ವಿಕ ಸುದ್ದಿಲೋಕ ಹುಣಸೂರು ಹುಣಸೂರು-ಹನಗೋಡು ಮುಖ್ಯರಸ್ತೆ ಬಳಿಯ ರಾಮೇನಹಳ್ಳಿ ಬೆಟ್ಟಕ್ಕೆ ಹೊಂದಿಕೊಂಡಂತಿರುವ ಅಂಗಟಹಳ್ಳಿ ಗುಡ್ಡ ಕ್ಕೆ ಬೆಂಕಿ ಬಿದ್ದು ಹತ್ತಾರು ಎಕರೆ ಕುರುಚಲು ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದೆ. ಬುಧವಾರ ಸಂಜೆ ಸುಮಾರು 6.30ರ ವೇಳೆಗೆ ಗುಡ್ಡಕ್ಕೆ ಬೆಂಕಿ ಬಿದ್ದಿರುವುದು ಕಂಡುಬಂದು ತಟ್ಟೆಕೆರೆಯ ಸುರೇಶ್ , ಸುಂದರ ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಪ್ರಾದೇಶಿಕ ಅರಣ್ಯ ವಿಭಾಗದ ಡಿಆರ್ ಎಫ್ ಒ ಮಲ್ಲಿಕಾರ್ಜುನ್ , ಬೀಟ್ ಫಾರೆಸ್ಟರ್ ಗಳಾದ ಸಿದ್ದಪ್ಪ, ಉದಯ್ , ದಿವಾಕರ್ ಮತ್ತು ಹತ್ತು ಸಿಬ್ಬಂದಿ ದೌಡಾಯಿಸಿ ರಾತ್ರಿ 9ರ ವೇಳೆಗೆ ನಂದಿಸುವಲ್ಲಿಯಶಸ್ವಿಯಾಗಿದ್ದಾರೆ. ಅಂಗಟಹಳ್ಳಿ ಗುಡ್ಡ ಹಳ್ಳ-ಕೊಳ್ಳಗಳಿಂದ ಕೂಡಿದ್ದು, ಸ್ಥಳಕ್ಕೆ ಅಗ್ನಿಶಾಮಕ ವಾಹನ ತೆರಳಲೂ ಸಾಧ್ಯವಾಗಿರಲಿಲ್ಲ. ಆದರೆ, ಬೆಂಕಿಯನ್ನು ಅರಣ್ಯ ಸಿಬ್ಬಂದಿಯೇ ಜೀವದ ಹಂಗು ತೊರೆದು ನಂದಿಸಿರುವುದು ಗ್ರಾಮಸ್ಥರಲ್ಲಿದ್ದ ಆತಂಕ ದೂರ ಮಾಡಿದ್ದಾರೆ. ತಪ್ಪಿದ ಅನಾಹುತ: ಯಾರೋ ಕಿಡಿಗೇಡಿಗಳು ಗುಡ್ಡಕ್ಕೆ ಬೆಂಕಿ ಹಾಕಿರಬಹುದು ಎಂದು ಶಂಕಿಸಲಾಗಿದ್ದು, ತಕ್ಷಣಕ್ಕೆ ಬೆಂಕಿ ನಂದಿಸದಿದ್ದಲ್ಲಿರಾಮೇನಹಳ್ಳಿ ಬೆಟ್ಟ ಹಾಗೂ ಕಲ್ ಬೆಟ್ಟಕ್ಕೂ ಹರಡುವ ಭೀತಿ ಎದುರಾಗಿತ್ತು. ತಕ್ಷಣವೇ ಬೆಂಕಿ ನಂದಿಸುವ ಮೂಲಕ ಬಾರೀ ಅನಾಹತ ತಪ್ಪಿಸಿದ್ದಾರೆ.

