1 Reservation For The Alemaari Community Sg Siddaramayyas Demand
ಅಲೆಮಾರಿ ಸಮುದಾಯಕ್ಕೆ ಶೇ.1ರಷ್ಟು ಮೀಸಲು ನೀಡಿ: ಎಸ್ .ಜಿ.ಸಿದ್ದರಾಮಯ್ಯ
Contributed by: Punith AR|Vijaya Karnataka•
ಅಲೆಮಾರಿ ಸಮುದಾಯಗಳಿಗೆ ಒಳಮೀಸಲಾತಿಯಲ್ಲಿ ಶೇ.1ರಷ್ಟು ಮೀಸಲು ನೀಡಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಗಿರಿಧರ ರಾವ್ ಹವಾಲ್ದಾರ್ ಅವರ ಪುಸ್ತಕಗಳ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಸಾಮಾಜಿಕ ನ್ಯಾಯ ಎಲ್ಲರಿಗೂ ದೊರಕಬೇಕು ಎಂದರು. ಕೊರಚ ಸಮುದಾಯ ಸೇರಿದಂತೆ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಕೊಡಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಅವರು ಹೇಳಿದರು. ಅರ್ಥಶಾಸ್ತ್ರಜ್ಞ ಟಿ.ಆರ್.ಚಂದ್ರಶೇಖರ್ ಕೂಡ ಈ ಸಮುದಾಯಕ್ಕೆ ನ್ಯಾಯಯುತ ಮೀಸಲು ಒದಗಿಸಬೇಕಾದ ಅಗತ್ಯವಿದೆ ಎಂದರು.
ಬೆಂಗಳೂರು: ಅಲೆಮಾರಿ ಸಮುದಾಯಗಳಿಗೆ ಒಳಮೀಸಲಾತಿಯಲ್ಲಿ ಶೇ.1ರಷ್ಟು ಮೀಸಲು ನೀಡಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಅವರು ಆಗ್ರಹಿಸಿದ್ದಾರೆ. ನಗರದ ಗಾಂಧಿಭವನದಲ್ಲಿ ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಸಾಮಾಜಿಕವಾಗಿ ಹಿಂದುಳಿದವರಿಗೆ ನ್ಯಾಯ ಒದಗಿಸಲು ಒಳಮೀಸಲಾತಿ ತರಲಾಗಿದೆ. ಆದರೆ, ಕೊರಚ ಸಮುದಾಯದಂತಹ ಅಲೆಮಾರಿ ಸಮುದಾಯಗಳಿಗೆ ಈ ಸೌಲಭ್ಯ ಸಿಗುತ್ತಿಲ್ಲ. ಅವರಿಗೆ ಸಾಮಾಜಿಕ ನ್ಯಾಯ ಕೊಡಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು.
ಈ ಸಂದರ್ಭದಲ್ಲಿ, ಹಣ ಕೊಟ್ಟರೆ ಪ್ರಶಸ್ತಿ, ಗೌರವ ಸಿಗುವ ಕಾಲದಲ್ಲಿ, ಸಮಾಜಕ್ಕಾಗಿ ದುಡಿದ ಸಾಧಕರನ್ನು ಗುರುತಿಸಿ ಪುಸ್ತಕ ಹೊರತಂದಿರುವ ಗಿರಿಧರ ರಾವ್ ಹವಾಲ್ದಾರ್ ಅವರ ಕಾರ್ಯವನ್ನು ಸಿದ್ದರಾಮಯ್ಯ ಶ್ಲಾಘಿಸಿದರು. ಅರ್ಥಶಾಸ್ತ್ರಜ್ಞ ಟಿ.ಆರ್.ಚಂದ್ರಶೇಖರ್ ಕೂಡ, ನ್ಯಾ. ನಾಗಮೋಹನದಾಸ್ ಅವರೊಂದಿಗೆ ಕೊರಚ ಸಮುದಾಯದ ಸ್ಥಿತಿಗತಿಗಳನ್ನು ಹತ್ತಿರದಿಂದ ನೋಡಿದ್ದೇನೆ. ಅವರಿಗೆ ನ್ಯಾಯಯುತ ಮೀಸಲು ಒದಗಿಸುವುದು ಇಂದಿನ ಅಗತ್ಯ ಎಂದು ಅಭಿಪ್ರಾಯಪಟ್ಟರು.ಈ ಕಾರ್ಯಕ್ರಮದಲ್ಲಿ ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ, ಬಸವರಾಜ ಸಬರದ, ಟಿ.ಎಸ್.ನಾಗರಾಜ ಶೆಟ್ಟಿ, ಪತ್ರಕರ್ತೆ ಆರ್. ಪೂರ್ಣಿಮಾ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಗಿರಿಧರ ರಾವ್ ಹವಾಲ್ದಾರ್ ಅವರ ‘ಕೊರಚರು’, ‘ನೀವೂ ನಾಣ್ಯ ಸಂಗ್ರಹಕರಾಗಿ’, ‘ನಾಡು ನುಡಿ ಸಾಧಕರು’, ‘ಚಿಲ್ ಚಿವ್ ಗುಬ್ಬಚ್ಚಿ’ ಪುಸ್ತಕಗಳನ್ನು ಈ ವೇಳೆ ಲೋಕಾರ್ಪಣೆ ಮಾಡಲಾಯಿತು.