ವಿವಾದಿತ ಸ್ಥಳಗಳಲ್ಲಿಮೂರ್ತಿ ಪ್ರತಿಷ್ಠಾಪನೆಗೆ ಅವಕಾಶವಿಲ್ಲ

Contributed byragh.pkn@gmail.com|Vijaya Karnataka
legal regulations for ganesh idol installation
ಶಾಂತಿಯುತವಾಗಿ ಗೌರಿ-ಗಣೇಶ ಆಚರಿಸಿ: ಜಿಲ್ಲಾಧಿಕಾರಿ ಎಂ.ಆರ್ .ರವಿಕುಮಾರ್

ವಿಕ ಸುದ್ದಿಲೋಕ ಕೋಲಾರ
ಭಾರತವು ವೈವಿಧ್ಯತೆಯಲ್ಲಿಏಕತೆಯನ್ನು ಹೊಂದಿರುವ ದೇಶವಾಗಿದ್ದು, ನಾವೆಲ್ಲರೂ ತಾಯಿ-ಮಕ್ಕಳಂತೆ ಒಗ್ಗಟ್ಟಿನಿಂದ ಹಬ್ಬಗಳನ್ನು ಆಚರಿಸುವ ಮೂಲಕ ಸಮಾಜದಲ್ಲಿಸೌಹಾರ್ದತೆ ಮೆರೆಯಬೇಕು ಎಂದು ಕೋಲಾರ ಜಿಲ್ಲಾಧಿಕಾರಿ ಎಂ.ಆರ್ .ರವಿಕುಮಾರ್ ಸಾರ್ವಜನಿಕರಿಗೆ ಕರೆ ನೀಡಿದರು.

ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿಜಿಲ್ಲಾಧಿಕಾರಿ ಕಚೇರಿಯಲ್ಲಿಹಮ್ಮಿಕೊಳ್ಳಲಾಗಿದ್ದ ಜಿಲ್ಲಾಮಟ್ಟದ ಶಾಂತಿಪಾಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಬ್ಬದ ನೆಪದಲ್ಲಿಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಹಾಗೂ ಯಾರಿಗೂ ತೊಂದರೆಯಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಸುಗಮವಾಗಿ ಅನುಮತಿ ನೀಡುವ ಉದ್ದೇಶದಿಂದ ನಗರಸಭೆ, ಪುರಸಭೆ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿಏಕಗವಾಕ್ಷಿ ವ್ಯವಸ್ಥೆ (ಸಿಂಗಲ್ ವಿಂಡೋ ಸಿಸ್ಟಮ್ ) ಜಾರಿಗೊಳಿಸಲಾಗುತ್ತಿದೆ. ಆಯೋಜಕರು ಕಡ್ಡಾಯವಾಗಿ ತಮ್ಮ ಆಧಾರ ಕಾರ್ಡ್ , ರೇಷನ್ ಕಾರ್ಡ್ ಅಥವಾ ವೋಟರ್ ಕಾರ್ಡ್ ಲಗತ್ತಿಸಿ ಏಕಕಾಲದಲ್ಲಿಅನುಮತಿ ಪಡೆಯಬಹುದಾಗಿದೆ ಎಂದರು.

ಸಾರ್ವಜನಿಕ ಸ್ಥಳಗಳಲ್ಲಿಪ್ರತಿಷ್ಠಾಪಿಸುವ ಗಣೇಶ ಮೂರ್ತಿಯ ಎತ್ತರವನ್ನು ಗರಿಷ್ಠ 5 ಅಡಿಗಳಿಗೆ ಮಾತ್ರ ಸೀಮಿತಗೊಳಿಸಲಾಗಿದ್ದು, ಟ್ರಾನ್ಸ್ ಫಾರ್ಮರ್ ಗಳ ಬಳಿ, ನೀರಿನ ಟ್ಯಾಂಕ್ ಕೆಳಗಡೆ, ರಸ್ತೆ ಮಧ್ಯದಲ್ಲಿಹಾಗೂ ಯಾವುದೇ ವಿವಾದಿತ ಸ್ಥಳಗಳಲ್ಲಿಮೂರ್ತಿ ಪ್ರತಿಷ್ಠಾಪನೆಗೆ ಅವಕಾಶವಿಲ್ಲಎಂದು ಅವರು ಎಚ್ಚರಿಸಿದರು. ಜತೆಗೆ, ಭದ್ರತಾ ದೃಷ್ಟಿಯಿಂದ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಹಾಗೂ ದಿನದ 24 ಗಂಟೆಯೂ ಆಯೋಜಕರು ತಮ್ಮದೇ ಆದ ಸ್ವಯಂಸೇವಕರನ್ನು ನಿಯೋಜಿಸಿಕೊಳ್ಳುವುದು ಕಡ್ಡಾಯವಾಗಿದೆ.

