ವಿಕ ಸುದ್ದಿಲೋಕ ಕೋಲಾರ
ತಾಲೂಕಿನ ವೇಮಗಲ್ ಪಟ್ಟಣದ ಶ್ರೀ ದ್ರೌಪದಮ್ಮ ಧರ್ಮರಾಯಸ್ವಾಮಿ ದೇವಿಯ 51ನೇ ವರ್ಷದ ಐತಿಹಾಸಿಕ ಕರಗ ಮಹೋತ್ಸವವು ಸಹಸ್ರಾರು ಭಕ್ತರ ಹರ್ಷೋದ್ಗಾರ ಹಾಗೂ ಭಕ್ತಿ ಸಡಗರದ ನಡುವೆ ಯಶಸ್ವಿಯಾಗಿ ಸಂಪನ್ನಗೊಂಡಿತು.
ಈ ಬಾರಿಯ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿ ಕರಗ ಪೂಜಾರಿ ಜಗದೀಶ್ ಅವರು ಸತತ 11ನೇ ವರ್ಷವೂ ಅತ್ಯಂತ ಶ್ರದ್ಧಾಭಕ್ತಿಯಿಂದ ಸತತ 22 -23 ಗಂಟೆಗಳ ಕಾಲ ಕರಗ ಹೊತ್ತು ಸಾಗುವ ಮೂಲಕ ಗಮನ ಸೆಳೆದರು.
ಒಟ್ಟು ಏಳು ದಿನಗಳ ಕಾಲ ನಡೆದ ನಾನಾ ಧಾರ್ಮಿಕ ವಿಧಿವಿಧಾನಗಳ ಮುಖ್ಯ ಭಾಗವಾಗಿ ಗುರುವಾರ ರಾತ್ರಿ ಕರಗ ಮಹೋತ್ಸವವು ವಿದ್ಯುಕ್ತವಾಗಿ ಚಾಲನೆ ಪಡೆಯಿತು. ಹೂವಿನ ಕರಗವನ್ನು ಹೊತ್ತು ಪೂಜಾರಿ ಜಗದೀಶ್ ಅವರು ಧರ್ಮರಾಯಸ್ವಾಮಿ ದೇಗುಲದಿಂದ ಹೊರಬರುತ್ತಿದ್ದಂತೆ ನೆರೆದಿದ್ದ ಭಕ್ತಸಾಗರವು ಚಪ್ಪಾಳೆ ಮತ್ತು ಗೋವಿಂದ ಗೋವಿಂದ ಎಂಬ ನಾಮಸ್ಮರಣೆಯೊಂದಿಗೆ ಬರಮಾಡಿಕೊಳ್ಳಲಾಯಿತು.
ಮಿನಿ ಕ್ರೀಡಾಂಗಣದಲ್ಲಿನಿರ್ಮಿಸಲಾಗಿದ್ದ ವೇದಿಕೆಯಲ್ಲಿಪೂಜಾರಿ ಜಗದೀಶ್ ಅವರು ತಮಟೆಯ ವಾದನಕ್ಕೆ ತಕ್ಕಂತೆ ನಾನಾ ಭಂಗಿಗಳಲ್ಲಿನೀಡಿದ ಅದ್ಭುತ ನೃತ್ಯ ಪ್ರದರ್ಶನವು ಭಕ್ತರನ್ನು ಮಂತ್ರಮುಗ್ಧಗೊಳಿಸಿತು.
