ವಿಕ ಸುದ್ದಿಲೋಕ ತುಮಕೂರು ಇತಿಹಾಸ ಪ್ರಸಿದ್ಧ ಕರಿಗಿರಿ ಕ್ಷೇತ್ರ ದೇವರಾಯನದುರ್ಗದ ಶ್ರೀ ಲಕ್ಷ್ಮೇ ನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿವಿಜೃಂಭಣೆಯಿಂದ ನಡೆಯಿತು. ಬ್ರಹ್ಮರಥೋತ್ಸವವು ಮಂಗಳವಾರ ಭಕ್ತಾದಿಗಳ ಹರ್ಷೋದ್ಘಾರದ ನಡುವೆ ಗರುಡ ಬಂದು ರಥವನ್ನು ಪ್ರದಕ್ಷಿಣೆ ಹಾಕಿದ ನಂತರ ವಿದ್ಯುಕ್ತವಾಗಿ ನೆರವೇರಿತು. ಮುಂಜಾನೆಯೇ ಸ್ವಾಮಿಗೆ ಅಭಿಷೇಕ ಮಾಡಲಾಯಿತು. ದೇವರು ಮತ್ತು ರಥಕ್ಕೆ ವಿವಿಧ ಬಗೆಯ ಹೂವುಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಮುಂಜಾನೆಯಿಂದಲೇ ವಿಶೇಷ ಧಾರ್ಮಿಕ ಪೂಜಾ ಕೈಂಕರ್ಯಗಳು ನೆರವೇರಿದವು. 7 ಗಂಟೆಯ ನಂತರ ಶ್ರೀ ಲಕ್ಷ್ಮೇನರಸಿಂಹಸ್ವಾಮಿ ಭಕ್ತರು ಮನೆಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಕೆಯಾದ ನಂತರ ರಥದ ಬಳಿ ಬಂದ ದೇವರನ್ನು ರಥಕ್ಕೆ ಕೂರಿಸಲಾಯಿತು. ರಥಕ್ಕೆ ಗರುಡ ಪ್ರದಕ್ಷಿಣೆ ಹಾಕಿದ ನಂತರ ಭಕ್ತರ ಜೈಕಾರ, ವೇದ ಘೋಷದೊಂದಿಗೆ ರಥವನ್ನು ಮುಂದಕ್ಕೆ ಎಳೆಯಲಾಯಿತು. ಭಕ್ತಾದಿಗಳು ರಥಕ್ಕೆ ಹೂ, ಬಾಳೆಹಣ್ಣು, ದವನ ಎಸೆಯುವ ಮೂಲಕ ತಮ್ಮ ಹರಕೆ ತೀರಿಸಿದರು. ಶಾಸಕ ಬಿ. ಸುರೇಶ್ ಗೌಡ, ಮಾಜಿ ಸಚಿವ ಸೊಗಡು ಶಿವಣ್ಣ, ಎಡಿಸಿ ಡಾ. ಎನ್ . ತಿಪ್ಪೇಸ್ವಾಮಿ, ಎಎಸ್ ಪಿ ಪುರುಷೋತ್ತಮ್ , ತಹಸೀಲ್ದಾರ್ ರಾಜೇಶ್ವರಿ ಶ್ರೀ ಲಕ್ಷ್ಮೇನರಸಿಂಹ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ರಥೋತ್ಸವಕ್ಕೆ ಚಾಲನೆ ದೊರೆಯಿತು. ಸಹಸ್ರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.

