ಮಗು ಅನುಮಾನಾಸ್ಪದ ಸಾವು

Contributed byGirish J.R|Vijaya Karnataka
Vijay Karnataka
-ಪೋಷಕರ ವಿರುದ್ಧ ದೌರ್ಜನ್ಯದ ಆರೋಪ: ಪ್ರಕರಣ ದಾಖಲು

-ಕಾರಣ ನಿಗೂಢ
ವಿಕ ಸುದ್ದಿಲೋಕ ಬೆಂಗಳೂರು

ಬಾಣಸವಾಡಿ ಬಳಿಯ ಆರ್ .ಎಸ್ .ಪಾಳ್ಯದ ಇಂದಿರಾ ಸ್ಟ್ರೀಟ್ ನಲ್ಲಿ2 ವರ್ಷದ ಹೆಣ್ಣು ಮಗು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಪೋಷಕರೇ ಮಗುವಿನ ಮೇಲೆ ದೌರ್ಜನ್ಯ ನಡೆಸಿರುವ ಆರೋಪ ಕೇಳಿಬಂದಿದೆ.

ಇಂದಿರಾ ಸ್ಟ್ರೀಟ್ ನಿವಾಸಿಗಳಾದ ಜೇಸನ್ ಅಂಥೋಣಿ ಮತ್ತು ರೋಸ್ಲಿನ್ ದಂಪತಿಯ ಮಗು ಕಾರ್ಲೆಟ್ ಡೈಸಿ ಸಾವನ್ನಪ್ಪಿರುವ ಮಗು. ಈ ಸಂಬಂಧ ಅಂಥೋಣಿ ದಂಪತಿಯ ಸ್ನೇಹಿತೆ ಸಮೃದ್ಧಿ ಎಂಬುವವರು ದೂರು ಕೊಟ್ಟಿದ್ದು, ಬಾಣಸವಾಡಿ ಠಾಣೆ ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಅಂಥೋಣಿ ಮತ್ತು ರೋಸ್ಲಿನ್ ಕೆಲ ವರ್ಷಗಳಿಂದ ಇಂದಿರಾ ಸ್ಟ್ರೀಟ್ ನ ಮನೆಯಲ್ಲಿಸಹ ಜೀವನ ನಡೆಸುತ್ತಿದ್ದರು. ಅವರಿಗೆ 2 ವರ್ಷಗಳ ಹಿಂದೆ ಜನಿಸಿದ್ದ ಮಗುವಿಗೆ ಕಾರ್ಲೆಟ್ ಡೈಸಿ ಎಂದು ನಾಮಕರಣ ಮಾಡಲಾಗಿತ್ತು. ಬುಧವಾರ ಮನೆಯಲ್ಲಿಮಗುವಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ನಂತರ ಮಗುವನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಆಸ್ಪತ್ರೆ ತಲುಪುವಷ್ಟರಲ್ಲೇ ಮಗು ಮೃತಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘‘ಮೃತ ಮಗುವಿನ ದೇಹದ ಮೇಲೆ ಹಲ್ಲೆಯ ಗಾಯದ ಗುರುತುಗಳಿವೆ. ಮಗುವಿನ ಸಾವಿನ ಬಗ್ಗೆ ಅನುಮಾನವಿದ್ದು, ತನಿಖೆ ನಡೆಸಬೇಕೆಂದು ಅಂಥೋಣಿ ದಂಪತಿಯ ಸ್ನೇಹಿತೆ ಸಮೃದ್ಧಿ ದೂರು ಕೊಟ್ಟಿದ್ದಾರೆ. ಮಗುವಿನ ಸಾವಿಗೆ ನಿಖರ ಕಾರಣ ಗೊತ್ತಾಗಿಲ್ಲ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಸಾವಿನ ಕಾರಣ ಗೊತ್ತಾಗಲಿದೆ ಎಂದು ಪೊಲೀಸರು ಹೇಳಿದ್ದಾರೆ.

ದೂರುದಾರೆ, ಪತಿ ವಿರುದ್ಧ ಆರೋಪ:

