದ ಯುವತಿಯರು ಮಾದಕ ವಸ್ತು ಸೇವಿಸಿರುವ ಶಂಕೆಯಿದೆ. ಪಾರ್ಟಿಯಲ್ಲಿಭಾಗಿಯಾಗಿದ್ದ ಎಲ್ಲರ ರಕ್ತದ ಮಾದರಿ ಸಂಗ್ರಹಿಸಿ, ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ವೈದ್ಯಕೀಯ ವರದಿ ಬಂದ ನಂತರ ಮಾದಕ ವಸ್ತು ಸೇವನೆ ಬಗ್ಗೆ ನಿಖರ ಮಾಹಿತಿ ಸಿಗಲಿದೆ. ಮಾದಕ ವಸ್ತು ಸೇವಿಸಿರುವುದು ದೃಢಪಟ್ಟರೆ ಅವರೆಲ್ಲರ ವಿರುದ್ಧ ಡ್ರಗ್ಸ್ ಸೇವನೆ ಆರೋಪದಡಿ ಪ್ರತ್ಯೇಕ ಪ್ರಕರಣ ದಾಖಲಿಸಿ ಕ್ರಮ ಜರುಗಿಸುತ್ತೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಪ್ರಮುಖ ಆರೋಪಿ ನಿಖಿಲ್ , ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನವನು. ರಾಜಾಜಿನಗರ ಸಮೀಪ ಹಳೆಯ ಕಾರುಗಳ ಮಾರಾಟ ಮಳಿಗೆ ಇಟ್ಟುಕೊಂಡಿರುವ ಈತ ಮಲ್ಲೇಶ್ವರದಲ್ಲಿವಾಸವಾಗಿದ್ದ. ನಿಖಿಲ್ , ವಾರಾಂತ್ಯದಲ್ಲಿಮೋಜು ಕೂಟಗಳನ್ನು (ಪಾರ್ಟಿ) ಆಯೋಜಿಸುತ್ತಿದ್ದ. ಅನಿರುದ್ಧ್ , ಈ ಪಾರ್ಟಿಗಳಲ್ಲಿಸಕ್ರಿಯನಾಗಿದ್ದ ಎಂದು ತನಿಖೆಯಲ್ಲಿಗೊತ್ತಾಗಿದೆ. ಆರೋಪಿ ಡಿಕ್ಸನ್ , ಫೇಸ್ ಬುಕ್ ಹಾಗೂ ಇನ್ ಸ್ಟಾಗ್ರಾಮ್ ಮೂಲಕ ಯುವತಿಯರನ್ನು ಪರಿಚಯಿಸಿಕೊಳ್ಳುತ್ತಿದ್ದ. ನಂತರ ಡೇಟಿಂಗ್ , ಫೋಟೊ ಶೂಟ್ ನೆಪದಲ್ಲಿಯುವತಿಯರನ್ನು ಪಾರ್ಟಿಗೆ ಕರೆಸಿಕೊಳ್ಳುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