ಮಹೋತ್ಸವದ ಅಂತಿಮ ಘಟ್ಟವಾಗಿ ಅಗ್ನಿಕುಂಡ ಪ್ರವೇಶ ಕಾರ್ಯಕ್ರಮವು ಅತ್ಯಂತ ಭಾವುಕವಾಗಿ ನೆರವೇರಿತು. ನಾನಾ ಸಂಘಟನೆಗಳ ವತಿಯಿಂದ ಸಹಸ್ರಾರು ಭಕ್ತರಿಗಾಗಿ ಅನ್ನದಾನ ಕಾರ್ಯಕ್ರಮ, ಪಾನಕ-ಮಜ್ಜಿಗೆ ಕೋಸಂಬರಿ ವಿತರಣೆಯ ವ್ಯವಸ್ಥೆಯನ್ನು ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾರಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿಹಾಗೂ ವೇಮಗಲ್ ಇನ್ಸ್ ಪೆಕ್ಟರ್ ಬಿ.ಪಿ.ಮಂಜು ನೇತೃತ್ವದಲ್ಲಿಬಿಗಿ ಪೊಲೀಸ್ ಬಂದೋಬಸ್ ್ತ ಕಲ್ಪಿಸಲಾಗಿತ್ತು. ಪಟ್ಟಣದ ನಾನಾ ದೇವಾಲಯಗಳ 25ಕ್ಕೂ ಹೆಚ್ಚು ಪಲ್ಲಕ್ಕಿಗಳ ಮೆರವಣಿಗೆ ಮತ್ತು ಝಗಮಗಿಸುವ ವಿದ್ಯುತ್ ದೀಪಾಲಂಕಾರದಿಂದ ವೇಮಗಲ್ ಪಟ್ಟಣವು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು.
ಈ ಸಂದರ್ಭದಲ್ಲಿಶಾಸಕ ಕೊತ್ತೂರು ಜಿ ಮಂಜುನಾಥ್ , ಎಂಎಲ್ಸಿ ಅನಿಲ್ ಕುಮಾರ್ , ಮಾಜಿ ಶಾಸಕ ವರ್ತೂರ್ ಪ್ರಕಾಶ್ , ಕೋಮುಲ್ ನಿರ್ದೇಶಕ ಚಂಜಿಮಲೆ ರಮೇಶ್ , ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಶಿವಕುಮಾರ್ , ತಾಲೂಕು ಅಧ್ಯಕ್ಷ ವಿ.ಎಂ.ಮುನಿಯಪ್ಪ, ಪಪಂ ಉಪಾಧ್ಯಕ್ಷ ಸಿ.ಎಸ್ .ವೆಂಕಟೇಶ್ , ಮುಖಂಡರಾದ ಸಿಎಂಆರ್ ಶ್ರೀನಾಥ್ , ಹೂಡಿ ವಿಜಯ್ ಕುಮಾರ್ , ಉದಯ್ ಕುಮಾರ್ , ಕುರ್ಕಿ ರಾಜೇಶ್ವರಿ, ಪ್ರಾಧಿಕಾರ ಅಧ್ಯಕ್ಷ ಉರಟ ಅಗ್ರಹಾರ ಚೌಡರೆಡ್ಡಿ, ಪ್ರಾಧಿಕಾರ ಸದಸ್ಯ ಬಿ.ನಾಗರಾಜ್ , ಕುಲದ ಗೌಡರಾದ ಚಿಕ್ಕಮುನಿಯಪ್ಪ, ಯಜಮಾನ್ ಅಶ್ವತ್ಥಪ್ಪ, ಅಧ್ಯಕ್ಷ ರಾಜೇಂದ್ರ ಪ್ರಸಾದ್ , ವಹ್ನಿಕುಲ ಸಂಘದ ಗೌರವಾಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಪದಾಧಿಕಾರಿಗಳು, ವೀರಕುಮಾರರು, ಮತ್ತಿತರರು ಭಾಗವಹಿಸಿದ್ದು, ದರ್ಶನ ಪಡೆದರು.
=
ಫೋಟೋಕ್ಯಾಪ್ಷನ್ : ತಾಲೂಕಿನ ವೇಮಗಲ್ ಪಟ್ಟಣದ ಶ್ರೀದ್ರೌಪದಮ್ಮ ಧರ್ಮರಾಯಸ್ವಾಮಿ ದೇವಿಯ 51ನೇ ವರ್ಷದ ಐತಿಹಾಸಿಕ ಕರಗ ಮಹೋತ್ಸವವು ಅದ್ಧೂರಿಯಾಗಿ ನಡೆಯಿತು. (10ಕೆಪಿಎಚ್ 23)