ಜಲ ಮಾಲಿನ್ಯ ತಡೆಯುವ ನಿಟ್ಟಿನಲ್ಲಿರಾಸಾಯನಿಕಯುಕ್ತ ಪಿಒಪಿ ಹಾಗೂ ಪ್ಲಾಸ್ಟಿಕ್ ಗಣೇಶ ಮೂರ್ತಿಗಳ ತಯಾರಿಕೆ, ಮಾರಾಟ ಮತ್ತು ಬಳಕೆಯನ್ನು ಜಿಲ್ಲೆಯಾದ್ಯಂತ ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಕೇವಲ ಪರಿಸರಕ್ಕೆ ಪೂರಕವಾದ ಮಣ್ಣಿನ ಮೂರ್ತಿಗಳನ್ನು ಮಾತ್ರ ಪ್ರತಿಷ್ಠಾಪಿಸಬೇಕು. ಹಬ್ಬದ ಮೆರವಣಿಗೆಗಳಲ್ಲಿಯುವಜನತೆ ಮತ್ತು ಮಕ್ಕಳ ಶ್ರವಣ ಶಕ್ತಿಯ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತಿರುವ ಅತಿ ಹೆಚ್ಚು ಶಬ್ದ ಮಾಡುವ ಡಿಜೆ ಬಳಕೆಗೆ ಸಂಪೂರ್ಣ ನಿಷೇಧ ಹೇರಲಾಗಿದೆ ಎಂದರು.

ವಿವಾದಗಳಿಗೆ ಆಸ್ಪದ ನೀಡದಂತೆ, ಸ್ಥಳೀಯ ಆಡಳಿತದಿಂದ ಕಡ್ಡಾಯವಾಗಿ ಪೂರ್ವಾನುಮತಿ ಪಡೆದ ನಂತರವೇ ಫ್ಲೆಕ್ಸ್ ಹಾಗೂ ಬ್ಯಾನರ್ ಗಳನ್ನು ಅಳವಡಿಸಬೇಕು ಎಂದು ಸಭೆಯಲ್ಲಿಆಯೋಜಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು.

ಮೂರ್ತಿ ವಿಸರ್ಜನಾ ಪ್ರಕ್ರಿಯೆಯನ್ನು ಭದ್ರತೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ಸಂಜೆ 6 ಗಂಟೆಯೊಳಗೆ, ಅಂದರೆ ಸೂರ್ಯಾಸ್ತಕ್ಕೂ ಮುನ್ನವೇ ಕಡ್ಡಾಯವಾಗಿ ಪೂರ್ಣಗೊಳಿಸಬೇಕು. ಪ್ರಸ್ತುತ ಮಳೆಯ ಕೊರತೆಯಿರುವುದರಿಂದ, ಸ್ಥಳೀಯ ಆಡಳಿತ ಸೂಚಿಸಿದ ಅಥವಾ ಎಲ್ಲೆಲ್ಲಿನೀರಿನ ಲಭ್ಯತೆ ಇದೆಯೋ ಅಲ್ಲಿಮಾತ್ರ ಮೂರ್ತಿ ವಿಸರ್ಜನೆಗೆ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ.

ಜಲಮೂಲಗಳಿಗೆ ಹಾನಿಯಾಗದಂತೆ ವಿಸರ್ಜನೆಗೂ ಮುನ್ನ ಮೂರ್ತಿಯ ಮೇಲಿರುವ ಹೂವು ಮತ್ತು ಪ್ಲಾಸ್ಟಿಕ್ ಅಲಂಕಾರಿಕ ವಸ್ತುಗಳನ್ನು ಪ್ರತ್ಯೇಕಿಸಿ ಸ್ವಚ್ಛಗೊಳಿಸಬೇಕು ಹಾಗೂ ವಿಸರ್ಜನಾ ಸ್ಥಳಗಳಲ್ಲಿಅಗತ್ಯವಾದ ಫ್ಲಡ್ ಲೈಟ್ (ದೀಪದ ವ್ಯವಸ್ಥೆ) ಜತೆಗೆ ಯಾವುದೇ ಅನಾಹುತಗಳನ್ನು ತಪ್ಪಿಸಲು ನುರಿತ ಈಜುಗಾರರನ್ನು ನಿಯೋಜಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸಭೆಯಲ್ಲಿಜಿಪಂ ಸಿಇಒ ಡಾ.ಪ್ರವೀಣ್ ಪಿ.ಬಾಗೇವಾಡಿ, ಎಸ್ಪಿಗಳಾದ ಕನ್ನಿಕಾ ಸಿಕ್ರಿವಾಲ್ , ಶಿವಾಂಶು ರಜಪೂತ್ , ಎಎಸ್ಪಿ ಜಗದೀಶ್ , ಅಪರ ಜಿಲ್ಲಾಧಿಕಾರಿ ಎಸ್ .ಎಂ.ಮಂಗಳ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.

=

ಫೋಟೋಕ್ಯಾಪ್ಷನ್ : ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿಜಿಲ್ಲಾಧಿಕಾರಿ ಕಚೇರಿಯಲ್ಲಿಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಶಾಂತಿಪಾಲನಾ ಸಭೆಯ ಅಧ್ಯಕ್ಷತೆವಹಿಸಿ ಎಂ.ಆರ್ .ರವಿಕುಮಾರ್ ಮಾತನಾಡಿದರು. (9ಕೆಪಿಎಚ್ 1)