ವಿಕ ಸುದ್ದಿಲೋಕ ಕಲಬುರಗಿ ‘ ನಮ್ಮೂರ ಶಾಲೆ ಉಳಿಸಿ ’ ಎಂಬ ಘೋಷಣೆಯಡಿ ಕಲ್ಯಾಣ ಕರ್ನಾಟಕ ವಲಯ ಮಟ್ಟದ ಬೃಹತ್ ಸಮಾವೇಶ ಮಾ.14ರಂದು ಡಾ.ಎಸ್ .ಎಂ.ಪಂಡಿತ ರಂಗದಲ್ಲಿಹಮ್ಮಿಕೊಳ್ಳಲಾಗಿದೆ ಎಂದು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ ಜಿಲ್ಲಾಅಧ್ಯಕ್ಷ ತುಳಜಾರಾಮ್ ಎನ್ .ಕೆ.ತಿಳಿಸಿದರು. ನಗರದ ಪತ್ರಿಕಾ ಭವನದಲ್ಲಿಬುಧವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದರು. ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್ ) ಹೆಸರಲ್ಲಿಹಳ್ಳಿಗಳಲ್ಲಿನ ಶಾಲೆಗಳನ್ನು ಸರಕಾರ ಮುಚ್ಚುತ್ತಿದೆ. ಕಲ್ಯಾಣ ಕರ್ನಾಟಕ ಭಾಗದ ಪ್ರದೇಶಾಭಿವೃದ್ಧಿ ಮಂಡಳಿಗೆ ಈ ಭಾಗದ ಅಭಿವೃದ್ಧಿಗಾಗಿ ಬಳಸಬೇಕಿದ್ದ ಅನುದಾನವನ್ನು ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ನಿರ್ಮಾಣಕ್ಕೆ ಬಳಸಲಾಗುತ್ತಿದೆ. ಇಂಗ್ಲಿಷ್ ಮಾಧ್ಯಮ ಹೆಸರಲ್ಲಿಗ್ರಾಮೀಣ ಭಾಗದ ಸರಕಾರಿ ಶಾಲೆಗಳನ್ನೇ ಮುಚ್ಚಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಎಐಡಿಎಸ್ ಒ ರಾಜ್ಯ ಉಪಾಧ್ಯಕ್ಷೆ ಅಭಯ ದಿವಾಕರ್ ಮಾತನಾಡಿ, ಕೆಪಿಎಸ್ ಶಾಲೆಗಳನ್ನು ನಿರ್ಮಿಸಲಾಗುತ್ತಿದೆ. ಆದರೆ, ಇವುಗಳ ನಿರ್ವಹಣೆಯನ್ನು ಖಾಸಗಿಯವರಿಗೆ ಹೊರಗುತ್ತಿಗೆ ನೀಡುವುದು ಇವರ ಉದ್ದೇಶವಾಗಿದೆ. ಜನರ ತೆರಿಗೆ ಹಣದಿಂದ ಆರಂಭವಾಗುವ ಶಾಲೆ ನಂತರ ಉದ್ಯಮಿಗಳ ಕೈಗೆ ನೀಡುವುದು ಇವರ ಉದ್ದೇಶವಾಗಿದೆ ಎಂದು ಹೇಳಿದರು. ಮಾ.14ರಂದು ನಡೆಯುವ ಸಮಾವೇಶದಲ್ಲಿಶಿಕ್ಷಣ ತಜ್ಞರು, ಸಾಮಾಜಿಕ ಕಾರ್ಯಕರ್ತರು, ಹೋರಾಟಗಾರರು, ಜನಪರ ಸಂಘಟನೆಗಳ ಮುಖಂಡರು, ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ರಾಜ್ಯ ಕಚೇರಿ ಕಾರ್ಯದರ್ಶಿ ಮಹಾಂತೇಶ ಬೀಳೂರ, ಜಿಲ್ಲಾ ಕಾರ್ಯದರ್ಶಿ ವೆಂಕಟೇಶ ದೇವದುರ್ಗ ಉಪಸ್ಥಿತರಿದ್ದರು.

