ಹೊಸದಿಲ್ಲಿ: ‘‘ಕೇಂದ್ರೀಯ ತನಿಖಾ ದಳ ಸಿಬಿಐ ನೂತನ ನಿರ್ದೇಶಕರ ನೇಮಕ ಪ್ರಕ್ರಿಯೆ ಪಕ್ಷಪಾತದಿಂದ ಕೂಡಿದೆ,’’ ಎಂದು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಪ್ರಧಾನಿ, ಸಿಜೆಐ, ಪ್ರತಿಪಕ್ಷ ನಾಯಕರನ್ನು ಒಳಗೊಂಡ ಆಯ್ಕೆ ಸಮಿತಿ ಸಭೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ರಾಹುಲ್ ಗಾಂಧಿ, ‘‘ಸಿಬಿಐ ನಿರ್ದೇಶಕರ ಆಯ್ಕೆ ಪ್ರಕ್ರಿಯೆ ಪಕ್ಷಪಾತೀಯವಾಗಿತ್ತು. ಇಂಥ ಆಯ್ಕೆ ಸಮಿತಿಯಲ್ಲಿಭಾಗಿಯಾಗಿದ್ದ ನಾನು ಸಾಂವಿಧಾನಿಕ ಕರ್ತವ್ಯದಿಂದ ಹಿಮ್ಮುಖವಾಗಲು ಸಾಧ್ಯವಿಲ್ಲ. ಪ್ರತಿಪಕ್ಷ ನಾಯಕ ರಬ್ಬರ್ ಸ್ಟಾಂಪ್ ಅಲ್ಲಎಂಬುದು ನೆನಪಿರಲಿ,’’ ಎಂದು ಹೇಳಿದ್ದಾರೆ.
ಇತ್ತೀಚೆಗೆ ಕೇಂದ್ರ ಮಾಹಿತಿ ಆಯುಕ್ತರ ನೇಮಕ ಸಂಬಂಧ ನಡೆದ ಸಭೆಯಲ್ಲೂರಾಹುಲ್ ಗಾಂಧಿ ಅವರು ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದರು. ಕೇಂದ್ರ ಸೂಚಿತ ರಾಜ್ ಕುಮಾರ್ ಗೋಯಲ್ ನೇಮಕ ವಿರೋಧಿಸಿದ್ದರು.
ಹೊಸದಿಲ್ಲಿಯ ಲೋಕಕಲ್ಯಾಣ ಮಾರ್ಗದ ಪ್ರಧಾನಿ ನಿವಾಸದಲ್ಲಿಪ್ರಧಾನಿ ನರೇಂದ್ರ ಮೋದಿ, ಸಿಜೆಐ ಸೂರ್ಯಕಾಂತ್ , ರಾಹುಲ್ ಗಾಂಧಿ ಅವರನ್ನು ಒಳಗೊಂಡ ಆಯ್ಕೆ ಸಮಿತಿ ನೂತನ ಸಿಬಿಐ ನಿರ್ದೇಶಕರ ಆಯ್ಕೆ ಸಂಬಂಧ ಚರ್ಚೆ ನಡೆಸಿತು.
‘ರಾ’ ಮುಖ್ಯಸ್ಥ ಪರಾಗ್ ಜೈನ್ , ಅಜಯ್ ಕುಮಾರ್ ಶರ್ಮಾ, ಶತ್ರುಜ್ ಸಿಂಗ್ ಕಪೂರ್ , ಮಹಾರಾಷ್ಟ್ರ ಡಿಜಿಪಿ ಸದಾನಂದ್ ದಾತೆ, ಸಿಆರ್ ಪಿಎಫ್ ಡಿಜಿ ಜಿ.ಪಿ.ಸಿಂಗ್ , ಎನ್ ಡಿಆರ್ ಎಫ್ ಡಿಜಿ ಪಿಯುಷ್ ಆನಂದ್ , ದಿಲ್ಲಿಪೊಲೀಸ್ ಆಯುಕ್ತ ಸತೀಶ್ ಗೊಲ್ಚಾ ಹೆಸರುಗಳನ್ನು ನಿರ್ದೇಶಕರ ಹುದ್ದೆಗೆ ಪರಿಗಣಿಸಲಾಗಿದೆ.

