ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯ
ಆಶಾ ಕಾರ್ಯಕರ್ತೆಯರ ಪ್ರತಿಭಟನೆ
ವಿಕ ಸುದ್ದಿಲೋಕ ಬಾಗಲಕೋಟೆ
ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಆಶಾ ಕಾರ್ಯಕರ್ತೆಯರು ಮಂಗಳವಾರ ಜಿಲ್ಲಾಡಳಿತ ಭವನದ ಎದುರು ಪ್ರತಿಭಟಿಸಿದರು.
ಜಿಲ್ಲಾಡಳಿತ ಭವನ ಸರ್ಕಲ್ ನಿಂದ ಮೆರವಣಿಗೆ ಮೂಲಕ ಆಗಮಿಸಿದ ಕಾರ್ಯಕರ್ತೆಯರು ಬೇಡಿಕೆಗಳ ಈಡೇರಿಕೆಗೆ ಸರಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಜಿಲ್ಲಾಡಳಿತ ಭವನದ ಮುಂಭಾಗದಲ್ಲಿಧರಣಿ ನಡೆಸಿದರು.
ಮುಖಂಡರು ಮಾತನಾಡಿ, ‘‘ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ, ಗೌರವಧನ ನಿಗದಿತವಾಗಿ ಪಾವತಿಯಾಗುತ್ತಿಲ್ಲ. ರಾಜ್ಯ ಸರಕಾರದಿಂದ ನಿಗದಿತವಾಗಿ ವೇತನ, ಕೇಂದ್ರ ಸರಕಾರದಿಂದ ಪ್ರೋತ್ಸಾಹಧನ ಸಮರ್ಪಕವಾಗಿ ದೊರೆಯುತ್ತಿಲ್ಲ. ನಾನಾ ಶೀರ್ಷಿಕೆಗಳಡಿ ನೀಡಬೇಕಾದ ಹಣ ನೀಡಿಲ್ಲ. ಆರೋಗ್ಯ ಮತ್ತು ಕುಟುಂಬ ಕಲ್ಯಾಣದ 9 ಸೇವೆಗಳನ್ನು ಆಶಾ ನಿಧಿ ತಂತ್ರಾಂಶದಲ್ಲಿನಿಷ್ಕಿ್ರಯಗೊಳಿಸಲಾಗಿದೆ. ಇದರಿಂದ ಕಾರ್ಯಕರ್ತೆಯರಿಗೆ 500 ರೂ. ನಿಂದ 1 ಸಾವಿರ ರೂ.ವರೆಗೆ ಪ್ರೋತ್ಸಾಹಧನ ಕಡಿತಗೊಳ್ಳಲಿದೆ, ಈ ಸೇವೆಗಳನ್ನು ಮುಂದುವರಿಸಬೇಕು’’ ಎಂದರು.
‘‘ಹಲವು ಕಾರ್ಯಕರ್ತೆಯರ ಪ್ರೋತ್ಸಾಹಧನ ಕಡಿತಗೊಳಿಸಲಾಗಿದ್ದು, ತಕ್ಷಣ ಪಾವತಿಸಬೇಕು. ಮೌಲ್ಯಮಾಪನ ಹೆಸರಿನಲ್ಲಿಕಾರ್ಯಕರ್ತೆಯರಿಗೆ ನೀಡುತ್ತಿರುವ ಶೋಷಣೆ ತಪ್ಪಿಸಬೇಕು, ನಿವೃತ್ತರಾದವರಿಗೆ ಇಡುಗಂಟು ಸೌಲಭ್ಯ ಕಲ್ಪಿಸಬೇಕು, ಆಶಾ ಸುಗಮಕಾರರ ಸೇವೆಯನ್ನು ಸೂಕ್ತ ವೇತನದೊಂದಿಗೆ ಮುಂದುವರಿಸಬೇಕು. ಮಾಸಿಕ 10 ಸಾವಿರ ರೂ. ಗೌರವಧನ ನಿಗದಿಗೊಳಿಸಬೇಕು, ಆಶಾ ಕಾರ್ಯಕರ್ತೆಯರಿಗೆ 1 ಸಾವಿರ ರೂ. ಗೌರವಧನ ಹೆಚ್ಚಿಸಬೇಕು’’ ಎಂದು ಆಗ್ರಹಿಸಿದರು. ಜಿಲ್ಲಾಧಿಕಾರಿ ಸಂಗಪ್ಪ ಎಂ., ಅವರಿಗೆ ಮನವಿ ಸಲ್ಲಿಸಲಾಯಿತು. ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿಪ್ರತಿಭಟಿಸಲಾಯಿತು. ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಎಚ್ .ಟಿ., ಮುಖಂಡರಾದ ಅಂಜನಾ ಕುಂಬಾರ, ರುಕ್ಸಾನಾ ನಾಗಠಾಣ, ಸುರೇಖಾ ಕಾಳೆ, ನೈನಾಜ್ ಜಂಗಿ, ಗೀತಾ ಈಳಗೇರ, ಚಿನ್ನವ್ವ ಗುಳಬಾಳ ಸೇರಿದಂತೆ ಮುಖಂಡರಿದ್ದರು.
----
ಪ್ರೊಟೆಸ್ಟ್ -ಬಿಜಿಕೆ-12
ಬಾಗಲಕೋಟೆಯಲ್ಲಿಮಂಗಳವಾರ ಪ್ರತಿಭಟನೆ ನಡೆಸಿದ ಆಶಾ ಕಾರ್ಯಕರ್ತೆಯರು.

