ಅಂಕನಹಳ್ಳಿ ಡೇರಿ ಸದಸ್ಯರಿಗೆ ಡಬಲ್ ಬೋನಸ್

Contributed byraju.manjunath67@gmail.com|Vijaya Karnataka

ರಾಮನಗರ ತಾಲೂಕಿನ ಅಂಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘವು ಯುಗಾದಿ ಹಬ್ಬದ ಪ್ರಯುಕ್ತ ಹಾಲು ಉತ್ಪಾದಕರಿಗೆ ವಿಶೇಷ ಬೋನಸ್ ಘೋಷಿಸಿದೆ. ಲಾಭದ ಹಣದಲ್ಲಿ ಲೀಟರ್‌ಗೆ ಒಂದು ರೂಪಾಯಿ ಪ್ರೋತ್ಸಾಹಧನವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತಿದೆ. ಮಾವು ಫಸಲು ನಷ್ಟ ಮತ್ತು ಮೇವಿನ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ರೈತರಿಗೆ ಇದು ಆರ್ಥಿಕ ನೆರವಾಗಲಿದೆ. ಸಂಘವು 167 ರೈತರಿಗೆ ಒಟ್ಟು 9,78,738 ರೂಪಾಯಿಗಳನ್ನು ವಿತರಿಸುತ್ತಿದೆ.

ankanahalli dairy farmers receive ugadi bonus financial support

ವಿಕ ಸುದ್ದಿಲೋಕ ರಾಮನಗರ

ಬೆಂಗಳೂರು ಹಾಲು ಒಕ್ಕೂಟ (ಬಮೂಲ್ ) ಮಾದರಿಯಲ್ಲೇ ತಾಲೂಕಿನ ಲಾಭದಾಯಕ ಅಂಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ , ಹಾಲು ಉತ್ಪಾದಕರಿಗೆ ಯುಗಾದಿ ಬೋನಸ್ ನೀಡುತ್ತಿದೆ.

ಈ ಕುರಿತು ಕೈಲಾಂಚ ಹೋಬಳಿಯ ಅಂಕನಹಳ್ಳಿ ಡೇರಿ ಕಚೇರಿಯಲ್ಲಿಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿಮಾಹಿತಿ ನೀಡಿದ ಸಂಘದ ಅಧ್ಯಕ್ಷೆ ಪವಿತ್ರ ಎಸ್ . ಮಹೇಶ್ ಅವರು, ಯುಗಾದಿ ಹಬ್ಬ ಹಾಗೂ ಮಾವು ಫಸಲು ನಾಶವಾಗುವ ಸಂದರ್ಭದಲ್ಲಿಹೈನುಗಾರರಿಗೆ ನೆರವಾಗಲು ಸಂಘದಿಂದ ಲೀಟರ್ ಹಾಲಿಗೆ ಒಂದು ರೂ. ಪ್ರೋತ್ಸಾಹಧನ ಹೆಚ್ಚಾಗಿ ವಿತರಣೆ ಮಾಡಲಾಗುತ್ತಿದೆ ಎಂದರು.

ರೈತರಿಗೆ ಸ್ಥಳೀಯ ಹಾಲು ಉತ್ಪಾದಕರ ಸಹಕಾರ ಸಂಘಗಳೇ ಆರ್ಥಿಕವಾಗಿ ಪ್ರಗತಿ ಸಾಧಿಸಲು ದಾರಿಯಾಗಿವೆ. ಈ ವರ್ಷ ಉತ್ತಮವಾಗಿ ಮಾವು ಫಸಲು ಕೂಡ ಬಂದಿಲ್ಲಇದರಿಂದ ರೈತರಿಗೆ ಆರ್ಥಿಕ ನಷ್ಟ ಉಂಟಾಗುತ್ತಿದೆ. ಹೈನುಗಾರಿಕೆಗೂ ಕೂಡ ಮಳೆ ಅಭಾವದಿಂದ ಹಸಿರು ಮೇವು, ಜಾನುವಾರು ಫೀಡ್ ಮೇವಿನ ಬೆಲೆ ದುಪ್ಪಟ್ಟಾಗಿದೆ.