‘‘ಮಗುವಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಾಗ ಪತಿಯ ಸ್ನೇಹಿತೆ ಸಮೃದ್ಧಿ, ಸಹಾಯ ಮಾಡಲು ಮನೆಗೆ ಬಂದಿದ್ದಳು. ಆಕೆ ಮಗುವಿಗೆ 5 ವರ್ಷ ತುಂಬುವುದಕ್ಕೂ ಮುನ್ನ ವೆಂಟಿಲೇಷನ್ ಮಾಸ್ಕ್ ನೀಡಬಾರದೆಂದು ಹೇಳಿ, ಬಿಸಿ ನೀರಿಗೆ ವಿಕ್ಸ್ ಬೆರೆಸಿ ಆವಿ ಹಿಡಿಸಲು ಮುಂದಾದಳು. ಆಗ ಭಯಬಿದ್ದ ಮಗು ತನಗೆ ಆವಿ ಬೇಡವೆಂದು ಚೀರಿದಾಗ ಆಕೆ ಮಗುವನ್ನು ತಳ್ಳಿದ್ದಳು. ಇತ್ತ ಪತಿ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲು ತನ್ನ ಬಳಿ ಹಣವಿಲ್ಲಎಂದು ನಿರಾಕರಿಸಿದರು. ಮಾದಕ ವ್ಯಸನದ ಗೀಳು ಹೊಂದಿರುವ ಸಮೃದ್ಧಿಯ ವರ್ತನೆಯಿಂದ ಹೆದರಿದ ಮಗುವಿಗೆ ಆಘಾತವಾಯಿತು. ಪತಿ ಮತ್ತು ಆತನ ಗೆಳತಿಯೇ ಮಗುವಿನ ಸಾವಿಗೆ ಕಾರಣ,’’ ಎಂದು ರೋಸ್ಲಿನ್ ಆರೋಪಿಸಿದ್ದಾರೆ.

ಮತ್ತೊಂದೆಡೆ ಮಗುವಿನ ತಂದೆ ಜೇಸನ್ ‘‘ಮಗುವಿಗೆ ಹುಟ್ಟಿನಿಂದಲೇ ಉಸಿರಾಟದ ಸಮಸ್ಯೆಯಿತ್ತು. ನನಗೂ ಉಸಿರಾಟದ ಸಮಸ್ಯೆ ಇದ್ದುದು ಅನುವಂಶೀಯವಾಗಿ ಮಗುವಿಗೂ ಬಂದಿರಬಹುದು. ಊಟ ಮಾಡಿಸುವಾಗ ಉಸಿರಾಟದ ಸಮಸ್ಯೆಯಾಗಿ ಮಗು ಮೃತಪಟ್ಟಿದೆ. ಆಗ ನಾನು ಮನೆಯಲ್ಲಿಇರಲಿಲ್ಲ. ಪತ್ನಿ ರೋಸ್ಲಿನ್ ಹೊಡೆಯುತ್ತಿದ್ದ ಹಿನ್ನೆಲೆಯಲ್ಲಿಮಗುವಿನ ಕೈ ಹಾಗೂ ಮೈ ಮೇಲೆ ಗಾಯದ ಗುರುತುಗಳಾಗಿವೆ. ಮಗು ಮನೆಯಲ್ಲಿನಾಯಿಯ ಜತೆ ಆಟವಾಡುವಾಗಲೂ ಕೆಲವೊಮ್ಮೆ ತರಚಿದ ಗಾಯಗಳಾಗಿವೆ,’’ ಎಂದು ಹೇಳಿದ್ದಾರೆ.

ಕೆಮ್ಮಿನ ಸಿರಪ್ ಎಫೆಕ್ಟ್:

‘‘ಮಗುವಿಗೆ ಏನು ಊಟ ಕೊಟ್ಟಿದ್ದೀಯಾ ಎಂದು ರೋಸ್ಲಿನ್ ಗೆ ಕೇಳಿದಾಗ, ಆಕೆ ಇನ್ನೂ ಊಟ ಕೊಟ್ಟಿಲ್ಲ. ಏನು ಕೊಡಬೇಕೆಂದು ಗೊತ್ತಾಗುತ್ತಿಲ್ಲಎಂದು ಹೇಳಿದ್ದಳು. ಆಕೆ ಮಗುವಿಗೆ ಕೆಮ್ಮಿನ ಸಿರಪ್ ಕೊಟ್ಟಿದ್ದಳು. ಅದರಿಂದ ಉಸಿರಾಟದ ಸಮಸ್ಯೆ ಮತ್ತಷ್ಟು ಜಾಸ್ತಿಯಾಗಿತ್ತು. ಆಗ ಮನೆಯಲ್ಲೇ ಮಗುವನ್ನು ಉಪಚರಿಸಿ ನೆರೆಹೊರೆಯವರ ಸಹಾಯದಿಂದ ಆಸ್ಪತ್ರೆಗೆ ಕರೆದೊಯ್ದಿದ್ದೆ. ಮಗುವನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ಹೇಳಿದರು. ಮನೆಯಲ್ಲಿದ್ದ ನಾಯಿಯ ಜತೆ ಆಟವಾಡುತ್ತಿದ್ದ ಮಗುವಿನ ಮೈ ಮೇಲೆ ತರಚಿದ ಗಾಯಗಳಾಗಿದ್ದವು,’’ ಎಂದು ಸಮೃದ್ಧಿ ಸುದ್ದಿಗಾರರಿಗೆ ತಿಳಿಸಿದ್ದಾರೆ.