ಶಿರಸಿ: ನಂದಿನಿ ಪಶು ಆಹಾರದ ಗುಣಮಟ್ಟದಲ್ಲಿಯಾವುದೇ ವ್ಯತ್ಯಾಸವಾಗಿಲ್ಲ. ಕಲಬೆರಕೆ ಆಗಿದೆ ಎಂಬ ಗೊಂದಲ ಬಗ್ಗೆ ಜಿಲ್ಲೆಯ ಹಾಲು ಉತ್ಪಾದಕರು ಕಿವಿಗೊಡಬಾರದು ಎಂದು ಧಾರವಾಡ ಹಾಲು ಒಕ್ಕೂಟ ಉಪಾಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಧಾರವಾಡದ ರಾಯಾಪುರದಲ್ಲಿರುವ ಕರ್ನಾಟಕ ಹಾಲು ಮಹಾಮಂಡಳದ ಅಧಿಕೃತ ಪಶು ಆಹಾರ ತಯಾರಿಕಾ ಘಟಕದ ಮೂಲಕ ಜಿಲ್ಲೆಯಾದ್ಯಂತ ಇರುವ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಉತ್ತಮ ಗುಣಮಟ್ಟದ ನಂದಿನಿ ಪಶು ಆಹಾರ ಸರಬರಾಜು ಮಾಡಲಾಗುತ್ತಿದೆ. ಮೊದಲಿನಿಂದ ಇವತ್ತಿನವರೆಗೂ ಸಹ ನಂದಿನಿ ಪಶು ಆಹಾರದ ಗುಣಮಟ್ಟದಲ್ಲಿಯಾವುದೇ ವ್ಯತ್ಯಾಸಗಳಿಲ್ಲದೇ ಸಂಘಗಳಿಗೆ ಪೂರೈಕೆಯಾಗುತ್ತಿದೆ. ಧಾರವಾಡ ಒಕ್ಕೂಟದ ವ್ಯಾಪ್ತಿಯ ಹಾಲು ಉತ್ಪಾದಕರ ಸಹಕಾರ ಸಂಘಗಳ ಜೊತೆಗೆ, ದಕ್ಷಿಣಕನ್ನಡ, ಬೆಳಗಾವಿ, ವಿಜಯಪುರ ಮತ್ತು ಹಾವೇರಿಒಕ್ಕೂಟಗಳಿಗೂ ಸಹ ಇಲ್ಲಿಂದಲೇ ಸರಬರಾಜು ಮಾಡುತ್ತಾ ಬರಲಾಗಿದೆ. ಆದ್ದರಿಂದ ಜಿಲ್ಲೆಯ ಹಾಲು ಉತ್ಪಾದಕ ರೈತರು ಯಾವುದೇ ಗೊಂದಲಕ್ಕೆ ಒಳಗಾಗಬಾರದು. ನಂದಿನಿ ಪಶು ಆಹಾರವನ್ನೇ ಬಳಕೆ ಮಾಡಬಹುದಾಗಿದೆ ಎಂದು ಕೆಶಿನ್ಮನೆ ಮನವಿ ಮಾಡಿದ್ದಾರೆ.