ಚಿತ್ರ:29ಬಿಡಿಆರ್ 5
ಬೀದರ್ ತಾಲೂಕಿನ ಶಮಶೀರನಗರದಲ್ಲಿನಂದಿ ಬಸವಣ್ಣ ಜಾತ್ರೆಯ ಪ್ರಯುಕ್ತ ಭವ್ಯ ರಥೋತ್ಸವ ಜರುಗಿತು
ಸಂಭ್ರಮದ ನಂದಿ ಬಸವಣ್ಣ ರಥೋತ್ಸವ
ವಿಕ ಸುದ್ದಿಲೋಕ ಬೀದರ್
ತಾಲ್ಲೂಕಿನ ಶಮಶೀರನಗರದಲ್ಲಿನಂದಿ ಬಸವಣ್ಣ ಜಾತ್ರೆ ನಿಮಿತ್ತ ಮಂಗಳವಾರ ಸಂಭ್ರಮ, ಸಡಗರದಿಂದ ರಥೋತ್ಸವ ನಡೆಯಿತು. ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಅಪಾರ ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾದರು. ದೇಗುಲದಿಂದ ಹೊರಟ ಪುಷ್ಪಾಲಂಕೃತ ರಥ ದೇಗುಲದ ಪರಿಸರದಲ್ಲಿಸಂಚರಿಸಿ ಪುನಃ ದೇಗುಲಕ್ಕೆ ಬಂದು ಸಮಾರೋಪಗೊ ಂಡಿತು. ರಥ ಸಂಚಾರ ಆರಂಭವಾಗುತ್ತಿದ್ದಂತೆಯೇ ಭಕ್ತರ ಜಯ ಘೋಷಗಳು ಮುಗಿಲು ಮುಟ್ಟಿದವು. ಬಣ್ಣ, ಬಣ್ಣ ಪಟಾಕಿ ಗಳು ಆಗಸದಲ್ಲಿಚಿತ್ತಾರ ಮೂಡಿಸಿದವು. ಭಕ್ತರು ರಥಕ್ಕೆ ಉತ್ತತ್ತಿ, ಪೇಡಾ ಎಸೆದು ಭಕ್ತಿ ಸಮರ್ಪಿಸಿದರು. ಪುರವಂತರ ಕುಣಿತ, ಡೊಳ್ಳು ಕುಣಿತ, ತಾಳೆಗಳ ಗರ್ಜನೆ, ಹಲಗೆ ಕುಣಿತ, ಭಜನೆ, ನಂದಿ ಕೋಲು, ವಿವಿಧ ಕಲಾ ತಂಡಗಳ ಪ್ರದರ್ಶನ ರಥೋತ್ಸವದ ಮೆರುಗು ಹೆಚ್ಚಿಸಿದವು. ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿ ವಿವಿಧ ರಾಜ್ಯಗಳ ಭಕ್ತರು ರಥೋತ್ಸವದಲ್ಲಿಪಾಲ್ಗೊಂಡಿದ್ದರು. ರಥೋತ್ಸವಕ್ಕೆ ಚಾಲನೆ ನೀಡಿದ ನೌಬಾದ್ ನ ಜ್ಞಾನ ಶಿವಯೋಗಾಶ್ರಮದ ಡಾ. ರಾಜಶೇಖರ ಶಿವಾಚಾರ್ಯರು ಮಾತನಾಡಿ, ಜಾತ್ರೆ, ಉತ್ಸವ, ಹಬ್ಬ ಹರಿದಿನಗಳು ಎಲ್ಲರನ್ನು ಒಂದುಗೂಡಿಸುತ್ತವೆ. ಸಮಾಜದಲ್ಲಿಶಾಂತಿ ಹಾಗೂ ಸೌಹಾರ್ದ ಬೆಳೆಸುತ್ತವೆ ಎಂದು ತಿಳಿಸಿದರು.
ದೇವಸ್ಥಾನದ ಪಂಚ ಕಮಿಟಿಯ ಅಧ್ಯಕ್ಷ ಶಿವರಾಜ ಪಾಟೀಲ,ಪೂಜಾರಿ ಚನ್ನಮಲ್ಲಯ್ಯ ಸ್ವಾಮಿ, ದೇವಸ್ಥಾನದ ಪದಾಧಿಕಾರಿಗಳು, ಗಣ್ಯರು, ಭಕ್ತರು ಪಾಲ್ಗೊಂಡಿದ್ದರು. ಪತಂಜಲಿ ಯೋಗ ಸಮಿತಿಯ ಜಿಲ್ಲಾಘಟಕದ ಅಧ್ಯಕ್ಷ ಯೋಗೇಂದ್ರ ಯದಲಾಪುರೆ ನಿರೂಪಿಸಿದರು.
**ಬಾಕ್ಸ್ **
ನಾನಾ ಕಾರ್ಯಕ್ರಮ
ಜಾತ್ರೆ ನಿಮಿತ್ತ ಮಂದಿರದಲ್ಲಿಪ್ರವಚನ, ವಿಶೇಷ ಅಭಿಷೇಕ, ರುದ್ರಾಭಿಷೇಕ, ಪಲ್ಲಕ್ಕಿ ಮೆರವಣಿಗೆ, ಅಗ್ನಿಪೂಜೆ, ಧರ್ಮಸಭೆ, ಕಳಸ ಹೊತ್ತ ಮಹಿಳೆಯರಿಂದ ಮೆರವಣಿಗೆ, ಕಳಸಾರೋಹಣ, ಭಜನೆ, ಸಂಗೀತ ದರ್ಬಾರ್ , ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಗಣೇಶ್ವರ ಮಹಾರಾಜರು ಸಿದ್ಧಾರೂಢರ ಮಹಾತ್ಮೆ ಪ್ರವಚನ ನಡೆಸಿಕೊಟ್ಟರು. ಜಹೀರಾಬಾದ್ ತಾಲ್ಲೂಕಿನ ಮಲ್ಲಯ್ಯಗಿರಿ ಆಶ್ರಮದ ಡಾ. ಬಸವಲಿಂಗ ಅವಧೂತರು, ಜೈ ಭಾರತ ಮಾತಾ ರಾಷ್ಟ್ರೀಯ ಸೇವಾ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಹವಾ ಮಲ್ಲಿನಾಥ ಮಹಾರಾಜ, ಬ್ಯಾಲಹಳ್ಳಿಯ ಕೈಲಾಸಗಿರಿ ಆಶ್ರಮದ ನಾಗಲಿಂಗಯ್ಯ ಸ್ವಾಮಿ ಆಶೀರ್ವಚನ ನೀಡಿದರು.

