ಹುಲಿ ದಾಳಿಗೆ 4 ಜಾನುವಾರು ಬಲಿ
ಚಾಮರಾಜನಗರ: ತಾಲೂಕಿನ ಅಮಚವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ದಲಿಂಗಪುರ ಗ್ರಾಮದಲ್ಲಿಹುಲಿ ದಾಳಿ ಮುಂದುವರಿದಿದ್ದು, ಭಾನುವಾರ ಒಂದೇ ದಿನ 2 ಕುರಿ ಮತ್ತು 2 ಮೇಕೆಗಳು ಬಲಿಯಾಗಿವೆ.
ಗ್ರಾಮದ ಮಹೇಶ್ ಮತ್ತು ಶೇಷ ಎಂಬ ಸಹೋದರರಿಗೆ ಸೇರಿದ ಕುರಿ-ಮೇಕೆಗಳು ಮನೆಯ ಸಮೀಪದ ಜಮೀನಿನಲ್ಲಿಮೇಯುತ್ತಿದ್ದ ವೇಳೆ ಏಕಾಏಕಿ ಎರಗಿದ ಹುಲಿ, ನಾಲ್ಕನ್ನೂ ಕೊಂದುಹಾಕಿದೆ. ಅನತಿ ದೂರದಲ್ಲಿಕುಳಿತಿದ್ದ ಶೇಷ ಮತ್ತು ಸಂಬಂಧಿ ಮಾದೇಶ ಕೂಗಿಕೊಂಡಾಗ ಹುಲಿ ಕಾಡಿನತ್ತ ಓಡಿ ಹೋಗಿದೆ.
‘‘ಗ್ರಾಮದ ಸುತ್ತ ಹುಲಿ ಓಡಾಡುತ್ತಿದೆ. ಜನರ ಪ್ರಾಣಕ್ಕೆ ರಕ್ಷಣೆ ಇಲ್ಲ, ಜಾನುವಾರುಗಳಿಗೂ ಉಳಿಗಾಲವಿಲ್ಲ. ಅರಣ್ಯ ಇಲಾಖೆಯವರು ತಕ್ಷಣ ಬೋನು ಇರಿಸಿ, ಹುಲಿಯನ್ನು ಸೆರೆ ಹಿಡಿದು ನಮಗೆ ರಕ್ಷಣೆ ಕೊಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ’’ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತ್ತಪಡಿಸಿದ್ದಾರೆ.

