ಕಡಬ ತಾಲೂಕಿನ ರಾಮಕುಂಜ ಗ್ರಾಮದ ಶಾರದಾ ನಗರದಲ್ಲಿಗುರುವಾರ ಮನೆಯೊಳಗೆ ವ್ಯಕ್ತಿಯೊಬ್ಬರ ಶವ ಕೊಳೆತ ಸ್ಥಿತಿಯಲ್ಲಿಪತ್ತೆಯಾಗಿದೆ.ಮೂಲತಃ ಕಡಬ ತಾಲೂಕಿನ ಆಲಂಕಾರು ಗ್ರಾಮ ಕಿನ್ನಿಗೋಳಿ ನಿವಾಸಿ ಸುಂದರ ಶೆಟ್ಟಿ(75) ಮೃತರು. ಅವರು ಕಳೆದ ಕೆಲವು ವರ್ಷಗಳಿಂದ ಶಾರದಾನಗರದಲ್ಲಿಸರಕಾರದಿಂದ ಮಂಜೂರಾದ ನಿವೇಶನದಲ್ಲಿಮನೆ ಮಾಡಿಕೊಂಡು ಪತ್ನಿಯೊಂದಿಗೆ ವಾಸವಾಗಿದ್ದರು. ಒಂದು ತಿಂಗಳ ಹಿಂದೆ ಅವರ ಪತ್ನಿ ಬೆಂಗಳೂರಿನಲ್ಲಿರುವ ಮಗನ ಮನೆಗೆ ತೆರಳಿದ್ದರು. ಹಾಗಾಗಿ ಸುಂದರ ಶೆಟ್ಟಿ ಒಬ್ಬರೇ ಮನೆಯಲ್ಲಿದ್ದರು. ಆ. 8ರಂದು ಅವರ ಹಿರಿಯ ಪುತ್ರ, ಹೊಸಮಠ ಸಿ.ಎ.ಬ್ಯಾಂಕ್ ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಸೋಮಸುಂದರ ಶೆಟ್ಟಿ ಶಾರದಾ ನಗರಕ್ಕೆ ತೆರಳಿ ತಂದೆಯನ್ನು ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿ ಬಂದಿದ್ದರು. ಬಳಿಕ ಅವರು ಕೇರಳಕ್ಕೆ ತೆರಳಿದ್ದರಿಂದ ಇತ್ತ ಗಮನ ಹರಿಸಲು ಸಾಧ್ಯವಾಗಿರಲಿಲ್ಲ. ಕಳೆದ 2-3 ದಿನಗಳಿಂದ ಮನೆಯ ಬಾಗಿಲು ಮುಚ್ಚಿರುವುದನ್ನು ಗಮನಿಸಿದ ಸ್ಥಳೀಯರು ಗುರುವಾರ ಮನೆಯ ಹತ್ತಿರ ಹೋದಾಗ ದುರ್ವಾಸನೆ ಬರುವುದು ಗೊತ್ತಾಗಿದೆ. ತಕ್ಷಣ ಸ್ಥಳೀಯರು ಸೋಮಸುಂದರ ಶೆಟ್ಟಿ ಅವರಿಗೆ ವಿಷಯ ತಿಳಿಸಿದ್ದಾರೆ. ಕಡಬ ಪೊಲೀಸರಿಗೆ ಮಾಹಿತಿ ನೀಡಿ ಸ್ಥಳಕ್ಕೆ ಭೇಟಿ ನೀಡಿದಾಗ ಮನೆಯೊಳಗಿಂದ ಚಿಲಕ ಹಾಕಿತ್ತು. ಒಳಗೆ ನೋಡಿದಾಗ ಕೊಳೆತ ಸ್ಥಿತಿಯಲ್ಲಿಶವ ಪತ್ತೆಯಾಗಿದೆ. ಚಾಪೆಯಲ್ಲಿಮಲಗಿದ ಸ್ಥಿತಿಯಲ್ಲಿದ್ದ ಶವವನ್ನು ಕಂಡು ಹೃದಯಾಘಾತದಿಂದ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಸೋಮಸುಂದರ ಶೆಟ್ಟಿ ನೀಡಿದ ದೂರಿನಂತೆ ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
(ಸುಂದರ ಶೆಟ್ಟಿ:ಫೋಟೋ ಫೈಲ್ ನೇಮ್ 13ಕೆಡಿಬಿ ಎಸ್ ಡಿಎಸ್ )