ಒಂದು ಕಂತೆ ಮೇವಿನ ಬೆಲೆ 300 ರೂ. ತಲುಪಿದೆ. ಯುಗಾದಿ ಹಬ್ಬವೂ ಇರುವ ಕಾರಣ ಸಂಘದಿಂದ ರೈತರಿಗೆ ನೆರವಾಗಲು ಒಂದು ರೂ. ಪ್ರೋತ್ಸಾಹಧನ ನೀಡಲಾಗುತ್ತಿದೆ. ಸಂಘ ಪ್ರತೀ ವರ್ಷ 14 ರಿಂದ 15 ಲಕ್ಷದವರೆಗೆ ಲಾಭಗಳಿಸುತ್ತಾ ಬರುತ್ತಿದೆ. ಬಂದ ಲಾಭದ ಹಣದಲ್ಲಿಪ್ರತೀ ವರ್ಷ ಬೋನಸ್ ವಿತರಣೆ ಮಾಡುತ್ತಾ ಬರಲಾಗಿದೆ ಎಂದರು.

ಈ ವರ್ಷ ವಿಶೇಷವಾಗಿ ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಅವರು ಪ್ರೇರಣೆಯಿಂದ ಸಂಘಕ್ಕೆ 167 ಹಾಲು ಉತ್ಪಾದಕ ರೈತರು 9,78,738 ಲೀಟರ್ ಹಾಲು ಸರಬರಾಜು ಮಾಡಿದ್ದಾರೆ. ಅವರಿಗೆ ಯುಗಾದಿ ಹಬ್ಬದ ವಿಶೇಷವಾಗಿ ಸಂಘದ ಲಾಭದ ಹಣದಲ್ಲಿಲೀಟರ್ ಹಾಲಿಗೆ ತಲಾ 1 ರೂ.ನಂತೆ ಒಟ್ಟು 9,78738 ರೂ. ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಸಂಘದಿಂದ ಇಂದೇ ವರ್ಗಾವಣೆ ಮಾಡಲಾಗುತ್ತಿದೆ. ಜತೆಗೆ ಸಿಬ್ಬಂದಿಗಳಿಗೂ ಕೂಡ ತಲಾ 5 ಸಾವಿರದಂತೆ ಮೂರು ಸಿಬ್ಬಂದಿಗೆ ವಿಶೇಷವಾಗಿ ನೀಡಲಾಗುತ್ತಿದೆ ಎಂದರು.

ಸಂಘದ ಲಾಭದಲ್ಲಿನೀಡುತ್ತಿರುವ ಲೀಟರ್ ಹಾಲಿಗೆ ಒಂದು ರೂ. ಹಣ ರೈತರಿಗೆ ಬಹಳಷ್ಟು ಉಪಯುಕ್ತವಾಗಲಿದೆ. ಸಂಘ ಬಿಡಿಸಿಸಿ ಬ್ಯಾಂಕ್ ಮತ್ತು ಇತರೆ ಕಡೆ ಸುಮಾರು 50 ಲಕ್ಷದಷ್ಟು ನಗದನ್ನು ಎಫ್ ಡಿ ಇಟ್ಟಿದೆ. ಲಾಭದಾಯಕವಾಗಿ ಮನ್ನಡೆಯುತ್ತಿರುವ ಕಾರಣ ಆಡಳಿತ ಮಂಡಳಿ ಒಪ್ಪಿಗೆಯಂತೆ ಹಾಲು ಉತ್ಪಾದಕರ ರೈತರಿಗೆ ಈ ಒಂದು ಸಮಯದಲ್ಲಿನೆರವಾಗಲಾಗುತ್ತಿದೆ ಎಂದು ತಿಳಿಸಿದರು.

ಸಂಘದ ಉಪಾಧ್ಯಕ್ಷ ಡಿ. ನಾಗರಾಜು, ನಿರ್ದೇಶಕರಾದ ಬಿ. ಚಂದ್ರು, ಎ. ಗೋಪಿ, ಕೆ. ಶಿವರಾಮು, ಕೆ. ರಮೇಶ್ , ಎಲ್ . ರಾಮಯ್ಯ, ಪಿ. ರಮೇಶ್ , ಕಾರ್ಯದರ್ಶಿ ಜಿ. ಯೋಗಾನಂದ, ಹಾಲು ಪರೀಕ್ಷಕ ಕೆಂಪೇಗೌಡ, ಎಸ್ . ಪ್ರಸಾದ್ ಇದ್ದರು.

ಫೋಟೊ:

16ಆರ್ ಎನ್ ಆರ್ ಎಂ3:

ರಾಮನಗರ ತಾಲೂಕಿನ ಅಂಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿಸುದ್ದಿಗೋಷ್ಠಿ ನಡೆಯಿತು.