ವಿಕ ಸುದ್ದಿಲೋಕ ಯಾದಗಿರಿ ಮೊದಲು ದೂರು ಸಲ್ಲಿಸಿ ನಂತರ ಹಿಂಪಡೆದ ಹಾಗೂ ಸುಳ್ಳು ದೂರು ನೀಡಿದ 24 ಜನ ದೂರುದಾರರಿಗೆ 1,57,475 ರೂ. ದಂಡ ವಸೂಲಾತಿಗೆ ಜಿಪಂ ಸಿಇಒ ಲವೀಶ ಒರಡಿಯಾ ನೋಟಿಸ್ ಜಾರಿ ಮಾಡಿರುವ ಅಪರೂಪದ ಘಟನೆಗೆ ಜಿಲ್ಲೆಸಾಕ್ಷಿಯಾಗಿದೆ. ಈ ಕುರಿತು ಮಾಹಿತಿ ನೀಡಿರುವ ಸಿಇಒ, ಸುಳ್ಳು ದೂರು ನೀಡಿದವರಿಗೆ ಜಾರಿ ಮಾಡಿದ ನೋಟಿಸ್ ಗೆ ಉತ್ತರ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ. ಸಮಾಧಾನಕರ ಉತ್ತರ ಸಲ್ಲಿಸದಿದ್ದಲ್ಲಿಮುಂದೆ ಅವರು ಸಲ್ಲಿಸುವ ಯಾವುದೇ ದೂರನ್ನು ಪರಿಗಣಿಸದಂತೆ ಜಿಲ್ಲಾಪಂಚಾಯಿತಿ ಮತ್ತು ಅಧೀನ ಕಚೇರಿಗಳಲ್ಲಿದಾಖಲಿಸಲಾಗುವ ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ಎಚ್ಚರಿಸಿದ್ದಾರೆ. ಇತ್ತೀಚೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಿಗೆ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾಧ್ಯಕ್ಷ ಪ್ರಭುಗೌಡ ವಕ್ರಾಣಿ ದೂರು ಸಲ್ಲಿಸಿದಾಗ, ಸಚಿವರ ನಿರ್ದೇಶನದಂತೆ ತನಿಖಾ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ದೂರುದಾರ ದೂರು ಹಿಂಪಡೆದಿದ್ದಾರೆ. ಇದು ರಾಜ್ಯ ಸರಕಾರದ ಸಚಿವಾಲಯದ ಅಮೂಲ್ಯ ಸಮಯ ಮತ್ತು ಸಂಪನ್ಮೂಲಗಳ ಘೋರ ಅಪವ್ಯಯವಾಗಿದೆ. ಇಂತಹ ದುರ್ಬಳಕೆಯನ್ನು ತಡೆಯಲು ಭಾರತೀಯ ನ್ಯಾಯ ಸಂಹಿತೆ 2023ರ ಅನ್ವಯ ಕಾನೂನು ಕ್ರಮ ಕೈಗೊಳ್ಳಬಹುದಾಗಿದೆ. ಆದ್ದರಿಂದ, ಮೊದಲು ದೂರು ಸಲ್ಲಿಸಿ ನಂತರ ಹಿಂಪಡೆದ ಹಾಗೂ ಸುಳ್ಳು ದೂರು ನೀಡಿದ 24 ದೂರುದಾರರಿಗೆ ವಸೂಲಾತಿ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

