ಬನವಸೆ ದೇಶದ ಆ ಮಾಯೆ ಮುಂದೆ ಅಕ್ಕ ಮಹಾದೇವಿಯಾಗಿ ಬಂದು ಅಲ್ಲಮರ ಅನುಭವ ಮಂಟಪದಲ್ಲಿಅಧ್ಯಾತ್ಮದ ಶಿಖರವನ್ನೇರಿದಳು. ವೀರ ವಿರಾಗಿಣಿ, ವೈರಾಗ್ಯನಿಧಿಯಾಗಿ ಕಂಗೊಳಿಸಿದಳು ಎಂದು ಚಾಮರಸ ತನ್ನ ಪ್ರಭುಲಿಂಗಲೀಲೆಯಲ್ಲಿವರ್ಣಿಸುತ್ತಾನೆ ಎಂದು ಕಲ್ಯಾಣ ಆಶ್ರಮದ ಪ್ರವಚನ ಯೋಗಿ ಶ್ರೀ ಮಹಾಂತ ಸ್ವಾಮೀಜಿ ಹೇಳಿದರು.
ಜಯನಗರದ ಅನುಭವ ಮಂಟಪದಲ್ಲಿಬಸವ ಸಮಿತಿಯಿಂದ ಆಯೋಜನೆ ಮಾಡಿರುವ ಆಷಾಢ ಪ್ರವಚನದಲ್ಲಿಮಾತನಾಡಿದರು. ‘ಕಲ್ಯಾಣದ ಶರಣೆ ಮಾತೆ ಅಕ್ಕ ಮಹಾದೇವಿ , ಪಾರ್ವತಿ ಪ್ರತಿ ರೂಪ ನೀನು, ಎಲ್ಲಶರಣರ ಬೆಳಗಿದ ತಾಯಿ, ನಾಡಿಗೆ ಸಿರಿದೇವಿ, ಸುಮತಿ ನಿರ್ಮಲರ ಉಡುತಡಿ, ಶಿವಭಕ್ತರ ಮನೆಗೆ ಪಾರ್ವತಿಯ ಪ್ರತಿರೂಪ ನೀನು ಕಳೆದೆ ಜಗತಾಪ, ನೀನೆ ಜಗದೀಪ’ ’ಧರೆಗಿಳಿದರಾ ಬಸವಾದಿ ಪ್ರಮಥರು’ ಎನ್ನುವ ಗತಿಯಲ್ಲಿ ಚಾಮರಸನು ಶರಣೆ ಅಕ್ಕಮಹಾದೇವಿಯನ್ನು ಸ್ತ್ರೀ ಕುಲದ ಮುಕುಟಮಣಿ, ಅಪೂರ್ವ ಅನುಭಾವಿ, ಚನ್ನಮಲ್ಲಿಕಾರ್ಜುನಯ್ಯನ ಕದಳಿ ಕಂಡ ದೇವಿ ಎಂದು ಕೊಂಡಾಡಿದ್ದಾರೆ.
ಮನುವಾದದ ಮನುಜರು ಏನೇ ಹೇಳಬಹುದು. ಆದರೆ ಬಲ್ಲವರು ಮಹಿಳೆ ಕುರಿತಾಗಿ ಅತ್ಯಂತ ಅದ್ಭುತ ಚಿಂತನೆಗಳನ್ನು ವ್ಯಕ್ತಪಡಿಸಿದ್ದಾರೆ. ಮಾತೃದೇವೋಭವ, ಯತ್ರ ನಾರ್ಯಸ್ತೆ ರಮಂತೆ ಪೂಜ್ಯಂತೆ ಎಂದಿದ್ದಾರೆ. ‘ರಾಮನು ನನ್ನನ್ನು ಬಿಟ್ಟ ಹಾಗೆ ಧರ್ಮವನ್ನು ಬಿಡಬೇಡ’ ಎಂದು ಮೈದುನ ಲಕ್ಷ್ಮಣನಿಗೆ ಹೇಳುವ ಮಾತು ರಾಮಾಯಣ ಮಹಾಕಾವ್ಯದಲ್ಲಿಬರುತ್ತದೆ.
ಕವಿ ಜಿ.ಎಸ್ . ಶಿವರುದ್ರಪ್ಪನವರು ಆಕಾಶದ ದೀಪದಲ್ಲಿಚಂದ್ರ ತಾರೆ ತೊಟ್ಟಿಲಲ್ಲಿನಿನಗೆ ಬೇರೆ ಹೆಸರು ಬೇಕೆ? ಸ್ತ್ರೀ ಅಂದರೆ ಅಷ್ಟೇ ಸಾಕೆ? ಎಂದು ಬಣ್ಣಸಿದ್ದಾರೆ. ಅಮ್ಮ ಎಂಬ ಮಾತಿಗಿಂತ ಬೇರೆ ಮಂತ್ರ ಎಲ್ಲಿದೆ ಎಂದಿದ್ದಾರೆ.
ಹೀಗೆ ಚಾಮರಸನ ಪ್ರಭುಲಿಂಗಲೀಲೆ ಬಹಳ ವಿಶಿಷ್ಟ ಕಥನ. ಇದರಿಂದ ಆನಂದ ಅನುಭೂತಿ ದೊರೆಯುತ್ತದೆ. ಶರಣರ ಸನ್ಮಾರ್ಗದಲ್ಲಿನಡೆದ ಜೋಳದ ರಾಶಿ ದೊಡ್ಡನಗೌಡ, ಸಿದ್ಧರಾಮ ಜಂಬಲದಿನ್ನಿ, ಪಂಚಾಕ್ಷರಿ ಗವಾಯಿ ಮುಂತಾದ ಮಹನೀಯರು ಇಂದಿಗೂ ಸ್ಮರಣೀಯರು. ಚಾಮರಸ ಬರೆದ ಪ್ರಭುಲಿಂಗಲೀಲೆಯ ಗತಿ ಬಿಡಿಸಿ ಓದುವುದೇ ಬಹಳ ಕಷ್ಟ. ಅಂಥದ್ದರಲ್ಲಿಜಂಬಲದಿನ್ನಿಯವರು ’ಶ್ರೀ ಮದಮಲ ಜ್ಞಾನಿ’ ಹಾಡುವ ಮೂಲಕ ಪ್ರಭುವಿನ ಲೀಲಾ ವಿಲಾಸವನ್ನು ಮುಕ್ತ ಕಂಠದಿಂದ ಹಾಡಿ ಹೊಗಳಿದ್ದಾರೆ ಎಂದರು.