ತೈಲ ಬೆಲೆ ಹೆಚ್ಚಳ ಸಾಧ್ಯತೆ | ಬಾಸ್ಮತಿ ಅಕ್ಕಿ ರಫ್ತಿಗೆ ಕುತ್ತು ಸಂಭವ | ಷೇರು ಮಾರುಕಟ್ಟೆ ಮತ್ತಷ್ಟು ಕುಸಿಯುವ ಭೀತಿ
ಟೆಹ್ರಾನ್ : ಅಮೆರಿಕ-ಇರಾನ್ ಸಂಘರ್ಷದಿಂದ ತೈಲ ಸರಬರಾಜಿನಲ್ಲಿಏರುಪೇರಾಗುವ ಆತಂಕ ಎದುರಾಗಿದೆ. ಹರ್ಮುಜ್ ಜಲಸಂಧಿ ಬಂದ್ ಆಗಿರುವ ಹಿನ್ನೆಲೆಯಲ್ಲಿಕಚ್ಚಾ ತೈಲ ಸಾಗಣೆಗೆ ಅಡ್ಡಿಯಾಗಿದೆ. ಈ ನಡುವೆ, ‘‘ಸಂಘರ್ಷದಿಂದ ಭಾರತಕ್ಕೆ ಹೆಚ್ಚಿನ ತೈಲ ಅಭಾವದ ಅಪಾಯವಿಲ್ಲ. ಮುಂದಿನ 74 ದಿನಗಳಿಗೆ ಸಾಕಾಗುವಷ್ಟು ತೈಲ ಸಂಗ್ರಹವಿದೆ,’’ ಎಂದು ಸರಕಾರ ಹೇಳಿಕೊಂಡಿದೆ.
‘‘ಕಾರ್ಯತಂತ್ರ ಭಾಗವಾಗಿ ಸಾಕಷ್ಟು ತೈಲ ಸಂಗ್ರಹ ಮಾಡಿಕೊಳ್ಳಲಾಗಿದೆ. ದೇಶಕ್ಕೆ ಅಗತ್ಯ ಇರುವ ತೈಲ ಪೂರೈಸಲು ಸಾಕಷ್ಟು ಕ್ರಮ ಕೈಗೊಳ್ಳಲಾಗಿದೆ. ಮುಂದಿನ 74 ದಿನಗಳ ಕಾಲ ದೇಶಿಯವಾಗಿ ಯಾವುದೇ ತೈಲದ ಸಮಸ್ಯೆ ಇಲ್ಲ. ಮಧ್ಯಪ್ರಾಚ್ಯದ ಸಂಘರ್ಷದಿಂದ ಉಂಟಾಗಿರುವ ಸವಾಲು, ಪರಿಣಾಮ ಎದುರಿಸಲು ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ. ಭವಿಷ್ಯದಲ್ಲಿಯುದ್ಧದ ಪರಿಸ್ಥಿತಿ ಅವಲೋಕಿಸಿ ತೈಲ ಸಮಸ್ಯೆಯಾಗದಂತೆ ಕ್ರಮ ವಹಿಸಲಾಗುವುದು,’’ ಎಂದು ಸರಕಾರದ ಮೂಲಗಳು ತಿಳಿಸಿವೆ.
ಆರ್ಥಿಕ ಸಂಕಟ?
ಅಮೆರಿಕ-ಇರಾನ್ ಸಂಘರ್ಷದಿಂದ ತೈಲ ಮಾರುಕಟ್ಟೆ ಅನಿಶ್ಚಿತತೆಗೆ ಒಳಗಾಗಿದೆ. ತೈಲ ಉತ್ಪಾದನೆ, ಸರಬರಾಜು ಏರುಪೇರಾಗಲಿದ್ದು, ಬೆಲೆ ಏರಿಕೆಗೂ ದಾರಿಯಾಗುವ ಅಪಾಯವಿದೆ. ಪರಿಣಾಮ ಭಾರತದಲ್ಲೂತೈಲ ಬೆಲೆ ಏರಿಕೆಯಾಗುವ ಸಾಧ್ಯತೆಗಳಿವೆ.
ಸಂಘರ್ಷದಿಂದ ಭಾರತದ ಬಾಸ್ಮತಿ ಅಕ್ಕಿ ರಫ್ತಿಗೂ ಬಿಸಿ ತಟ್ಟಲಿದೆ. ಯುದ್ಧದ ಪರಿಣಾಮ ಅಕ್ಕಿ ರಫ್ತಿಗೆ ಅಡ್ಡಿಯಾಗಿದೆ. ಸರಕು ಸಾಗಣೆ ಹಡಗು, ವಿಮಾನಗಳ ಸಂಚಾರ ಬಂದ್ ಆಗಿರುವ ಹಿನ್ನೆಲೆಯಲ್ಲಿಇರಾನ್ ವರ್ತಕರು ಖರೀದಿಸಿದ್ದ ಬಾಸ್ಮತಿ ಅಕ್ಕಿ ರಫ್ತು ಸ್ಥಗಿತಗೊಂಡಿದೆ. ಪರಿಣಾಮ ಬೆಲೆ ಕುಸಿತದ ಭೀತಿ ಕಾಡುತ್ತಿದೆ ಎಂದು ಅಕ್ಕಿ ರಫ್ತು ವರ್ತಕರು ಆತಂಕ ವ್ಯಕ್ತಪಡಿಸಿದ್ದಾರೆ.
ದೇಶದ ಷೇರುಮಾರುಕಟ್ಟೆಯಲ್ಲಿದೊಡ್ಡ ಮಟ್ಟದ ಕುಸಿತ ಉಂಟಾಗುವ ಸಂಭವವಿದೆ. ಬಂಗಾರ ಬೆಳ್ಳಿ ಬೆಲೆ ಏರಿಕೆ ನಾಗಲೋಟ ಮುಂದುವರಿಯುವ ಸೂಚನೆಗಳಿವೆ. ಪರಿಸ್ಥಿತಿ ಒಂದು ಅಂದಾಜಿನ ಪ್ರಕಾರ ಬೆಳ್ಳಿ ಬೆಲೆ ಕೆ.ಜಿ.ಗೆ 3 ಲಕ್ಷ ರೂ. ಗಡಿ ದಾಟುವ ನಿರೀಕ್ಷೆಗಳಿವೆ. ಚಿನ್ನದ ಬೆಲೆ 10 ಗ್ರಾಂಗೆ 1.68 ಲಕ್ಷ ರೂ.ಗಳಿಂದ 1.70 ಲಕ್ಷ ರೂ. ದಾಟುವ ಸಂಭವವಿದೆ.

