ಪದ್ಯಕಾಲ
Contributed by: vidyarashmi.bhat@timesgroup.com|Vijaya Karnataka•
ಸರ್ವನಾಮ
--ನನ್ನನ್ನು ‘ನೀನು’ ಎಂದರೂ,
ನಿನ್ನನ್ನು ‘ನಾನು’ ಎಂದರೂ,
ನಾನು ಮತ್ತು ನೀನು
ನಾವೇ ಆಗಿರುತ್ತೇವೆ.
ಸರ್ವನಾಮಗಳೆಲ್ಲಹಾಗೆಯೇ.
‘ನಾನು’ ಒಂದು ಉಚ್ಚಾರ ಮಾತ್ರವಲ್ಲ,
ಅಹಂ ಕೂಡ.
‘ನೀನು’ ಒಂದು ಸಂಬೋಧನೆಯಷ್ಟೇ ಅಲ್ಲ,
ಇನ್ನೊಂದು ಆತ್ಮ.
‘ಅವನು’, ‘ಅವಳು’, ‘ಅವರು’, ‘ಅದು’ -
ಅಂತರವನ್ನು ಹೇಳಲು
ಕಂಡುಕೊಂಡ ಮಾಪಕಗಳು
ನದಿ ತನ್ನನ್ನು ‘ನಾನು’ ಎನ್ನುವುದಿಲ್ಲ;
ಸಮುದ್ರವನ್ನು ‘ನೀನು’ ಎಂದು ಧಿಕ್ಕರಿಸುವುದಿಲ್ಲ;
ಹರಿಯುವುದೇ ಅದರ ಗುರುತು.
ಮರ ತನ್ನ ನೆರಳನ್ನು
ಯಾರ ಹೆಸರಿಗೂ ಬರೆಯುವುದಿಲ್ಲ;
ಗಾಳಿ ಯಾವ ಸರ್ವನಾಮವನ್ನೂ ಕಡೆಗಣಿಸುವುದಿಲ್ಲ.
ಚಿತೆಯ ಬೆಂಕಿ ಕೇಳುವುದಿಲ್ಲ,
‘ಇವನು ಯಾರು?’ ‘ಅವನು ಯಾರು?’ ಇತ್ಯಾದಿ.
ಅದು ಹೆಸರನ್ನೂ ಸುಡುತ್ತದೆ;
ಸರ್ವನಾಮವನ್ನೂ ಸುಡುತ್ತದೆ;
ಅಹಂಕಾರವನ್ನೂ ಸುಡುತ್ತದೆ,
ಆಗ ಅದು ಸರ್ವರ ನಾಮವಾಗುತ್ತದೆ...
-ರೇವಣಸಿದ್ಧಪ್ಪ ಜಿ.ಆರ್ .