ಸಾಕು ನಾಯಿ ಕೊಂದಿದ್ದ ಆರೋಪಿಗಳ ಬಂಧನ
ವಿಕ ಸುದ್ದಿಲೋಕ ಮಂಡ್ಯ
ಮಳವಳ್ಳಿ ತಾಲೂಕಿನ ಶೆಟ್ಟಹಳ್ಳಿಯಲ್ಲಿಸಾಕು ನಾಯಿಯನ್ನು ಗುಂಡು ಹಾರಿಸಿ ಕೊಂದು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮಳವಳ್ಳಿ ತಾಲೂಕಿನ ಬುಗತಗಹಳ್ಳಿ ಗ್ರಾಮದ ಎಂ.ಬಾಲಾಜಿ(26) ಹಾಗೂ ಪಟ್ಟಣದ ನಿವಾಸಿಯೂ ಆದ ಕಾನೂನು ಸಂಘರ್ಷಕ್ಕೊಳಗಾದ ಬಾಲಕ ಬಂಧಿತ ಆರೋಪಿ. ಮತ್ತೊಬ್ಬ ಆರೋಪಿಗಾಗಿ ಪತ್ತೆ ಕಾರ್ಯ ಮುಂದುವರಿದಿದೆ. ಆರೋಪಿಗಳು ಹಂದಿ ಬೇಟೆಗಾರರಾಗಿದ್ದು, ಏ.5ರಂದು ಮಾಗನೂರು ಬಳಿ ಬೈಕ್ ವೊಂದನ್ನು ಕಳವು ಮಾಡಿಕೊಂಡು ಎರಡು ಬೈಕ್ ಗಳಲ್ಲಿಶೆಟ್ಟಹಳ್ಳಿಗೆ ತೆರಳಿ ಅಲ್ಲಿನ ನಾಲೆಯ ಬಳಿ ಒಂದು ಬೈಕ್ ನಿಲ್ಲಿಸಿ ಮೂವರು ಒಂದೇ ಬೈಕ್ ನಲ್ಲಿಮಧ್ಯರಾತ್ರಿ ಹಂದಿ ಬೇಟೆಗೆ ತೆರಳಿದ್ದರು.
ಈ ವೇಳೆ ಶೆಟ್ಟಹಳ್ಳಿ ಗ್ರಾಮದ ಹೊರವಲಯದ ಮನೆಯೊಂದರ ಬಳಿ ಕಟ್ಟಿಹಾಕಿದ್ದ ನಾಯಿಯು ಬೊಗಳುತ್ತಿದ್ದನ್ನು ಕಂಡು ಅದರ ಮೇಲೆ ಗುಂಡು ಹಾರಿಸಿದ್ದಾರೆ. ತೀವ್ರ ಗಾಯಗೊಂಡ ನಾಯಿ ಸ್ಥಳದಲ್ಲೇ ಮೃತಪಟ್ಟಿತ್ತು. ಬಳಿಕ ಆರೋಪಿಗಳು ಪರಾರಿಯಾಗಿದ್ದರು. ಈ ಸಂಬಂಧ ಶ್ವಾನ ಮಾಲೀಕ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿದೂರು ನೀಡಿದ್ದರು.
ಇದಕ್ಕೂ ಮುನ್ನ ಏ.2ರಂದು ಬೇಟೆಗೆ ಹೋಗಿದ್ದ ವೇಳೆಯಲ್ಲಿಯೂ ಅದೇ ನಾಯಿ ಆರೋಪಿಗಳನ್ನು ಕಂಡು ಬೊಗಳಿತ್ತು. ಈ ವೇಳೆ ಪೊಲೀಸರು ಅತ್ತ ಬಂದಾಗ ಮನೆ ಮಾಲೀಕನೇ ಪೊಲೀಸರಿಗೆ ಕರೆ ಮಾಡಿದ್ದರು ಎನ್ನುವ ಅನುಮಾನ ಆರೋಪಿಗಳಲ್ಲಿಕಾಡಿತ್ತು.
ಹಿಂದೆ ಬೇಟೆ ಕೈತಪ್ಪಿರುವುದನ್ನು ನೆನಪು ಮಾಡಿಕೊಂಡು ನಾಯಿಯ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಇದರಿಂದ ಮನೆಯ ಕಿಟಕಿಗೂ ಗುಂಡು ತಗುಲಿತ್ತು ಎಂದು ಆರೋಪಿಗಳು ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಪೊಲೀಸರು ಆರೋಪಿಗಳನ್ನು ಮಲೆಮಹದೇಶ್ವರ ಬೆಟ್ಟದಲ್ಲಿಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.

