ಹುಣಸೂರು ಅಭಿವೃದ್ಧಿಗೆ ಸಿಎಂಗೆ ಮನವಿ
*ಲಕ್ಷ್ಮಣತೀರ್ಥ ನದಿ ಶುದ್ಧೀಕರಿಸಿ: ಸತ್ಯಪ್ಪ ಒತ್ತಾಯ
ಮೈಸೂರು: ಹುಣಸೂರು ತಾಲೂಕಿಗೆ ಏ.20ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿದ್ದು, ಈ ವೇಳೆ ತಾಲೂಕಿನಲ್ಲಿಆಗಬೇಕಾಗಿರುವ ಅಭಿವೃದ್ಧಿ ಕಾರ್ಯಗಳಿಗೆ ಗಮನ ಹರಿಸಿ ಸಹಕರಿಸಬೇಕೆಂದು ಸತ್ಯಫೌಂಡೇಷನ್ ಅಧ್ಯಕ್ಷ ಸತ್ಯಪ್ಪ ಕೋರಿದರು.
‘‘ತಾಲೂಕಿನ ಲಕ್ಷ್ಮಣ ತೀರ್ಥ ನದಿಯು ಕೊಳೆತು ನಾರುತ್ತಿದ್ದು, ಇದರಿಂದ 2 ಕೋಟಿ ಜನ ಇದೇ ಕಲುಷಿತ ನೀರನ್ನು ಕುಡಿಯುತ್ತಿದ್ದಾರೆ. ಕೂಡಲೇ ಶುದ್ಧೀಕರಣಗೊಳಿಸಲು ಅನುದಾನ ಬಿಡುಗಡೆ ಮಾಡಬೇಕು. ಹುಣಸೂರಿನ ಡಿ.ದೇವರಾಜ ಅರಸು ಹೈಟೆಕ್ ಸಾರ್ವಜನಿಕ ಆಸ್ಪತ್ರೆ ಸಾರ್ವಜನಿಕರ ಉಪಯೋಗಕ್ಕಾಗಿ ಕೂಡಲೇ ಲೋಕಾರ್ಪಣೆಗೊಳ್ಳಬೇಕು,’’ ಎಂದು ಸುದ್ದಿಗೋಷ್ಠಿಯಲ್ಲಿಮನವಿ ಮಾಡಿದರು.
‘‘ಡಿ.ದೇವರಾಜ ಅರಸು ಕಲಾ ಭವನದ ಭೂಮಿ ಪೂಜೆಯನ್ನು 2015ರಲ್ಲಿಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ನೆರವೇರಿಸಿದ್ದರು. ಆದರೆ ಇದುವರೆಗೂ ಕಾಮಗಾರಿ ಪೂರ್ಣಗೊಳ್ಳದೆ ಕಲಾಭವನವು ಪಾಳು ಬಿದ್ದಿದೆ. ಕೂಡಲೇ ಕಲಾ ಭವನ ಸಾರ್ವಜನಿಕರ ಅನುಕೂಲಕ್ಕೆ ಲಭ್ಯವಾಗುವಂತೆ ಮಾಡಬೇಕು,’’ ಎಂದರು.
‘‘ರಾಜ್ಯದಲ್ಲಿ80 ಸಾವಿರ ತಂಬಾಕು ಬೆಳೆಗಾರರಿದ್ದು, ಸರಿಯಾದ ಮಾರುಕಟ್ಟೆ ಬೆಲೆ ಸಿಗದೆ ಅತಂತ್ರ ಸ್ಥಿತಿಯಲ್ಲಿದ್ದಾರೆ. ಅವರಿಗೆ ಸೂಕ್ತ ಬೆಲೆ ಒದಗಿಸಬೇಕು. ಹುಣಸೂರಿನಲ್ಲಿಈ ಹಿಂದೆ ಅತ್ಯುತ್ತಮವಾಗಿ ನಡೆಯುತ್ತಿದ್ದ ರೇಷ್ಮೆ ಮಾರುಕಟ್ಟೆ ಇತ್ತೀಚಿನ ಕೆಲವು ವರ್ಷಗಳಿಂದ ಪಾಳುಬಿದ್ದಿದೆ. ಕೂಡಲೇ ರೇಷ್ಮೆ ಮಾರುಕಟ್ಟೆಯನ್ನು ಚಾಲನೆಗೊಳಿಸಬೇಕು. ಪರವಾನಗಿ ಪಡೆದ ಭೂಮಾಪಕರ ಮುಷ್ಕರದಿಂದಾಗಿ ಸರ್ವೆ ಕಾರ್ಯ ಸ್ಥಗಿತಗೊಂಡು ರೈತರಿಗೆ ತೊಂದರೆಯಾಗಿದೆ. ಇದನ್ನು ಬಗೆಹರಿಸಲು ಮುಂದಾಗಬೇಕು,’’ ಎಂದು ಮನವಿ ಮಾಡಿದರು.
‘‘ಹುಣಸೂರು, ಪಿರಿಯಾಪಟ್ಟಣ, ಸರಗೂರು, ಕೆ.ಆರ್ .ನಗರ, ಸಾಲಿಗ್ರಾಮ ತಾಲೂಕುಗಳನ್ನು ಒಳಗೊಂಡ ಹುಣಸೂರು ಉಪ ವಿಭಾಗ ಕೇಂದ್ರವಾಗಿರುವುದರಿಂದ ಮೈಸೂರು ಗ್ರಾಮಾಂತರ ಜಿಲ್ಲೆಯನ್ನಾಗಿ ಘೋಷಣೆ ಮಾಡಿ ಹುಣಸೂರಿನ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಬೇಕು,’’ ಎಂದು ಕೋರಿದರು. ಸುದ್ದಿಗೋಷ್ಠಿಯಲ್ಲಿರಾಜಣ್ಣ, ಸದಾಶಿವರಾವ್ , ರಾಜಮ್ಮ ಇದ್ದರು.

