ಹನೂರು: ಹನೂರು ತಾಲೂಕಿನ ಕೆಂಪಯ್ಯನಹಟ್ಟಿ ಗ್ರಾಮದ ಪುಟಾಣಿ ಮಕ್ಕಳ ಕಾಳಜಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ‘ಮಾತೃ ಹೃದಯ’ದ ಸ್ಪಂದನೆಯಿಂದಾಗಿ ಚಾಮರಾಜನಗರ ಜಿಲ್ಲೆಯ ಒಂದು ದೊಡ್ಡ ನೀರಾವರಿ ಸಮಸ್ಯೆಗೆ ಪರಿಹಾರ ಸಿಕ್ಕಿದೆ. ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಕುರಿತು 5ನೇ ತರಗತಿ ವಿದ್ಯಾರ್ಥಿನಿ ವರ್ಣಿಕಾ ಬರೆದ ಪತ್ರಕ್ಕೆ ಓಗೊಟ್ಟಿರುವ ಸರಕಾರ, 490 ಕೋಟಿ ರೂ. ಮೊತ್ತದ ‘ಉಡುತೊರೆಹಳ್ಳ ನೀರಾವರಿ ಯೋಜನೆ ’ಯನ್ನು ಬಜೆಟ್ ನಲ್ಲಿಘೋಷಿಸಿದೆ. ಕಳೆದ ವರ್ಷ ಜುಲೈನಲ್ಲಿಕೆಂಪಯ್ಯನಹಟ್ಟಿ ಗ್ರಾಮದ 5ನೇ ತರಗತಿ ವಿದ್ಯಾರ್ಥಿನಿ ವರ್ಣಿಕಾ ಮುಖ್ಯಮಂತ್ರಿಗಳಿಗೆ ಸುದೀರ್ಘ ಪತ್ರ ಬರೆದಿದ್ದಳು. ‘‘ನಮ್ಮ ಊರಲ್ಲಿನೀರೇ ಇಲ್ಲ, 1000 ಅಡಿ ಬೋರ್ ವೆಲ್ ಕೊರೆದರೂ ನೀರು ಸಿಗುತ್ತಿಲ್ಲ. ಇದರಿಂದಾಗಿ ನನ್ನ ತಂದೆ-ತಾಯಿ ಊರು ಬಿಟ್ಟು ವಲಸೆ ಹೋಗುವ ಪರಿಸ್ಥಿತಿ ಬಂದಿದೆ. ಪ್ರಾಣಿ-ಪಕ್ಷಿಗಳಿಗೂ ಕುಡಿಯಲು ಹನಿ ನೀರಿಲ್ಲ,’’ ಎಂದು ತನ್ನ ಅಳಲನ್ನು ತೋಡಿಧಿಕೊಂಡಿದ್ದಳು. ಈ ಕುರಿತು ‘ವಿಜಯ ಕರ್ನಾಟಕ’ ವಿಶೇಷ ವರದಿ ಪ್ರಕಟಿಸಿ ಸರಕಾರದ ಗಮನ ಸೆಳೆದಿತ್ತು. ಇದಕ್ಕೆ ಸ್ಪಂದಿಸಿರುವ ಮುಖ್ಯಮಂತ್ರಿ, ನೀರಾವರಿ ಯೋಜನೆ ಘೋಷಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿಗಳು ತಮ್ಮ ಎಕ್ಸ್ ನಲ್ಲಿ ‘‘ಅಹವಾಲು ಸಲ್ಲಿಸಿದ ಮಕ್ಕಳ ಧ್ವನಿ ಎಳೆಯದಾದರೂ ಅದನ್ನು ಮುಕ್ತವಾಗಿ ಆಲಿಸಿ, ಸಕಾರಾತ್ಮಕವಾಗಿ ಸ್ಪಂದಿಸುವ ತಾಯಿ ಹೃದಯ ಸರಕಾರ ನಮ್ಮದು. ಈ ಘೋಷಣೆಗಾಗಿ ಪುಟಾಣಿ ಮಕ್ಕಳು ಸಲ್ಲಿಸಿರುವ ಧನ್ಯವಾದವನ್ನೂ ಅತ್ಯಂತ ಪ್ರೀತಿಯಿಂದ ಸ್ವೀಕರಿಸಿದ್ದೇನೆ. ನನ್ನ ಮತ್ತು ನಮ್ಮ ಸರಕಾರದ ಮೇಲೆ ವಿಶ್ವಾಸವಿಟ್ಟು, ಕಷ್ಟವನ್ನು ನನ್ನ ಗಮನಕ್ಕೆ ತಂದು ಸಾವಿರಾರು ಕುಟುಂಬಗಳ ಭವಿಷ್ಯ ಬದಲಾಗಲು ಕಾರಣರಾದ ಪುಟಾಣಿಗಳಿಗೂ ಪ್ರೀತಿತುಂಬಿದ ಅಪ್ಪುಗೆಗಳು,’’ ಎಂದು ಹೇಳಿದ್ದಾರೆ. ಇದೀಗ ರಾಜ್ಯ ಬಜೆಟ್ ನಲ್ಲಿಕಾವೇರಿ ನದಿಯಿಂದ ಕೆರೆ-ಕಟ್ಟೆಗಳನ್ನು ತುಂಬಿಸುವ ‘ಉಡುತೊರೆಹಳ್ಳ ನೀರಾವರಿ ಯೋಜನೆ’ಗೆ 490 ಕೋಟಿ ರೂ.ಅನುದಾನ ಘೋಷಣೆ ಮಾಡಲಾಗಿದ್ದು, ಆ ಯೋಜನೆಗೆ ಕೆಂಪಯ್ಯನಹಟ್ಟಿ ಮಕ್ಕಳ ಪತ್ರವೇ ಕಾರಣ ಎಂಬುದಾಗಿ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಎಕ್ಸ್ ’ ನಲ್ಲಿಬರೆದುಕೊಂಡಿದ್ದಾರೆ.

